Wednesday, August 27, 2008

ಚಿನ್ಮೂಲಾದ್ರಿ ಚಿತ್ರಗಳು

ಅತ್ತ ನೋಡೆ ಇತ್ತ ನೋಡೆ
ಚಿತ್ರಕಲ್ಲದುರ್ಗ ನೋಡೆ
ಹತ್ತಿ ನೋಡೆ ನಿಮ್ಮ ತವರೂರೋ
ಓ ನಿಲ್ಲಯ್ಯ ರಾಜ.


ಇದು ಗಾಳಿ ಗೋಪುರ


ಹಳೆಯ ಮುರುಘರಾಜೇಂದ್ರ ಮಠ


ಇದು ಕೋಟೆಯ ಮಧ್ಯ ಭಾಗ. ಎತ್ತರದ ದೀಪಸ್ತಂಭ ಮತ್ತು ಉಯ್ಯಾಲೆ
ಕಂಬವನ್ನೂ ಕಾಣಬಹುದು. ಬಲಭಾಗಕ್ಕೆ ಏಕನಾಥೇಶ್ವರಿ ದೇವಸ್ಥಾನವಿದೆ.


ಭದ್ರ ಕೊಟೆಯ ಒಂದು ಭಾಗ.


ಸಿದ್ಧಿವಿನಾಯಕ ದೇವಸ್ಥಾನ.


ಕೋಟೆಯ ಮೂರನೆ ಮುಖ್ಯದ್ವಾರ ಮುಂದೆ ಬಂದರೆ ಎದುರಾಗು ಮೆಟ್ಟಿಲುಗಳು


ಇದನ್ನು ಟೀಕಿನ ಬಾಗಿಲು ಎನ್ನುತ್ತಾರೆ. ಇರುವ ಏಳು
ಬಾಗಿಲುಗಳಲ್ಲಿ ಇದೇ ಸ್ವಲ್ಪ ಠಾಕುಟೀಕಾಗಿದೆ ಅನ್ನೋ ಕಾರಣಕ್ಕೆ.


ಇವೂ ಎರಡೂ ಗಾಳಿ ಗೋಪುರಗಳು..


ಮುರುಘಾಮಠದ ಮುಂದಿನ ಉಯ್ಯಾಲೆ ಕಂಬ


ಮುರುಘಾಮಠದ ಪಾರ್ಶ್ವ ನೋಟ.


ಟಂಕಸಾಲೆ.


ಎತ್ತರದ ನವಿಲು ಬಂದೆ ಮುಂದೆ ಕಾಣುವುದೇ ಗೋಪಾಲಸ್ವಾಮಿ ದೇವಸ್ಥಾನ.


ಇದು ಕೋಟೆ ಎತ್ತರದ ಸ್ಥಳಗಳಲ್ಲಿ ಒಂದು, ತುಪ್ಪದ ಕೊಳ.


ತುಪ್ಪದ ಕೊಳದ ಮೇಲಿರುವ ಮಂಟಪ.


ತುಪ್ಪದ ಕೊಳ ಮೇಲಿಂದ ಗೊಪಾಲಸ್ವಾಮಿ ದೇವಸ್ಥಾನದ ಒಂದು ನೋಟ.
Aperture : F/9, Speed : 1/125, Exposure mode : Manual


ಕೊಳದ ಮೇಲಿಂದ ಗಾಳಿ ಗೋಪುರ ಹಾಗೂ ಹಿಡಿಂಬೇಶ್ವರ ದೇವಸ್ಥಾನ..
Aperture : F/6.3, Speed : 1/50s, Exposure mode : Manual



ಮೇಲಿನ ಎಲ್ಲ ಫೋಟೋಗಳ Exposure value
Aperture : F/11
Shutter Speed : 1/400s
Exposure mode : Manual

(ಫೋಟೋ ಮೇಲೆ ಕ್ಲಿಕ್ಕಿಸಿ ದೊಡ್ಡ ಇಮೇಜ್ ನೋಡಬಹುದು)

Wednesday, August 20, 2008

ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯ



ನಿನ್ನೆ ರಾತ್ರಿ ಚಿತ್ರದುರ್ಗದ ಮಿತ್ರ ಮಂಜು ಯಳನಾಡು ಅವರಿಗೆ ಫೋನ್ ಮಾಡಿದಾಗ ತುಂಬಾ ಗರಮ್ ಆಗಿದ್ದರು. ಅವರಿಗೆ ಮಾಧ್ಯಮಗಳ ಬಗ್ಗೆ ರೇಜಿಗೆ ಬಂದಿತ್ತು. ಕಾರಣ ನಮ್ಮ ಕಾಲದ ಒಬ್ಬ ಮಹಾನ್ ಚೇತನ ಫುಕುವೋಕಾ ತೀರಿಕೊಂಡ ಸಮಾಚಾರವನ್ನು ನಾವು ತಿಳಿದುಕೊಳ್ಳಲು ನಾಲ್ಕು ದಿನಗಳೇ ಬೇಕಾಗಿದ್ದು. ಅವರನ್ನು ಸಮಾಧಾನ ಮಾಡಿ ಫುಕುವೋಕಾ ಬಗ್ಗೆ ನಮಗಿದ್ದ ಆಸಕ್ತಿ, ಅವರಿಂದ ಪ್ರೇರಿತರಾಗಿ ಮಾಡಿದ ಕೆಲಸಗಳ ಬಗ್ಗೆ ಮಾತನಾಡಿಕೊಂಡೆವು.

ಡಿಗ್ರಿ ಮೊದಲ ವರ್ಷದಲ್ಲಿರುವಾಗ ತೇಜಸ್ವಿಯವರ 'ಜುಗಾರಿ ಕ್ರಾಸ್' ಪಾತ್ರಗಳಾದ ಸುರೇಶ ಮತ್ತು ಗೌರಿಯರಂತೆ ನಾನೂ ಒಂದು ತೋಟ ಮಾಡಿ ಸ್ವಾವಲಂಬಿ ಕೃಷಿಕನಾಗಬೇಕೆಂದು ಕನಸು ಕಂಡಿದ್ದೆ. ಅದೇ ಸಮಯದಲ್ಲಿ ಫುಕುವೋಕಾರವರ 'ಒಂದು ಹುಲ್ಲಿನ ಕ್ರಾಂತಿ' ಓದುವ ಅವಕಾಶ ಸಿಕ್ಕಿತು. ಅವರ ಸಹಜ ಕೃಷಿಯಿಂದ ಎಷ್ಟು ಪ್ರಭಾವಿತನಾದೆನೆಂದರೆ ನಮ್ಮ ಜಮೀನಿನಲ್ಲೀಯೂ ಅದರ ಪ್ರಯೋಗ ಮಾಡಬೇಕೆಂದು ತೀರ್ಮಾನಿಸಿ ನನ್ನ ತಾತನವರಲ್ಲಿ ಆಸೆ ವ್ಯಕ್ತಪಡಿಸಿದೆ. ಅವರಾಗಲೇ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ, ಕೃಷಿಯಲ್ಲಿ ತೊಡಗಿಸಿಕೊಂಡು, ಸಾವಿರಾರು ರುಪಾಯಿಗಳ ಕಳೆದುಕೊಂಡು ಹತಾಶರಾಗಿದ್ದರು. ನನ್ನ ಆಸೆಯನ್ನು ಕೇಳಿ ಮತ್ತೂ ಕಂಗಾಲಾದರು. ಬೇಸಾಯದ ಕುರಿತು ಒಂದು ಗಾದೆ ಇದೆ 'ಬೇಸಾಯ ಅಂದ್ರೆ ನಾಸಾಯ, ನೀಸಾಯ, ಮನೆಮಂದಿಯೆಲ್ಲ ಸಾಯ' ಅಂತ. ನಿನ್ನ ಪ್ರಯೋಗ ಏನಿದ್ದರೂ ಓದಿನಲ್ಲಿ ಮಾಡು, ಇನ್ನೆಂದು ನೀನು ನಮ್ಮ ಹಳ್ಳಿಗೆ ಬರಬೇಡ ಎಂದು ನನ್ನನು ಗದರಿ ದುರ್ಗಕ್ಕೆ ಅಟ್ಟಿದ್ದರು. ಮೊಳಕೆಯಲ್ಲಿಯೇ ನನ್ನ ಸಹಜ ಕೃಷಿಯ ಭತ್ತ ಕಮರಿ ಹೋಯಿತು.

ಇವತ್ತು ವ್ಯವಸಾಯ ತುಂಬಾ ನಷ್ಟದ ವ್ಯವಹಾರ ಆಗಿದೆ. ನಾವು ರಾಸಾಯನಿಕ ಬಳಸಿ ಬಳಸಿ ಭೂಮಿ ಕಣ್ಣು ಮುಚ್ಚಿಕೊಂಡಿದೆ. ನಮ್ಮ ರೈತ ಕೂಡಾ ಕಣ್ಣು ಮುಚ್ಚಿಕೊಂಡಿದ್ದಾನೆ. ರಸಗೊಬ್ಬರ ಸಿಗುತ್ತಿಲ್ಲವೆಂದು ರೈತ ಬೀದಿಗಿಳಿದು ಗಲಾಟೆ ಮಾಡುತ್ತಿರುವ ಈ ಹೊತ್ತಿನಲ್ಲಿ ಫುಕುವೋಕಾ ತೀರಿಕೊಂಡಿದ್ದಾರೆ. ಫುಕುವೋಕಾ ಅವರ ನೈಸರ್ಗಿಕ ಕೃಷಿಯನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕೋ ತಿಳಿಯುತ್ತಿಲ್ಲ.

ಫೂಕುವೋಕಾ ಬಗ್ಗೆ ಲಂಕೇಶ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಬರೆದಿದ್ದರು. ಗಾಂಧಿ ತತ್ವ ಮತ್ತು ಫುಕುವೋಕಾರ ಜೀವನದ ಪ್ರಸ್ತುತತೆಯನ್ನು ವಿವರಿಸುವ ಆ ಲೇಖನದ ಒಂದಷ್ಟು ಭಾಗ ಇಲ್ಲಿದೆ.
ದೈತ್ಯ ನಾಗರಿಕತೆಯ ಎದುರು ನಿಂತು ಸರಳವಾಗಿ, ಸ್ಪಷ್ಟವಾಗಿ ಮಾತಾಡುವ ಫುಕುವೋಕಾನ ಎಲ್ಲ ಮಾತುಗಳಿಗೆ ಮಾತ್ರಿಕ ಶಕ್ತಿ ಬರುವುದು ಆತನ ಯಶಸ್ವಿಯಾದ ಕೃಷಿಕ ಕ್ರಿಯೆಯಿಂದ. ಆತ ಕೇವಲ ಹೇಳುವವನಲ್ಲ. ಮಾಡಿ ತೋರಿಸುವ ವ್ಯಕ್ತಿ. ಇಲ್ಲಿ ಒಂದು ಸೂಕ್ಷ್ಮವನ್ನು ಅರಿಯಬೇಕು. ಫುಕುವೋಕಾನ ಸೂಕ್ಷ್ಮಜ್ಞತೆ, ತಿಳಿವಳಿಕೆ, ತಾದತ್ಮ್ಯವಿಲ್ಲದೆ ಆತನ ಶೈಲಿಯ ಕೃಷಿಗಾಗಿ ಪ್ರಯತ್ನಿಸುವುದು ಕಷ್ಟ. ಹಕ್ಕಿ ತನ್ನ ವಂಶದ ಆರಂಭದ ದಿನಗಳಲ್ಲಿ ಸಾವಿರಾರು ವರ್ಷ ಪ್ರಯತ್ನಿಸಿ, ಸೋತು ಮತ್ತೆ ಮತ್ತೆ ಯತ್ನಿಸಿ ಗೂಡು ಕಟ್ಟುವ ಕಲೆಯನ್ನು ಕಲಿತಂತೆ ಫುಕುವೋಕಾ ಮೂವತ್ತು ವರ್ಷ ಮಣ್ಣಿನೊಂದಿಗೆ, ಸಸ್ಯದೊಂದಿಗೆ ಸಂಬಂಧ ಬೆಳೆಸಿ ತನ್ನ ಗದ್ದೆಯ, ತನ್ನ ವ್ಯಕ್ತಿತ್ವದ ಕೃಷಿ ಮಾಡಿಕೊಂಡ. ಹುಚ್ಚು ಆಧುನಿಕತೆಗೆ ಸವಾಲಾಗಬಲ್ಲ ನೈಸರ್ಗಿಕ ವಿಧಾನ ಕಂಡುಕೊಂಡ. ಫುಕುವೋಕಾನ ಸಾಧನೆಯ ಆಕರ್ಷಣೆ ಅದರ ಲಾಭಧಾಯಕ, ಆರೋಗ್ಯವಂತ ಗುಣದಲ್ಲಿದೆ. ಗಾಂಧೀಜಿ ಕನಸಿದ ಆರೋಗ್ಯವಂತ, ಸರಳ, ಕೃತ್ರಿಮವಿಲ್ಲದ ಪ್ರಜೆಯ ಋತುಮಾನಕ್ಕೆ ತಕ್ಕಂಥ ನಾಗರಿಕತೆಗಾಗಿ ಮನುಷ್ಯನ ಕ್ರಿಯೆಯ ಪುನರ್ರಚನೆಯನ್ನು ಬಯಸುತ್ತಾನೆ. ಗಾಂಧೀಜಿಯಂತೆಯೇ ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗುವ ಅಪಾಯವಿದೆ.

ಯಾಕೆಂದರೆ ಆಧುನಿಕ ಮನುಷ್ಯನ ವೈಜ್ಞಾನಿಕ ತಪ್ಪು ಹೆಜ್ಜೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಗೀಳು, ಕೃಷಿಯನ್ನು ಕೂಡ ಅಂತರಾಷ್ಟ್ರೀಯ ಶೋಷಣೆಯ ಭಾಗವಾಗಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಕಾಣುವುದು ಈ ಶತಮಾನದಲ್ಲಿ ಎಲ್ಲವೂ ವೇಗವಾಗಿ ದಾಳಿ ನಡೆಸಿದ್ದರಿಂದ. ಫುಕುವೋಕಾ, ಗಾಂಧೀಜಿಯ ಆದರ್ಶ ಮನುಷ್ಯನಂತೆ ಪ್ರಶಾಂತ, ಸರಳ, ನಿರಪೇಕ್ಷಿ ಮತ್ತು ಆರೋಗ್ಯವಂತ; ಆದರೆ ಸಾವಿರಾರು ವರ್ಷಗಳಿಂದ ಕೃಷಿ, ಪಾಕಶಾಸ್ತ್ರ, ವಸ್ತ್ರಾಲಂಕಾರದ ವೈವಿಧ್ಯಮಯ ವಾಂಛಲ್ಯಗಳಿಗೆ ಬಿದ್ದಿರುವಾತ ಮನುಷ್ಯ; ಪ್ರಕೃತಿಯನ್ನು ತನ್ನ ಮೂಗಿನ ನೇರಕ್ಕೆ ತಿದ್ದಲು ಯತ್ನಿಸಿದವನು ಈತ. ಅಷ್ಟೇ ಅಲ್ಲ, ಮಹಾಭಾರತದ ಧರ್ಮರಾಯ ಕೂಡ ಜೂಜಿನ ಮೋಜಿಗೆ ಶರಣಾಗಿ, ಕೃಷ್ಣ ರಾಜಕೀಯ ತಂತ್ರದ ನಿಷ್ಣಾತನಾಗಿ ನಾಗರಿಕತೆ ಪಡೆಯುವ ಚಿತ್ರವಿಚಿತ್ರ ಆಯಾಮಗಳನ್ನು ಪ್ರದರ್ಶಿಸಿ ಫುಕುವೋಕಾ, ಗಾಂಧೀಜಿಯ ತಣ್ಣನೆಯ ಮನುಷ್ಯನನ್ನು ಅಣಕಿಸುತ್ತಾರೆ. ವಿಕೃತಿ ಮನುಷ್ಯನ ಪ್ರಕೃತಿಯ ಅಂಗವಾಗಿಯೇ ಕೆಲಸ ಮಾಡುತ್ತ ಪೂರ್ಣವಾಗಿ ತೊಲಗಲು ನಿರಾಕರಿಸುತ್ತದೆ. ಸಿಟ್ಟು ನೈಸರ್ಗಿಕವೆನ್ನಿಸಿಕೊಂಡು ಕ್ರೌರ್ಯದೊಂದಿಗೆ ಮಿಲನಗೊಳ್ಳುವ ಅಪಾಯ ಸದಾ ಇರುತ್ತದೆ.

ಆದರೆ ಫುಕುವೋಕಾ ತನಗೆ ವೈಯಕ್ತಿಕವಾಗಿ ಅಗತ್ಯವೆಂದು ಆರಂಭಿಸಿದ ಅನ್ವೇಷಣೆ ನಾಗರಿಕತೆಯ ಅನಿವಾರ್ಯ ದ್ರವ್ಯವೆನಿಸುತ್ತದೆ. ಮನುಷ್ಯ ತನ್ನ ಐಲುಗಳ ನಡುವೆಯೂ ಕೈಚಾಚಿ ಪಡೆಯಬಲ್ಲ ನಿಧಿ ಫುಕುವೋಕಾನ ಕೃಷಿ ಮತ್ತು ತತ್ತ್ವದಲ್ಲಿದೆ.

Tuesday, August 19, 2008

ನಿಸರ್ಗ ಸಹಜ ಋಷಿ



"Natural farming is not just for growing crops,
it is for the cultivation and perfection of human beings"

Thursday, August 7, 2008

ಸದ್ದೆ ಇರದ ಉತ್ಸವ, ಪ್ರೀತಿ ಒಂದೆ ಅಲ್ಲವೆ..



ಳೆದವಾರ ನಮ್ಮ ಗೆಳೆಯರ ಬಳಗದಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಸತತ ಎರಡು ವರ್ಷಗಳ ಪ್ರೇಮ ಫಲ ನೀಡಿದ ಗಳಿಗೆ ಅದು. ತುಮಕೂರಿನ ಗೆಳೆಯ ದೇವರಾಜ್ ಬಿ. ಹಿರೇಹಳ್ಳಿ ಮತ್ತು ರಾವಿಯ ತಸ್ಲೀಮ ದಾಂಪತ್ಯದ ಬದುಕಿಗೆ ಅಡಿಯಿಟ್ಟಿದ್ದಾರೆ. ನೂರು ಮತದ ಹೊಟ್ಟ ತೂರಿ, ಎಲ್ಲಾ ತತ್ವಗಳನು ಮೀರಿ, ದಿಗ್ಧಿಗಂತವಾಗಿ ಏರಿ ನಿಂತಿರುವ ಈ ಜೋಡಿಗೆ ಶುಭವಾಗಲಿ.
ಹಾಗೆ ನೋಡಿದರೆ ನಮ್ಮ ಗೆಳೆಯರ ಬಳಗದಲ್ಲಿ ಸುಮಾರು ಅರ್ಧಕ್ಕೆ ಅರ್ಧ ಪ್ರೇಮ ವಿವಾಹಗಳೇ. ಬೇದ್ರೆ ಮಂಜುನಾಥ್-ಸುಧಾ, ಶಿಕ್ಷಕ ಏಕನಾಥ್-ವೀಣಾ, ಪತ್ರಕರ್ತ ಶ.ಮಂಜುನಾಥ್-ಸುಮನಾ, ಅಹೋಬಲಪತಿ-ಶಾಂತ, ಶಶಿ ಸಂಪಳ್ಳಿ-ಅನಿತಾ, ಪ್ರಕಾಶ್ ಕುಗ್ವೆ- ಯಶೋಧ. ಈಗ ದೇವರಾಜ್- ತಸ್ಲೀಮ ಸೇರ್ಪಡೆ.

ಇದೇ ಸಂದರ್ಭದಲ್ಲಿ ಗೆಳೆಯ ಮಂಜು ಯಳನಾಡು ಪ್ರೇಮ ವಿವಾಹದ ಬಗ್ಗೆ ಒಂದು ಲೇಖನ ಬರೆದುಕೊಟ್ಟಿದ್ದಾರೆ. ಅಂದಹಾಗೆ ಮಂಜು ಯಳನಾಡು ವಿಜಯ ಕರ್ನಾಟಕ ಪತ್ರಿಕೆ ಚಿತ್ರದುರ್ಗದ ವರದಿಗಾರರಾಗಿ ಕಾರ್ಯನಿರ್ವಯಿಸುತ್ತಿದ್ದಾರೆ. ಇವರದೂ ಪ್ರೇಮ ವಿವಾಹ. ಪತ್ನಿ ವಿಜಯಲಕ್ಷ್ಮಿ.

ಒಂದು ರೀತಿಯ ಪ್ರಕ್ಷಬ್ಧ ವಾತಾವರಣ ನಿರ್ಮಾಣವಾಗಿರುವಂತೆ ಕಂಡು ಬರುತ್ತಿರುವ ಈ ಕಾಲಘಟ್ಟದಲ್ಲಿ ನಡೆಯುವ ಘಟನಾವಳಿಗಳಿಗೆ ನಮ್ಮ, ನಿಮ್ಮಂತೆಯೇ ಸೂಕ್ಷ್ಮವಾಗಿ ಸ್ಪಂದಿಸುತ್ತ, ಪ್ರತಿಕ್ರಿಯಿಸುತ್ತ ಸಾತ್ವಿಕ, ತಾತ್ವಿಕ ಆಕ್ರೋಶ ಉಳ್ಳಂತಹ ವ್ಯಕ್ತಿ ದೇವರಾಜ್. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ತುಮಕೂರು ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದ್ವಂದ್ವ, ತಳಮಳಗಳಲ್ಲಿಯೇ ಸದಾ ಹೊಸತನ್ನು ಹುಡುಕುವ, ಕಟ್ಟುವ ಸಾಂಸ್ಕೃತಿಕ ಮನಸ್ಸುಳ್ಳವನು. ಆರಂಭದಲ್ಲಿ, ಈ ಜೋಡಿ ಹೆಸರುಗಳನ್ನು ಓದಿದ ತಕ್ಷಣವೇ ನಿಮ್ಮ ಊಹೆಗೆ ಒಂದಿಷ್ಟು ವಿಷಯಗಳು ನಿಲುಕಿರಬಹುದು. ಮತಗಳ ಹೊಟ್ಟ ತೂರಿ ಗಡಿ ದಾಟುವ ಆಗತ್ಯ, ಅನಿವಾರ್ಯ ಎರಡೂ ಈ ಸಂದರ್ಭದಲ್ಲಿವೆ. ಅದನ್ನು ಗೆಳೆಯ ದೇವರಾಜ್ ಮತ್ತು ತಸ್ಲೀಮ ಮಾಡಿರುವುದಕ್ಕೆ ಹೆಮ್ಮೆಯಿದೆ. ಒಂದಿಡಿ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿರಿಸಿ, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪಟ್ಟಭದ್ರರು ಹುನ್ನಾರ ನಡೆಸುತ್ತಿರುವ ಈ ಹೊತ್ತಿನಲ್ಲಿ, ಅದಕ್ಕೆ ಪೂರಕವಾಗಿ ವಿಕ್ಷಿಪ್ತ ಮನಸ್ಸುಗಳಿಂದ ದುರಂತಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ, ಮೂಲಭೂತವಾದ ಗರಿಗೆದರಿ ಮನಸ್ಸುಗಳು ಒಡೆದು ಕಂದಕ ಸೃಷ್ಠಿಯಾಗುತ್ತಿರುವ ಈ ಸಂದರ್ಭದಲ್ಲಿ ಗೆಳೆಯ ದೇವರಾಜ್ ಒಡೆದ ಮನಸ್ಸುಗಳ, ಕಂಡ ಕನಸುಗಳ ಕಟ್ಟುವ ಕೆಲಸ ಮಾಡಿ ಮಾದರಿಯಾಗಿದ್ದಾನೆ ಎನ್ನುವುದು ನನ್ನ ಭಾವನೆ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ, ಮತಗಳನ್ನು ಮೀರಿ ಬುದುಕುತ್ತೇನೆಂದರೆ ಅದು ಯಾವತ್ತಿಗೂ ಸ್ವಾಗತವೇ ತಾನೇ. ಎಲ್ಲಾ ಮತ ಧರ್ಮಗಳ ಗುರಿ ಪ್ರೀತಿ, ಪ್ರೇಮ, ಸಹಬಾಳ್ವೆ. ಶ್ರೇಷ್ಠತೆಯ ವ್ಯಸನಿಗಳಿಗೆ, ಧರ್ಮ ಲಾಂಛನವಿಡಿದು ಮೆರವಣಿಗೆ ಹೊರಡುವ ಲಾಭಕೋರರಿಗೆ ಇದು ಬೇಕಿಲ್ಲ. ಯುವ ಮನಸ್ಸುಗಳಿಗೆ ಧರ್ಮದ ಅಫೀಮು ತಿನ್ನಿಸಿ ಸದಾ ಅವರನ್ನು ಮತ್ತಿನಲ್ಲಿರಿಸಿ ದಾರಿ ತಪ್ಪಿಸುತ್ತಿರುವ ಇವರ ಬಗ್ಗೆ , ಇಂತಹ ಮನಸ್ಸುಗಳಿಗೆ ಮಣೆ ಹಾಕುವ ಮುನ್ನ ಯೋಚಿಸುವುದು ಒಳಿತು.

ಹೌದು, ಮನಸ್ಸುಗಳ ನಡುವೆಯಿರುವ ಜಾತಿ, ಮತದ ಅಡ್ಡ ಗೋಡೆಯುರುಳಿಸಲು ಸಾಧ್ಯವಿರುವುದು ಪ್ರೇಮ ವಿವಾಹಗಳಿಗೆ ಮಾತ್ರ. ಪ್ರೇಮದ ಆರಂಭದಲ್ಲಿ ಅದು ಮನಸ್ಸಿನ ವ್ಯವಹಾರ ಅನ್ನಿಸಿದರೂ, ಮದುವೆ ಹಂತದಲ್ಲಿ ಈ ಎಲ್ಲಾ ಗಡಿಗಳನ್ನು ಮೀರಿ ಅದು ಸಮಾಜಮುಖಿಯಾಗುತ್ತದೆ. ವೈಚಾರಿಕ ನಿಲುವಾಗುತ್ತದೆ. ಶ್ರೇಷ್ಠತೆಯ ವ್ಯಸನಿಗಳ ಈ ನಾಡಿನಲ್ಲಿ ಜಾತ್ಯಾತೀತನಾಗಿ ಅಸ್ಮಿತೆ ಕಂಡುಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಸಮಾಜವೇ ಒಪ್ಪಿ, ಅಥವಾ ಕುಟುಂಬಗಳು ನೇರವಾಗಿ ಜಾತಿ ಮೀರಿ ವಿವಾಹ ಸಂಬಂಧ ಏರ್ಪಡಿಸುವುದನ್ನು ಈ ನಾಡಿನಲ್ಲಿ ಊಹಿಸಿಕೊಳ್ಳಲು ಸಾಧ್ಯವೆ ? (ಇದಕ್ಕೆ ವ್ಯತಿರಿಕ್ತವಾಗಿ ಒಂದಿಷ್ಟು ಸೂಕ್ಷ್ಮಮತಿಗಳಿರಬಹುದು) . ಈ ಕಾರಣದಿಂದಲೇ ಪ್ರೇಮವಿವಾಹಗಳಿಂದ ಮಾತ್ರ ಜಾತಿ, ಮತದ ಗೋಡೆಯನ್ನು ಒಡೆಯಲು ಸಾಧ್ಯ. ಪ್ರೇಮ ಜಾತ್ಯಾತೀತನಾಗಲು ಇರುವ ರಹದಾರಿ.

ಅಂತಹ ಪ್ರೇಮ ಅಷ್ಟೇ ಜವಾಬ್ಧಾರಿ, ಸೂಕ್ಷ್ಮಮತಿಯನ್ನು ಬೇಡುತ್ತದೆ ಎನ್ನುವುದು ನೆನಪಿರಬೇಕು. ಪ್ರೇಮ ವಿವಾಹಗಳ ವೈಫಲ್ಯದ ಬಗ್ಗೆ ಬಹಳ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಾರೆ. ಈ ಸಮಾಜದಲ್ಲಿ ನಡೆಯುವ ಪ್ರೇಮ ವಿವಾಹ, ಅಂತರ್ಜಾತಿ ವಿವಾಹಗಳ ಸಂಖ್ಯೆ, ಕುಟುಂಬಗಳು ಒಪ್ಪಿ ತಮ್ಮದೇ ಜಾತಿಯಲ್ಲಿ ಮಾಡಿಕೊಳ್ಳುವ ಅರೇಂಜ್ ಮ್ಯಾರೇಜ್ ಗಳ ಸಂಖ್ಯೆ ಎಷ್ಟು ? ಹಾಗೆ ನೋಡಿದರೆ ಈ ಸಮಾಜದಲ್ಲಿ ಪ್ರೇಮವಿವಾಹ ಶೇ.೪ ರಿಂದ ೫ ರಷ್ಟಿರಬಹುದು. ಉಳಿದ ಎಲ್ಲವೂ ಅರೇಂಜ್ ಮ್ಯಾರೇಜ್ ಗಳಾಗಿರುತ್ತವೆ. ಶೇ. ೪ ರಲ್ಲಿ ವೈಫಲ್ಯ ಕಾಣುವ ಅನುಪಾತಕ್ಕೂ, ಉಳಿದ ಶೇ.೯೬ ರಲ್ಲಿ ಕಂಡುಬರುವ ವಿವಾಹ ವೈಫಲ್ಯಗಳನ್ನು ಹೋಲಿಸಿ ನೋಡಿ ನಿಮಗೆ ಸತ್ಯ ತಿಳಿದು ಬಿಡುತ್ತದೆ.

ದೇವರಾಜ್ ಮತ್ತು ತಸ್ಲೀಮ ಬದುಕು ಸಂತಸಮಯವಾಗಿರಲಿ. ಸಾಂಸ್ಕೃತಿಕವಾಗಿ ಸದಾ ಎಚ್ಚರವಾಗಿದ್ದು ಮತ್ತೊಂದಿಷ್ಟು ಮಾನವೀಯ ಮನಸ್ಸುಗಳನ್ನು ರೂಪಿಸಲಿ ಎಂದು ಹಾರೈಸೋಣ.

"ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ."

Monday, August 4, 2008

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ



ಬೆಂಗಳೂರಿನಲ್ಲಿ ವಾಸವಾದರೂ ನನ್ನೂರು ಚಿತ್ರದುರ್ಗಕ್ಕೆ ಎರಡುವಾರಗಳಿಗೊಮ್ಮೆ ಹೋಗಿ ಬರುತ್ತಿರುತ್ತೇನೆ. ಬೆಳಗ್ಗೆ 7ಕ್ಕೆ ಚಿತ್ರದುರ್ಗ ಬಿಟ್ಟರೂ ಕಚೇರಿ ಸಮಯಕ್ಕೆ ಸರಿಯಾಗಿ ಬೆಂಗಳೂರಿಗೆ ಬಂದು ತಲುಪಬಹುದು. ರಾಜಧಾನಿಗೆ ಬೆಳಗಿನ ತಡೆರಹಿತ ಬಸ್ಸಿನಲ್ಲಿ ಬರುವ ಜನರಲ್ಲಿ ಹೆಚ್ಚಿನವರು ರಾಜಕಾರಣಿಗಳ ಪುಡಾರಿ ಹಿಂಬಾಲಕರು, ಸರಕಾರಿ ಉದ್ಯೋಗಿಗಳು. ವಿಧಾನಸೌಧದಲ್ಲೋ, ಕಾವೇರಿ ಭವನದಲ್ಲೋ ಒಂದೇ ದಿನದಲ್ಲಿ ಕೆಲಸ ಮುಗಿಸಿ ಹಿಂತಿರುಗುವವರು. ಎಲ್ಲೋ ಕೆಲವೇ ಬೆರಳೆಣಿಕೆಯಷ್ಟು ನನ್ನಂತ ತಲೆತಿರುಕ ಬ್ಯಾಚುಲರ್ಸ್ ಗಳು ವಾರಾಂತ್ಯ ರಜೆಯಲ್ಲಿ ಅಪ್ಪ-ಅಮ್ಮನ ನೋಡಿ, ಹಳೇ ಸ್ನೇಹಿತರ ಮಾತನಾಡಿಸಿ ಮತ್ತದೇ ಬೆಂಗಳೂರಿಗೆ ವಾಪಸ್ ಆಗುತ್ತಿರುವವರು.
ಇವರ ನಡುವೆ ಬೆಂಗಳೂರಿಗೆ ಮರಳುವಾಗ ನನ್ನ ಪಕ್ಕದಲ್ಲಿ ಸುಂದರವಾದ ಯುವಕ ಬಂದು ಕುಳಿತ. ಬಹುಷಃ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿ ಇರಬೇಕು. ಲೀ ಜೀನ್ಸು, ವುಡ್ ಲ್ಯಾಂಡ್ ಷ್ಯೂಸು, ಕೈಯಲ್ಲಿ ಎರಿಕ್ಸನ್ನು, ಕಿವಿಯಲ್ಲಿ ಆಪಲ್ ಇಯರ್ ಫೋನು. ಬಸ್ ಹೊರಟಿತು. ಲೇಡಿ ಕಂಡಕ್ಟರ್ ಕೈಗೆ ನೂರಿಪ್ಪತ್ತು ಕೊಟ್ಟು ಟಿಕೇಟ್ ಮಾಡಿಸಿ ರಾಹುಲ್ ಸಾಂಕ್ರುತ್ಯಾಯನರ 'ವೋಲ್ಗಾ - ಗಂಗಾ' ತೆರೆದು ಓದುತ್ತಾ ಕುಳಿತೆ.
ಕೆಲವು ನಿಮಿಷಗಳ ಪ್ರಯಾಣದ ನಂತರ ಪಕ್ಕದಲ್ಲೆಲ್ಲೋ ರಾಜ್ ಹಾಡಿನ ದ್ವನಿ ಕೇಳಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಯುವಕನ ಕೈಯಲ್ಲಿದ್ದ ಐಪೋಡಿನಲ್ಲಿ 'ಬಭ್ರುವಾಹನ' ಚಿತ್ರದ 'ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ' ಹಾಡಿನ ವಿಡಿಯೋ. ನನಗೆ ಸಖತ್ ಆಶ್ಚರ್ಯ. ಜೊತೆಗೆ ಖುಷಿ. ನನ್ನಲ್ಲಿ ಈ ಹಾಡಿನ ವಿಡಿಯೋ ಇರಲಿಲ್ಲ. ತಕ್ಷಣ ಆ ಯುವಕನನ್ನು ಪರಿಚಯ ಮಾಡಿಕೊಂಡು ಬ್ಲೂಟೂತ್ ಮೂಲಕ ನನ್ನ ಮೊಬೈಲಿಗೆ ವರ್ಗಾಯಿಸಿಕೊಂಡೆ. ನಂತರ ಹೇಳಿದ 'ಬಭ್ರುವಾಹ'ನದ ಈ ಹಾಡು ಈಗ ಅವನ ವಯಸ್ಸಿನ ಹುಡುಗರಲ್ಲಿ ಬಹು ಜನಪ್ರಿಯ ವಿಡಿಯೋ ತುಣುಕಂತೆ.
'ಬಭ್ರುವಾಹನ' ಚಿತ್ರದ ಈ ಹಾಡು ಗೊತ್ತಿಲ್ಲದ ಕನ್ನಡಿಗರು ಅತಿವಿರಳ. ಡಾ.ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಈ ಹಾಡಿನ ದೃಶ್ಯ ಎಷ್ಟು ಸಲ ಕೇಳಿದರೂ, ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ. ದಿವಂಗತ ಟಿ.ಜಿ.ಲಿಂಗಪ್ಪನವರ ಸಂಗೀತ ಮತ್ತು ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯದಲ್ಲಿ ಮೇಳೈಸಿದ ಈ ಹಾಡು, ಕನ್ನಡ ಚಿತ್ರಲೋಕದಲ್ಲಿ ಎಂದೂ ಮರೆಯದ ಹಾಡು. ಡಾ.ರಾಜ್ ಮತ್ತು ಪಿ.ಬಿ.ಶ್ರೀನಿವಾಸ್ ಪೈಪೋಟಿಗೆ ಬಿದ್ದವರಂತೆ ಹಾಡಿದ್ದಾರೆ. 1977ರಲ್ಲಿ ತೆರೆಕಂಡ ಈ ಚಿತ್ರವನ್ನು ಕೆಸಿಎನ್ ಗೌಡ ನಿರ್ಮಿಸಿದ್ದರು.
ನಿಮಗಾಗಿ ಬಭ್ರುವಾಹನ ಚಿತ್ರದ ಆ ಹಾಡಿನ ಸಾಲುಗಳು ಜೊತೆಯಲ್ಲಿ ವಿಡಿಯೋ .....

ಬಭ್ರುವಾಹನ : ಏನು ಪಾರ್ಥ. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಎತ್ತು ನಿನ್ನ ಗಾಂಢೀವ. ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.

ಅರ್ಜುನ : ಮದಾಂಧ. ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ.

ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ

ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ

ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ

ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ

ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ

ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ

ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ

ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ

ಉಗ್ರಪ್ರತಾಪೀ

ಬಭ್ರುವಾಹನ : ಓ ಹೊ ಒ ಹೋ ಉಗ್ರಪ್ರತಾಪಿ ಆ!

ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ

ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು

ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು

ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ

ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ

ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ

ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ

ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ

ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ

ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ

ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ

ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ

ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ ಪತಿವ್ರತೆಯೋ ಎಂದು ನಿರ್ಧರಿಸಲೇ ಈ ಯುದ್ದ.

Saturday, August 2, 2008

ಮರಳಿ ಬಾ


ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ

ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ

ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ

ಮನದ ಮರಳ ತುಂಬ ನೋವಿನಲೆಯ ಬಿಂಬ

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು

ಬರಡು ಹೃದಯಗಳಿಗೆ ಜೀವದ ಹಸಿರನ್ನು...

(-Radha Kinhala)

Aperture : F/10, Shutter Speed : 1/1250, Exposure mode : Aperture proiority