Thursday, September 25, 2008

ಒಂಟಿ ಹೃದಯ...


ಳೆದ ಒಂದು ವಾರದಿಂದ ಯಾಕೋ ಮನಸ್ಸಿಗೆ ನೆಮ್ಮದಿಯೇ ಇಲ್ಲದಂತಾಗಿತ್ತು. ಕಾರಣಗಳು ನೂರಾರಿವೆ. ಅವುಗಳಲ್ಲಿ ಮುಖ್ಯ ಎನ್ನಬಹುದಾದರೆ ಮತಾಂಧರು ನಡೆಸುತ್ತಿರುವ ದಾಳಿ, ಬಲಹೀನ ಸರಕಾರದ ಒಡೆಯರು ನೀಡುತ್ತಿರುವ ಲಜ್ಜೆಗೇಡಿ ಹೇಳಿಕೆಗಳು, ಕೋಮುಶಕ್ತಿಗಳ ಮೇಲುಗೈ, ಷೇರುಪೇಟೆ ಕುಸಿತದಿಂದಾಗಿ ಆಗುತ್ತಿರುವ ನಷ್ಟ, ವೈಯಕ್ತಿಕವಾಗಿ ಏಕಾಗಿತನ ಮುಂತಾದವುಗಳು. ಸಾಮಾನ್ಯವಾಗಿ ಬೇಸರವಾದಾಗ ಕೆಲವರು ಇಸ್ಪೀಟು, ಜೂಜುಗಳು, ಮದ್ಯಪಾನ, ಸೀಗರೇಟು ಇನ್ನಿತರೆ ಚಟಗಳಲ್ಲಿ ವೇಳೆ ಕಳೆಯಬಹುದು. ಆದರೆ ನನಗೆ ಈ ಯಾವ ಚಟಗಳಲ್ಲೂ ಆಸಕ್ತಿಯಿಲ್ಲ. ಹೀಗೆಂದು ಹೇಳಿ ನನ್ನನ್ನು ನಾನು ಒಳ್ಳೆಯವನು ಎಂದು ಆರೋಪಿಸಿಕೊಳ್ಳುತ್ತಿಲ್ಲ. ನನಗೆ ಯಾಕೋ ಮೊದಲಿನಿಂದಲೂ ಇವುಗಳು ಅಂಟಿಕೊಳ್ಳಲಿಲ್ಲ. ಟೀ ಕಾಫೀಯೂ ರುಚಿಸುವುದಿಲ್ಲ. ಮತ್ತೆ ಕೆಲವರು ಹರಟೆಯನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಎಲ್ಲೋ ಕೆಲವರು ತಮ್ಮ ತೀವ್ರ ದುಗುಡ, ದುಮ್ಮಾನದ ವೇಳೆಯಲ್ಲಿ ತಮ್ಮ ನೆಚ್ಚಿನ ಪುಸ್ತಕಗಳಿಗೆ ಮೊರೆ ಹೋಗುತ್ತಾರೆ, ಅಂತವರಲ್ಲಿ ನಾನೂ ಒಬ್ಬ.
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.
ಕಛೇರಿಯಲ್ಲಿನ ಕೆಲಸ ಮನಸ್ಸನ್ನು ಮುದುಡಿಸಿತ್ತು. ಹೊರಗೆ ಎಲ್ಲಾದರೂ ಸುತ್ತೋಣವೆಂದರೆ ರಜೆ ಸಮಸ್ಯೆ. ಇಂತಹ ಹೊತ್ತಿನಲ್ಲಿ ಓದಿಗೆ ಮೊರೆ ಹೋಗುತ್ತೇನೆ. ನನ್ನ ಪ್ರೀತಿಯ ಲೇಖಕ ತೇಜಸ್ವಿಯವರ 'ಕರ್ವಾಲೋ' ಅಥವಾ ಲಂಕೇಶರ 'ಗುಣಮುಖ'ನೋ, ಅಥವಾ "ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ; ಆತನಿಗೆ ಒಲಿದ ಹೆಣ್ಣನ್ನೋ ಅಥವಾ ಆತನಿಗೆ ಒಲಿಯದೆ ಹೋದ ಹೆಣ್ಣನ್ನೋ?" ಎಂದು ಕೇಳುವ ಏಟ್ಸ್ ಕವಿತೆಗಳನ್ನೋ ಓದಿ ಮನಸ್ಸಿನ ಗಂಟು ಸಡಿಲಗೊಳಿಸಿಕೊಳ್ಳುತ್ತೇನೆ. ನೆನ್ನೆ ಹಾಗೆಯೇ ಆಯಿತು. ಲಂಕೇಶರ 'ಟೀಕೆ-ಟಿಪ್ಪಣಿ'ಯಲ್ಲಿನ ಒಂದು ಬರಹ ಓದಿ ನನ್ನ ಸದ್ಯದ ಎಲ್ಲ ನೋವುಗಳನ್ನು ಮರೆತು ಕ್ರಮೇಣ ಮನಸ್ಸು ಮುದಗೊಳ್ಳತೊಡಗಿತು. ರಾತ್ರಿ ಸುಖ ನಿದ್ದೆ ಆವರಿಸಿತ್ತು.

ನೀವೂ ಓದಿ ಹೊಸ ಚೈತನ್ಯ ಪಡೆಯಬಹುದು ಎಂಬ ನಂಬಿಕೆಯಿಂದ ಆ ಲೇಖನದ ಕೆಲ ಭಾಗ ಕೆಳಗೆ ಕೊಟ್ಟಿದ್ದೇನೆ.

"ನನ್ನನ್ನು ಖುಷಿಪಡಿಸಿ. ನನಗೆ ಜೀವಿಸುವ ಆಶೆ ಕೊಡಿ..."
ಆ ಕಡೆಯಿಂದ ಫೋನಿನಲ್ಲಿ ಬರುತ್ತಿದ್ದ ಹೆಣ್ಣುಮಗಳ ಧ್ವನಿ.
ಆಗತಾನೆ ನನ್ನ ನಿತ್ಯದ ಬ್ಯಾಡ್ಮಿಂಟ್ ನಿಂದ ಬಂದಿದ್ದೆ. ರಾತ್ರಿ ಏಳುಗಂಟೆ; ಎಲ್ಲಿಯಾದರೂ ಹೋಗೋಣವೆಂದು ನನ್ನ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ಟೇಬಲ್ಲಿನ ಕಾಗದಗಳನ್ನು ಓರಣಗೊಳಿಸಿ ಒಮ್ಮೆ ಚಿಂತಿಸಿದ್ದೆ, ಮತ್ತೊಂದು ದಿನ ಮೆಲ್ಲಗೆ ತೆವಳುತ್ತ ಕಣ್ಣರೆಯಾಗಲಿತ್ತು. ಪಡುವಣದ ಕೆಂಪು ಮಾಸತೊಡಗಿತ್ತು; ನಕ್ಷತ್ರಗಳು ಮುಗುಳ್ನಗತೊಡಗಿದ್ದವು. ನನ್ನಂತೆಯೇ ಇಡೀ ಬೆಂಗಳೂರು ದಣಿದ ಮೈಮನಸ್ಸುಗಳೊಡನೆ ರಾತ್ರಿಗೆ ಸಿದ್ಧವಾಗತೊಡಗಿತ್ತು. ಆಗತಾನೆ, ಕೇವಲ ಹತ್ತಾರು ನಿಮಿಷಗಳ ಹಿಂದೆ, ಗೆಳೆಯರೊಬ್ಬರೊಂದಿಗೆ ಮಾತಾಡುತ್ತ ಬೆವರು, ಆಟದಿಂದ ಜುಮ್ಮೆನ್ನುವ ಮೈ, ನಿಧನಿಧಾನಕ್ಕೆ ಏರುತ್ತಿದ್ದ ಚಳಿ ಮತ್ತು ಮೃದುವಾಗಿ ಅಡಗುತ್ತಿದ್ದ ವಾಹನಗಳ ಸದ್ದಿನಲ್ಲಿ ಕೂತು ಒಂದು ಸುಂದರ ದಿನವನ್ನು ಬೀಳ್ಕೊಟ್ಟಿದ್ದೆ. ಹಾಗೆಯೇ ನಾನು ನೆಡಬೇಕೆಂದಿದ್ದ ಮರಗಳು, ಹೂಗಿಡಗಳು, ಕುಂಡದಲ್ಲಿ ನಗಲಿರುವ ಗುಲಾಬಿಗಳ ಬಗ್ಗೆ ಚಿಂತಿಸಿದ್ದೆ. ಒಮ್ಮೆಗೇ ಹತ್ತಾರು ಕಡೆ ಹರಿದು ತಲ್ಲಣಗೊಳ್ಳುವ ಮನಸ್ಸನ್ನು ಕಂಡು ಮುಗುಳ್ನಗುತ್ತಲೇ ಗೆಳೆಯರ ಮಾತಿನತ್ತ ಕಿವಿಗೊಟ್ಟಿದ್ದೆ.
ಅವನ್ನೆಲ್ಲ ಮುಗಿಸಿ ಬಂದಾಗ ಆರೂ ಮುಕ್ಕಾಲು ಗಂಟೆ; ನಮ್ಮ ಕಛೇರಿಯಲ್ಲಿ ಯಾರೂ ಇರಲಿಲ್ಲ. ಸಿದ್ಧವಾಗಿ ಹೊರಗೆ ಹೊರಡುವಷ್ಟರಲ್ಲಿ ಆ ಫೋನ್ ಕರೆ ಬಂದಿತ್ತು.
"ನೀವು ಯಾರು? ಲಂಕೇಶ್ ಮಾತಾಡ್ತಿರೋದು" ಅಂದೆ; ಆಕೆ ಧ್ವನಿ ಎಳೆಯ ಧ್ವನಿಯಾಗಿತ್ತು.
"ದಯವಿಟ್ಟು ಕ್ಷಮಿಸಿ. ನಾನು ಯಾರು ಅಂತ ಹೇಳಲ್ಲ. ಅದು ನಿಮಗೆ ಮುಖ್ಯವೂ ಅಲ್ಲ. ನನ್ನ ಹೆಸರು ಕೇಳಿ ನಿಮಗೆ ಏನೂ ಪ್ರಯೋಜನವಿಲ್ಲ" ಅಂದಳು ಆಕೆ. ಅವಳ ಧ್ವನಿ ಭಾರವಾಗಿತ್ತು. ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದಳು.
" ಸರಿ, ಹೆಸರು ಹೇಳಬೇಡಿ, ಏನು ಬೇಕಿತ್ತು?" ಅಂದೆ.
"ಏನಿಲ್ಲ. ತುಂಬ ಬ್ಯುಸಿಯಾಗಿದ್ದೀರಾ? ನಿಮಗೆ ತೊಂದರೆ ಕೊಡೋಕೆ ನನಗೆ ಇಷ್ಟವಿಲ್ಲ" ಅಂದಳು.
"ಹಾಗೇನಿಲ್ಲ, ಎಲ್ಲಿಗೋ ಹೊರಟಿದ್ದೆ. ಪರವಾಗಿಲ್ಲ, ಮಾತಾಡಿ" ಅಂದೆ.
" ತುಂಬ ಬೇಸರವಾಗಿದೆ. ಮೈಪರಚಿಕೊಳ್ಳೋ ಏಕಾಂಗಿತನ. ಐದು ನಿಮಿಷದಿಂದ ಸುಮ್ಮನೆ ಅಳ್ತಾ ಕೂತಿದ್ದೇನೆ. ನನ್ನ ಮೆಚ್ಚಿನ ಕವಿ ಖಲೀಲ್ ಗಿಬ್ರಾನನ ಪದ್ಯಗಳನ್ನು ಓದಿದೆ; ಆತ ಎಷ್ಟು ಒಳ್ಳೆಯ ಕವಿ, ಆದರೆ ಕೆಟ್ಟ ಮನುಷ್ಯ ಗೊತ್ತೆ- ದುಃಖದುಮ್ಮಾನವನ್ನೇ ಅಪ್ಪಿಕೊಳ್ಳುವಂತೆ, ಸದಾ ಅಳ್ತಿರುವಂತೆ ಮಾಡ್ತಾನೆ ಗಿಬ್ರಾನ್..."
"ನೀವು ವಿದ್ಯಾರ್ಥಿನಿ ಇರಬೇಕಲ್ಲವಾ?" ಅಂದೆ.
"ಅಲ್ಲ, ಅಮೇರಿಕ ವಿಶ್ವವಿದ್ಯಾನಿಲಯದ ಒಂದು ಇಲಾಖೆಗಾಗಿ ಇಲ್ಲಿ ಸಂಶೋಧನೆ ನಡೆಸುವ ಹುಡುಗಿ ನಾನು. ಒಮ್ಮೊಮ್ಮೆ ತುಂಬ ಬೇಸರವಾಗುತ್ತೆ... ಇವತ್ತು ಎಷ್ಟು ಬೇಸರವಾಯಿತೆಂದರೆ ಯಾರಾದರೊಬ್ಬರೊಂದಿಗೆ ಮಾತಾಡಲೇಬೇಕು ಅನ್ನಿಸಿನಿಗೆ ಫೋನ್ ಮಾಡಿದೆ. ನನ್ನನ್ನ ಖುಷಿಪಡಿಸಿ, ನನಗೆ ಜೀವಿಸುವ ಆಶೆ ಕೊಡಿ. ದಯವಿಟ್ಟು ನನ್ನ ಮನಸ್ಸು ನೋಯಿಸಬೇಡಿ. ಹೇಳಿ, ಈ ಜೀವನ ನಡೆಸೋದ್ರಿಂದ ಏನಾದ್ರೂ ಪ್ರಯೋಜನವಿದೆಯೆ?"
ಹಾಗೆಂದು ಹೇಳಿ ಗಟ್ಟಿಯಾಗಿ ಅತ್ತಳು ಹುಡುಗಿ.
"ನೋಡು ಮರಿ, ನೀನು ಯಾರು, ನಿನ್ನ ಹಿನ್ನಲೆ ಏನು ಅಂತ ಗೊತ್ತಿಲ್ಲದೆ ಸುಮ್ಮಸುಮ್ಮನೆ ಹುಚ್ಚನ ಹಾಗೆ ನಗು, ನಗು ಅಂತ ಹೇಳುವವ ನಾನಲ್ಲ, ನಿನ್ನಂತೆಯೇ ನನಗೂ ಅನೇಕ ಸಲ ತೀವ್ರ ಬೇಸರ ಆಗಿದೆ; ಆದರೆ ನಾನು ಸುಖ, ದುಃಖವನ್ನು ಎಷ್ಟು ಗಾಢವಾಗಿ ಅನುಭವಿಸಿದ್ದೇನೆ ಅಂದ್ರೆ, ಈಗ ಕೂತು ಬೇಸರ ಪಡೋಕೆ ಕೂಡ ವೇಳೆ ಇಲ್ಲದಷ್ಟು ಕೆಲಸ ಮಾಡುವ ಕಲೆಯನ್ನು ಕಲ್ತಿದೇನೆ..."
"ಹಾಗಾದ್ರೆ ನಾನು ಸಂತೋಷವಾಗಿ ಸದಾ ಮಾಡಬಹುದಾದ ಕೆಲಸ ಹೇಳಿ..."
ನಾನು ನಕ್ಕು ಕೇಳಿದೆ, "ನೀನು ಯಾರನ್ನೂ ಪ್ರೀತಿಸ್ತಿಲ್ಲವಾ? ನಿನ್ನೆದುರು ನಿಂತು 'ನಾನಿದ್ದೇನೆ, ನಿನ್ನ ವ್ಯಸನವನ್ನೆಲ್ಲ ನನಗೆ ಕೊಡು' ಎನ್ನುವಂಥ ಗೆಳೆಯನಿಲ್ಲವೇ?"
"ನಾನು ನಿಜಕ್ಕೂ ನಂಬಬಹುದಾದ ಗೆಳೆಯ ಸಿಕ್ಕಿಲ್ಲ" ಎಂದು ಮೊತ್ತಮೊದಲಬಾರಿಗೆ ನಕ್ಕು ಹೇಳಿದಳು. "ತಪ್ಪು ತಿಳಿಯಬೇಡಿ, ಆ ಗೆಳೆಯ ನೀವೇ ಆಗಿದ್ದರೆ?" ಅಂದಳು ಹುಡುಗಿ.
"ಹುಚ್ಚು ಹುಡುಗಿ. ನಾನು ಎಲ್ಲ ಸಿಕ್ಕು, ತೊಂದರೆಗಳಿಂದ ಹೊರಬರುತ್ತಿರುವ ಮನುಷ್ಯ; ಬಿಸಿಲುಗುದುರೆಗಳ ಬೆನ್ನು ಹತ್ತಿ ಓಡಾಡುವ ಕಾಲ ಮುಗಿಯಿತು. ಕೇಳ್ತಿದ್ದೀಯ ಮರಿ? ನನಗೆ ನಿನ್ನ ವಯಸ್ಸಿನ ಮಕ್ಕಳಿದ್ದಾರೆ; ದೂರದ, ಹತ್ತಿರದ ಗೆಳತಿಯರಿದ್ದಾರೆ, ಅವರೆಲ್ಲರೂ ಒಂದು ಮಟ್ಟದಲ್ಲಿ ನಿನ್ನಷ್ಟೇ ಅಪರಿಚಿತರು; ಇನ್ನೊಂದು ಮಟ್ಟದಲ್ಲಿ ನನ್ನೊಂದಿಗೆ ಮಾತಾಡುವ, ನನ್ನೊಡನೆ ಓಡಾಡುವ, ನನ್ನ ಮೌನವನ್ನು ಕೂಡ ಹಂಚಿಕೊಳ್ಳುವ ಜನ. ಈ ಜೀವನದಲ್ಲಿ ಏನಾಗುತ್ತೆ ಗೊತ್ತ? ನೀನು ಪುಣ್ಯವಂತೆಯಾಗಿದ್ದರೆ, ನಿನಗೆ ಎರಡು ಅಮೂಲ್ಯ ವಸ್ತುಗಳು ಸಿಗುತ್ತವೆ. ಒಂದು, ನೀನು ನಿನ್ನ ಪೂರ್ತಿ ವ್ಯಕ್ತಿತ್ವವನ್ನು ತೊಡಗಿಸಿ ಮಾಡುಬಲ್ಲ ಕೆಲಸ; ಅದು ನಿನ್ನನ್ನು ಬೆಳೆಸುವ ಜೊತೆಗೇ ನಿನಗೆ ಪ್ರೀತಿ, ವಿಶ್ವಾಸವನ್ನೆಲ್ಲ ತರುತ್ತದೆ; ನಿನ್ನ ಸುತ್ತಣ ಬದುಕಿಗೆ ನೀನು ನೆರವಾಗುವ ಬಗ್ಗೆ ನಿನಗಿರುವ ಅಹಂಕಾರಕ್ಕಿಂತ ಹೆಚ್ಚಾಗಿ ನಿನಗೆ ಬದುಕು ನೀಡಿದ ಕ್ರಿಯಾಶೀಲ ಸಂತೋಷದ ಬಗ್ಗೆ ನಿನ್ನಲ್ಲಿ ಕೃತಜ್ಞತೆ ಹುಟ್ಟುತ್ತೆ. ಆ ಕೃತಜ್ಞತೆಯತ್ತ ನಡೆದಿರುವ ಮನುಷ್ಯ ನಾನು. ಹಳ್ಳಿಯ ಮುಕ್ಕನಾಗಿ ಹುಟ್ಟಿದ ನಾನು ನನ್ನ ಕೆಲಸವನ್ನು ಹುಡುಕಿದೆ; ಅನೇಕ ತಪ್ಪುಗಳನ್ನು, ಸರಿಗಳನ್ನು ಮಾಡಿದೆ; ನಾನೇ ನನ್ನ ಮಾರ್ಗದರ್ಶಕನಾಗಿದ್ದೆ... ಅಥವಾ ನಾನು ಹುಟ್ಟಿದ ಹಳ್ಳಿ ನನ್ನನ್ನು ಬಿಡದ ಆ ಮಲೆನಾಡಿನ ಪರಿಸರ ನನ್ನನ್ನು ನಡೆಸಿತೋ ಗೊತ್ತಿಲ್ಲ. ಅಲ್ಲದೆ, ನಾನು ಸರಿಯಾದ ಮಾರ್ಗದಲ್ಲಿದ್ದೇನೋ ಇಲ್ಲವೋ ಯಾರಿಗೆ ಗೊತ್ತು? ಆದರೆ ನನ್ನ ಕೆಲಸದಿಂದ ನನಗೆ ಅಪಾರ ಸಂತೋಷ ದೊರೆಯುತ್ತಿರುವುದು ಗೊತ್ತು... ಕೇಳ್ತಿದೀಯಾ ಮರಿ? ಕೃತಜ್ಞತೆ ಎರಡನೆಯ ಮುಖ್ಯ ಅಂಶ..."
"ಕೇಳ್ತಿದೇನೆ. ನನ್ನ ಬೇಸರ ಕಡಿಮೆಯಾಗ್ತಿದೆ. ಹೇಳಲಾ? ನಾನು ನಾಟಕಗಳಲ್ಲಿ ನಟಿಸಬೇಕೆಂದು ಬೆಂಗಳೂರಿನ ಇಂಗ್ಲಿಷ್ ನಾಟಕ ತಂಡದಲ್ಲಿದ್ದೆ. ಅಲ್ಲ ಎಷ್ಟು ಸಣ್ಣ ಜನರಿದ್ದಾರೆ ಅಂದ್ರೆ, ನಾನು ಮದ್ರಾಸಿನಿಂದ ಒಂದು ನಾಟಕದ ಸ್ಕ್ರಿಪ್ಟ್ ತರಿಸಿಕೊಡಲಿಲ್ಲ ಎಂದು ನಿರ್ದೇಶಕನೊಬ್ಬ (ಅವನ ಹೆಸರು ಹೇಳಿದಳು) ನನ್ನ ಮೇಲೆ ಕೋಪಗೊಂಡ ಬೈದ. (ಆಗ ನಾನು ಇಂಗ್ಲಿಷ್ ನಾಟಕಗಳ ಶ್ರೀನಿವಾಸಗೌಡರ ಬಗ್ಗೆ ಹೇಳಿದೆ) ಗೊತ್ತು, ಅವರೂ ಗೊತ್ತು. ನನಗೆ ಇವರೆಲ್ಲರಿಂದ ಯಾವ ನೆಮ್ಮದಿಯೂ, ಪ್ರೋತ್ಸಾಹವೂ ಸಿಗಲಿಲ್ಲ" ಅಂದು ನಕ್ಕಳು.
"ಹೀಗೆ ನಾವಿಬ್ಬರೂ ಹೆಸರುಗಳನ್ನು ಹೇಳ್ತಾ ಹೋದ್ರೆ ನನಗೆ ನಿನ್ನ ಹೆಸರು ಊಹಿಸೋದು ಸುಲಭವಾಗುತ್ತೆ. ಅದೆಲ್ಲಬೇಡ. ನಿನ್ನ ತೀವ್ರ ದುಃಖದ ವೇಳೆಯಲ್ಲಿ ನನಗೆ ಫೋನ್ ಮಾಡಿದ್ದಕ್ಕೆ, ಆ ನಿನ್ನ ವಿಶ್ವಾಸಕ್ಕೆ ನನಗೆ ಸಂತೋಷವಾಗಿದೆ. ನಿನಗೆ ಯಾವುದೇ ರೀತಿಯ ಮಾನಸಿಕ ನೆರವು ಬೇಕಾದರೆ ಫೋನ್ ಮಾಡು; ಮತ್ತು ದಯವಿಟ್ಟು ನೆನಪಿಡು, ಬದುಕು ಮೂಲಭೂತವಾಗಿ ಸ್ವಾರ್ಥಿಗಳಿಂದ ಕೂಡಿದ್ದು; ಈ ಸ್ವಾರ್ಥದ ಗುಹೆಯಲ್ಲಿ ಖಾಸಗಿ ವಲಯವನ್ನು, ಪ್ರೀತಿ ವಿಶ್ವಾಸದ ಗೂಡುಗಳನ್ನು ಕಟ್ಟಿಕೊಳ್ಳಬೇಕು; ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳಸಿಕೊಳ್ಳಬೇಕು. ಆದರೆ ಈ ಖಾಸಗಿ ಗ್ರಹಿಕೆಗೆ ಹೊರಜಗತ್ತು ಅನುಭವಗಳನ್ನು ಕೊಡಬೇಕು. ಆಗಲೇ ಸಂಬಂಧಗಳು ಮುಖ್ಯವಾಗೋದು... ನೋಡು, ಎಷ್ಟೇ ಕಿರಿಕಿರಿ, ಬೇಸರ, ಅವಮಾನವೆಲ್ಲ ಇದ್ರೂ ಈ ಜೀವನ ನಿಜಕ್ಕೂ ಜೀವಿಸಲು ಯೋಗ್ಯವಾಗಿದೆ, ಸುಂದರ ಕೂಡ ಆಗಿದೆ, ಇವತ್ತು ಸಂಜೆ ಆಕಾಶದತ್ತ ನೋಡಿದೆಯಾ ಆಕಾಶ ಎಷ್ಟು ಸ್ವಚ್ಛವಾಗಿ ಅಸಂಖ್ಯಾತ ನಕ್ಷತ್ರಗಳ ನಗೆಯಿಂದ ತುಂಬಿತ್ತು. ಈ ಬದುಕಿನಲ್ಲಿ ಒಂದು ಕಾಸನ್ನೂ ಕೂಡ ಕೇಳದೆ ಎಷ್ಟೊಂದು ವಸ್ತುಗಳು ಎಷ್ಟು ತೀವ್ರ ಸಂತೋಷ ಕೊಡುತ್ತವೆ... ಅಂದಹಾಗೆ, ಒಳ್ಳೆಯ ಹುಡುಗನನ್ನು ಪತ್ತೆಹಚ್ಚಿ ಹೆಮ್ಮೆಯಿಂದ ಪ್ರೀತಿಸುವುದನ್ನು ಮರೆಯಬೇಡ. ತುಂಬ ಒಳ್ಳೆಯ ಹುಡುಗರು, ಪ್ರೀತಿಗೆ, ಸ್ನೇಹಕ್ಕೆ ಯೋಗ್ಯವಾದವರು, ನಿನ್ನಷ್ಟೇ ಒಬ್ಬಂಟಿಯಾದವರು ಇದ್ದಾರೆ. ಅವರನ್ನು ತೀರಾ ಕಾಯಿಸಬಾರದು..." ಎನ್ನುತ್ತಿದ್ದಂತೆ ಕುಲುಕುಲು ನಕ್ಕಳು ಹುಡುಗಿ. ಆಕೆಯ ನಗೆ ಮುಗಿಯುವಷ್ಟರಲ್ಲಿ "ಬೈ" ಎಂದು ಹೇಳಿ ಫೋನ್ ಇಟ್ಟು ಹೊರಟೆ.

Friday, September 19, 2008

ಯಾವುದು ಮತಾಂತರ, ಯಾರು ಮತಾಂತರಿ?



ಯಾವುದು ಮತಾಂತರ,

ಯಾರು ಮತಾಂತರಿ?

ತಮ್ಮ ಮುಖವನ್ನು ಕನ್ನಡಿಯಲ್ಲಿ

ನೋಡುವುದನ್ನು

ಮುಖ್ಯಮಂತ್ರಿ ಯಡಿಯೂರಪ್ಪ

ಬಿಟ್ಟಿರುವಂತೆ ಕಾಣುತ್ತದೆ.

12ನೆಯ ಶತಮಾನದಲ್ಲಿ

ಆದದ್ದು ಏನು ಎಂಬುದನ್ನು

ಯಡಿಯೂರಪ್ಪ ತಿಳಿದಿಲ್ಲವೆಂದು

ನಂಬುವುದು ಕಷ್ಟ.

ತಮ್ಮ ಜನ್ಮದ ಬೇರು

ಎಲ್ಲಿದೆ ಎನ್ನುವುದನ್ನು

ಅವರು ಮರೆಯಬಾರದಲ್ಲವೇ?

ವಿದ್ವಾಂಸ ಡಾ.ಎಂ. ಚಿದಾನಂದ ಮೂರ್ತಿಯವರನ್ನಾದರೂ

ಕೇಳಿ ತಿಳಿದುಕೊಳ್ಳಬಹುದು.

ಮೂರ್ತಿಯವರೂ ಒಮ್ಮೆ ತಮ್ಮ ಬೆನ್ನನ್ನು ನೋಡಿ ನಂತರ

ವಾಸ್ತವಾಂಶ ತಿಳಸಬಹದು!

- ಕೆ.ಎನ್. ರಾಮಮೂರ್ತಿ

(ಕೃಪೆ: ವಾಚಕರವಾಣಿ)

Wednesday, September 10, 2008

ಇದಪ್ಪಾ ವರಸೆ ಅಂದರೆ...



ದು ಜೋಗಿಯವರ ಎರಡು ಕೃತಿಗಳ ಬಿಡುಗಡೆ ಸಮಾರಂಭ. ಒಂದು ಯಾಮಿನಿ ಕಾದಂಬರಿ. ಮತ್ತೊಂದು ಕಥಾ ಸಂಕಲನ. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅನಂತಮೂರ್ತಿ ಯವರು ಇತ್ತೀಚೆಗೆ ಬಿಡುಗಡೆಯಾದ ಕಪಿಲ್ ಸಿಬಲ್ ರವರ ಕವನ ಸಂಕಲನವನ್ನು ಯಾವುದೋ ಮಾತಿಗೆ ಉದಾಹರಿಸಿದರು. ಎಸ್ಎಮ್ಎಸ್ ನಲ್ಲಿ ಏನೋ ತೋಚಿದ್ದನ್ನ ಬರೆದು ಕವಿತೆ ಅಂತ ಪ್ರಿಂಟ್ ಮಾಡಿ ದೊಡ್ಡ ಹೊಟೇಲ್ ನಲ್ಲಿ ಬಿಡುಗಡೆ ಮಾಡಿದರು. ಆತ ಮಂತ್ರಿ ಎನ್ನೋ ಕಾರಣಕ್ಕೆ ಕೆಲ ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟ ಮಾಡಿದವು ಎಂದು ಟೀಕಿಸಿದರು.

ಅವರ ಟೀಕೆಗೆ ಒಂದಿಷ್ಟು ಬೆಲೆ ಇದೆ. ಅದೇ ಕಾರ್ಯಕ್ರಮದ ಕೊನೆಯಲ್ಲಿ ಪತ್ರಕರ್ತ ರವಿ ಬೆಳಗೆರೆ ಮಾತಾಡ್ತಾ ಅನಂತಮೂರ್ತಿಯವರ ಅಭಿಪ್ರಾಯವನ್ನು ಒಪ್ಪುತ್ತಾ, ಮುಖಪುಟದಲ್ಲಿ ಸಿಬಲ್ ಕವನಸಂಕಲನದ ಬಗ್ಗೆ ಪ್ರಕಟಿಸಿದ ಪತ್ರಿಕೆಗಳ ಬಗ್ಗೆ ಕಿಡಿಕಾರುತ್ತಾ 'ಈ ಪತ್ರಕರ್ತರನ್ನೆಲ್ಲ ಮೆಟ್ಟಿನಾಗೆ ಹೊಡೀಬೇಕು' ಎಂದು ಫರ್ಮಾನು ಹೊರಡಿಸಿದರು!

ಮಾತು ಮುಂದುವರಿಸಿ ಬಬ್ಲೂ ಶ್ರೀವಾಸ್ತವ ಎಂಬ ರೌಡಿ ಕಂ ರಾಜಕಾರಣಿಯ ಬರಹಗಳನ್ನು ಉದಾಹರಿಸಿದರು. ಅದೇನೋ ಮಹಾಕೃತಿ ಎಂಬಂತೆ ಮತ್ತೊಬ್ಬರು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ನಾನು ತರಿಸಿ ಓದಿದೆ. ಅದರಲ್ಲಿ ಏನೂ ಇಲ್ಲ. ಆ ಮನುಷ್ಯ ಭೂತಗ ಜಗತ್ತಿನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಗ ಇತರರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಗಳ ಸಂಗ್ರಹ ರೂಪ. ಅದೂ ಒಂದು ಕೃತಿಯೆ ಎಂದು ರವಿ ಮೂದಲಿಸಿದರು. ಇದಪ್ಪಾ ವರಸೆ ಅಂದರೆ. ಕಪಿಲ್ ಸಿಬಲ್ ಕವನ ಸಂಕಲನ ಸುದ್ದಿ ಮುಖಪುಟ್ಟಕೆ ಹಾಕ್ಕೊಂಡವರಿಗೆ ಮೆಟ್ಟಿನಾಗೆ ಹೊಡೆಯೋದೆ ಆದರೆ, ಪ್ರತಿ ವಾರ ಪತ್ರಿಕೆ ಮುಖಪುಟದಲ್ಲಿ ರೌಡಿಗಳನ್ನು, ಸರಣಿ ಹಂತಕರನ್ನ, ಪಾತಕಿ, ಪರಮ ಪಾಪಿಗಳನ್ನು ವಿಜೃಂಭಿಸೋರನ್ನ ಹೊಡೆಯೋಕೆ ಏನನಪ್ಪಾ ತರೋದು? ಪ್ರತಿರಾತ್ರಿ ಮಕ್ಕಳು ಚೆಂದಗೆ ಚಂದಮಾಮ ನೋಡ್ಕೋತಾ ನಿದ್ರಗೆ ಜಾರೋ ಹೊತ್ತಲ್ಲಿ ಅಸಡ್ಢಾಳ ದನಿಯೊಂದಿಗೆ ಇವತ್ತೊಂದು ಇಂಟರೆಸ್ಟಿಂಗ್ ಎಪಿಸೋಡ್ ತಂದಿದೀನಿ.. ಎನ್ನುತ್ತಾ ಪಾಪಿಗಳ ಲೋಕಕ್ಕೆ ಪ್ರೇಕ್ಷಕರನ್ನ ಕರೆದುಕೊಂಡು ಹೋಗುವವರನ್ನು ಹೊಡೆಯೋಕೆ ಏನನಪ್ಪಾ ತರೋದು? ಹೋಗಲಿ, ಕಪಿಲ್ ಸಿಬಲ್ ಕವನಗಳು, ಅವು ಜಾಳು ಜಾಳು ಎಸ್ಎಮ್ಎಸ್ ಗಳೇ ಇರಬಹುದು, ಪತ್ರಿಕೆ ಮುಖಪುಟದಲ್ಲಿ ಕಾಣಿಸಿಕೊಂಡರೆ ಯಾರ ಮನಸಿನಲ್ಲೂ ಕ್ರೌರ್ಯ ಹುಟ್ಟಲ್ಲ ಅನ್ನೋದಂತೂ ಸತ್ಯ. ಅಬ್ಬಬ್ಬಾ ಅಂದ್ರೆ, ಇವಯ್ಯಂಗೆ ಇಷ್ಟೊಂದು ಪ್ರಚಾರ ಅಗತ್ಯ ಇರಲಿಲ್ಲ ಅಂದ್ಕೋಬೋದು ಓದುಗ ದೊರೆ ಅಷ್ಟೆ.

ಅನಂತಮೂರ್ತಿಯವರು ಮಾತನಾಡಿದ್ದಕ್ಕೆ, ಅವರ ಅಭಿಪ್ರಾಯ ಮಂಡಿಸಿದ ರೀತಿಗೆ ಘನತೆ ಇದೆ. ಮುಖ್ಯವಾಗಿ ಅವರು ಬರಹಗಾರ. ಕಪಿಲ್ಸಿಬಲ್ ಪುಸ್ತಕಕ್ಕೆ ಸಿಕ್ಕಿರೋ ಪ್ರಚಾರದ ಬಗ್ಗೆ ಬೇಸರ ಇಟ್ಕೊಂಡು ಆ ಮಾತನಾಡಿದ್ದಾರೆ. ಅವರು ಅಭಿಪ್ರಾಯ ಮಂಡಿಸುವಾಗ ಎಲ್ಲಿಯೂ ಉದ್ವೇಗಕ್ಕೆ ಒಳಗಾಗಲಿಲ್ಲ. ಆದರೆ ರವಿ ಹಾಗಲ್ಲ. ಒಂದೇ ಮಾತಿಗೆ ಮೆಟ್ಟಿನಾಗೆ ಹೊಡೀಬೇಕು ಎನ್ನೋದಾದರೆ, ಆತನ ಮನಸ್ಥಿತಿ ಎಂಥದು? ತಾನು ಸದಾ ಬರೆಯುವ, ಸದಾ ಚಿಂತಿಸುವ ಹಾಗೂ ಆಗಾಗ ತೆರೆ ಮೇಲೆ ನಟಿಸುವ ಪಾತ್ರಗಳ ಪ್ರಭಾವ ಹೀಗೆ ಮಾತನಾಡಿಸಿತೆ? ರವಿಯ ಬರವಣಿಗೆ ಹಾಗೂ ಆತನ ಟಿವಿ ಕಾರ್ಯಕ್ರಮಗಳಿಗಾಗಿ ಯಾವುದರಿಂದಲೂ ಆತನನ್ನು ಹೊಡೆಯುವ ಮೂಲಕ ತಿರಸ್ಕಾರವನ್ನು ವ್ಯಕ್ತಪಡಿಸುವುದು ಹೇಗೆ ಸರಿ ಅಲ್ಲವೋ... ಹಾಗೆಯೇ ತನ್ನ ವೃತ್ತಿಬಾಂಧವರ ಬಗ್ಗೆ ತುಂಬಿದ ಸಭೆಯಲ್ಲಿ ಹೀಗೆ ಮಾತನಾಡುವುದೂ ತರವಲ್ಲ.

Monday, September 8, 2008

ಸಂಪೂರ್ಣ ಚಂದ್ರ ತೇಜಸ್ವಿ





'ಎದ್ದೇಳಿ ಎಚ್ಚರಗೊಳ್ಳಿ'
ಎಂದು ಸಂದಣಿಯಲ್ಲಿ ಅಬ್ಬರಿಸಿ ಕೂಗಿತೊಂದು ವಾಣಿ.

''ಬೆಚ್ಚಿ ಬೀಳುವಿರೇನು ಪೆಚ್ಚುಗಳಿರಾ!

ಹತ್ತಿಪ್ಪತ್ತು ವರುಷ ಸುಪ್ಪತ್ತಿಗೆಯ ಮೇಲೆ

ಸರಸ ಸಲ್ಲಾಪದಲಿ ಕಳೆದುದ್ದಾಯ್ತು ಕಾಲ.

ಕವಿವ ಕಾಳರಾತ್ರಿಯ ಕೋಳ

ಕಾಣದೇ ಮರುಳ"


"ಉತ್ತರದ ಗಡಿಯ ನೆತ್ತರಿನ ಹೊನಲ

ಬಿತ್ತರದ ರಣಕಹಳೆ ಹೊಯ್ಲುಗಳ

ಕಂಡು ಕೇಳದ ನೀವು; ಕೀಟಗಳಿರಾ

ಎದ್ದೇಳಿ ಎಚ್ಚರಗೊಳ್ಳಿ"


ಎಂದಂದು ಬಾನುಲಿಯಲ್ಲಿ ಗಟ್ಟಿ

ಚೆಕ್ಕಿಗೊಂದು ರುಜು ಹೆಟ್ಟಿ

ಮಲಗಿದನು ಕವಿಯು.

ಕಕ್ಕಾಬಿಕ್ಕಿಯಾಗಿ ರಾತ್ರಿಗೆ ಸರಿದಿತ್ತು ಬುವಿಯು.

-ಪೂಚಂತೇ




(ನಮ್ಮ ಕಾಲದ ಬಹುಮುಖ್ಯ ಬರಹಗಾರ ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಕಾದಂಬರಿ 'ಕರ್ವಾಲೋ'ಬಗ್ಗೆ ಮತ್ತೊಬ್ಬ ಬಹುಮುಖ್ಯ ಬರಹಗಾರ ಲಂಕೇಶ್ ಬರೆದ ವಿಮರ್ಶಾ ಪತ್ರ ಇಲ್ಲಿದೆ.)

ಪ್ರಿಯ ತೇಜಸ್ವಿ,

'ಕನ್ನಡದ ಉಟ್ಟು ಓರಾಟಗಾರ'ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ ಪಡುವ ರೀತಿಯಲ್ಲಿ ಗೆಲುವಾಗಿದ್ದೆ. ಇದಕ್ಕೆ ಕಾರಣ ನಿಮ್ಮ ಪುಸ್ತಕ 'ಕರ್ವಾಲೋ.'

ನಿಮ್ಮ ಈ 'ಕರ್ವಾಲೋ.' ಕಾದಂಬರಿಯ ಮೇಲೆ ಒಳ್ಳೆಯ ವಿಮರ್ಶಕರು ಒಳ್ಳೊಳ್ಳೆಯ ವಿಮರ್ಶೆ ಬರೆಯಲಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ನನಗೆ ಓದಿದೊಡನೆ ಅನ್ನಿಸಿದ್ದನ್ನು ಬರೆಯುತ್ತಿದ್ದೇನೆ. ನನ್ನ ಸಂತೋಷವನ್ನು ನಮ್ಮ ಓದುಗರೂ ಪಡೆಯಲೆಂಬ ಕಾರಣಕ್ಕೆ ಇದನ್ನು ಅಚ್ಚು ಮಾಡುತ್ತಿದ್ದೇನೆ.

ನಿಮ್ಮ ಕಾದಂಬರಿಯಲ್ಲಿ ತುಂಬ ಳ್ಳೆಯದೆಂದು ಹೊಳೆದದ್ದು ನಿಮ್ಮ ತಮಾಷೆ ಮತ್ತು ಈ ತಮಾಷೆಯ ಮೂಲಕವೇ ನೀವು ನಿಜವಾಗಿಸುವ ಮನುಷ್ಯರು.

ನಮ್ಮ ಈ ಕೊಳೆತು ಹೋಗಿರುವ ಸಮಾಜದಲ್ಲಿ ಎಲ್ಲೆಲ್ಲೋ ಇದ್ದು ತಮ್ಮ ಜೀವನ ಸಾಗಿಸುವ, ತಮ್ಮ ಕೈಲಾದ್ದು ಮಾಡುವ ಮಂದಣ್ಣ ಮತ್ತು ಕರ್ವಾಲೋಗಳು ನಿಮ್ಮ ತಮಾಷೆಯನ್ನು ತೂರಿ ನಮ್ಮ ಮನಸ್ಸು ಕಲಕುತ್ತಾರೆ.

ಒಂದು ಕಡೆ ಮಂದಣ್ಣನಿದ್ದಾನೆ. ಹುಳಹುಪ್ಪಟೆಗಳನ್ನು ಹುಡುಕುತ್ತ ಹಿಡಿಯುತ್ತ ಹೋಗುವ ಈತನ ಪ್ರಕಾರ ಈತನ ಜೀವನದ ಏಕ ಮಾತ್ರ ಗುರು 'ಮೇರೇಜ್' ಆಗುವುದು. ಎಲ್ಲೆರೆದುರು ಮದುವೆಯಾಗಿ ಫೋಟೋ ಹಿಡಿಸಿಕೊಂಡು ನಾಲ್ಕೈದು ಮಕ್ಕಳು ಮಾಡುವ ಸದುದ್ದೇಶ ಉಳ್ಳ ಈತ 'ಮೇರೇಜ್'ನಲ್ಲೇ ವಿಫಲ. ಹಳ್ಳಿಯ ಸಾಮಾನ್ಯ ಅಪಾಪೋಲಿಯಂತೆ ಕಾಣುವ ಈತನ ಸರಳ ಆಶೆಗಳು ಇವನ ಆಳದ ಮುಗ್ಧತೆಯನ್ನು ತೋರುತ್ತವೆ. ಈ ಮುಗ್ಧತೆಯೊಂದಿಗೇ ಈತನನ್ನು ಇವನಿಗೆ ಗೊತ್ತಿಲ್ಲದಂತೆಯೇ ಸೆಳೆಯುವ ಪ್ರಕೃತಿಯ ಬಗೆಗಿನ ಕುತೂಹಲ ಇದೆ. ಈ ಕುತೂಹಲದಿಂದಾಗಿ ಈತ ಅತ್ಯಂತ ಅಕಾಡೆಮಿಕ್ ಆಗಿ ಕಾಣುವ ಮಾನವತಾವಾದಿ ಕರ್ವಾಲೋ ಎಂಬ ಫ್ರೊಫೆಸರ್ ಗೆ ಗೆಳೆಯನಾಗಿದ್ದಾನೆ.

ಕರ್ವಾಲೋವನ್ನು ನೀವು ಚಿತ್ರಿಸಿರುವ ರೀತಿಯಲ್ಲಿ ನಿಮ್ಮ ಪ್ರತಿಭೆ ಚೆನ್ನಾಗಿ ಕಾಣುತ್ತದೆ. ಮಂಗಳೂರರು ಕಡೆಯ ಬಡ ಪಾದ್ರಿಯಂತಿರುವ ಈತ ನೀವು ಸಂಶಯದಿಂದ ನೋಡುವ ಮತ್ತು ನಿಮ್ಮ ಆಳದಲ್ಲಿರುವ ಸಂಶೋಧಕನಿಗೆ ಸಂಕೇತವಾಗಿದ್ದಾನೆ. ಈ ಕರ್ವಾಲೋ ಕೂಡ ಮಂದಣ್ಣನಂತೆ ಹುಳಹುಪ್ಪಟೆ ಪ್ರಾಣಿಗಳನ್ನು ಕಂಡು ಅಭ್ಯಾಸ ಮಾಡುವ ಮನುಷ್ಯ. ಈತನ ಶಿಸ್ತು ಜೀವನದ ಹುಚ್ಚು ಹೊಳೆಗೆ ಹಾಕಿದ ಅಣೆಕಟ್ಟಿನಂತಿದೆ. ಪ್ರಕೃತಿಯ ಲಕ್ಷೋಪಲಕ್ಷ ಜೀವಿಗಳ ಬಗ್ಗೆ ಕುತೂಹಲ ತೋರುತ್ತ ಮೇಲ್ನೋಟಕ್ಕೆ ಒಣಕಲು ಮನುಷ್ಯನಂತೆ ಕಾಣುವ ಈತನಲ್ಲಿ ಮಾನವೀಯತೆ ಇದೆ. ನಿಮ್ಮ ಮಂದಣ್ಣನ ಬಗೆಗಿನ ಹಾಸ್ಯದ ಹಿಂದೆ ಹರಿಯುವ ಪ್ರೀತಿಯಂತೆಯೇ ಈ ಕರ್ವಾಲೋನ ಶಿಸ್ತಿನ ಹಿಂದೆ ಹರಿಯುವ ಅದಮ್ಯ ಕುತೂಹಲ ನನ್ನನ್ನು ಹರ್ಷದಿಂದ ಅಲ್ಲಾಡಿಸಿದ ಅಂಶ.

ನನಗೆ ಈ ಕಾದಂಬರಿ ನಾಲ್ಕು ಮುಖ್ಯ ಕಾರಣಕ್ಕೆ ತುಂಬ ಚೆನ್ನಾಗಿದೆ. ಮೊದಲನೆಯದಾಗಿ ನೀವು ಬರೀ ಹಂಜಿಪುಟ್ಟಿ ಎಂಬಂಥ ಹಾಸ್ಯಶೈಲಿಯಲ್ಲಿ ಬರೆಯುತ್ತ, ರೇಗುತ್ತ, ತಡವರಿಸುತ್ತಾ ಮನುಷ್ಯರ ಜೀವನವನ್ನು ಚಿತ್ರಿಸುವ ಬಗೆ. ಲಕ್ಷ್ಮಣ, ಮಂದಣ್ಣ, ಕರಿಯಣ್ಣ, ಯಂಕ್ಟ ಮುಂತಾದವರು ನಿಮ್ಮ ಶೈಲಿಯ ಮೂಲಕ ಜೀವ ಪಡೆಯುತ್ತಾರೆ. ನಿಮ್ಮ ಭಾವನೆಯ ಏರಿಳಿತಗಳ ನಡುವೆ ಈ ಜನ ಎದ್ದು ಓಡಾಡತೊಡಗುತ್ತಾರೆ. ಕೋಟ್ಯಂತರ ವರ್ಷಗಳ ಹಿಂದಿನಿಂದ ಇರುವ ಪ್ರಾಣಿಗಳನ್ನು ಹುಡುಕುತ್ತ ನೀವು ನಿಮ್ಮ ಸುತ್ತಣ ವಿವಿಧ ಮಟ್ಟದ ಜನರ ಹಲಬಗೆಯ ವಿಕಾಸ ಅಥವಾ ವಿಕಾಸಗೊಳ್ಳದಿರುವಿಕೆಯನ್ನು ಚಿತ್ರಿಸುವುದು. ನೀವು ನೋಡುವ ವ್ಯಕ್ತಿಗಳ ರೂಪ ಈ ಕಾದಂಬರಿಯ ವರ್ಟಿಕಲ್ ಮತ್ತು ಹಾರಿಜಾಂಟಲ್ ಗುಣ ತೋರುತ್ತದೆ. ಇದು ಎರಡನೆಯ ಅಂಶ.

ಮೂರನೆಯದಾಗಿ ನೀವು ತೋರುವ ಪ್ರಜ್ಞೆಯ ವಿಸ್ತಾರ ಮತ್ತು ಸಂಶೋಧನೆಯ ಸಂಭ್ರಮ. ಹೊಟ್ಟೆಪಾಡಿಗೆ ಪ್ರಾಣಿಶಾಸ್ತ್ರ ಕಲಿತು 'ಸಂಶೋಧಿಸುವ' ಜನರು ಈ ನಿಮ್ಮ ಕಾದಂಬರಿಯ ಸಂದರ್ಭದಲ್ಲಿ ಹಾಸ್ಯಸ್ಪದ ಅನ್ನಿಸುತ್ತಾರೆ.

ಆಮೇಲೆ ನಮ್ಮಲ್ಲಿ ಕೇವಲ ಸೋಷಲಿಸ್ಟನೊಬ್ಬ ಮಾತ್ರ ವರ್ಣಿಸಬಲ್ಲಂಥ ಅನೇಕ ಜಾತಿ ಜನ, ವರ್ಗಗಳನ್ನು ತಿಳಿದುಕೊಂಡು ಚಿತ್ರಿಸುವ, ಅತ್ಯಂತ ತೀವ್ರ ಆಸಕ್ತಿ ಮತ್ತು ಪ್ರೇಮದಿಂದ ಮಾತ್ರ ಕೈಗೂಡುವ ಗ್ರಹಿಕೆ. ಈ ಜೇಬುಗಳ್ಳನೆನ್ನಿಸಿಕೊಂಡ ಸಾಬರ ಪ್ಯಾರ ಹೇಗೆ ನಿಮ್ಮ ಮಾನವೀಯತೆಯಲ್ಲಿ ಮಗುವಾಗಿ ಹೊಂದಿಹೋಗುತ್ತಾನೆ!

ಎಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಯ ಬಗ್ಗೆ ನಿಮಗಿರುವ ನಿಲುವು. ಈ ಕಾದಂಬರಿಯ ನಾಯಕ ಕೆಲವೊಮ್ಮೆ ಬೇಸರಗೊಂಡು ತನ್ನ ತೋಟ ಮಾರಿ ಪೇಟೆ ಸೇರಲು ತೀರ್ಮಾನಿಸುತ್ತಾನೆ. ಆದರೆ ಈ ಪ್ರಕೃತಿ ಅವನನ್ನು ಬಿಡುವುದಿಲ್ಲ. ಮಂದಣ್ಣನೆಂಬ ಮನುಷ್ಯನ ಪ್ರಕೃತಿಯಿಂದ ಹಿಡಿದ ಹಾರುವ ಓತಿಕಾಟದ ಪ್ರಕೃತಿ ವಿಕಾಸದವರೆಗೆ ಈ ಅಪಾರ ಕುತೂಹಲ ಹಬ್ಬಿದೆ. ಕಾರಂತ, ಕುವೆಂಪು ತರುವಾಯ ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ನೀವೇ ಎಂದು ಕಾಣುತ್ತದೆ. ಈ ಇಡೀ ಕಾದಂಬರಿ ಪ್ರಕೃತಿಯ ಅಗಾಧ ಕೌತುಕಕ್ಕೆ ಹಿಡಿದ ಕನ್ನಡಿಯಾಗಿದೆ.

ಮೇಲಿನ ಮಾತುಗಳನ್ನು ಕಷ್ಟಪಟ್ಟು ಬರೆಯುತ್ತಿದ್ದೇನೆ. ದಿನದಿನಕ್ಕೆ ನಮ್ಮ ಜನರ ಬದುಕು ಕ್ರೂರವೂ ಅರ್ಥಹೀನವೂ ಆಗುತ್ತಿದೆ. ನಮ್ಮ ಹಾಸ್ಯ, ಟೀಕೆಗಳನ್ನು ಮೀರಿದ ರಾಕ್ಷಸರ ಬೆಳವಣಿಗೆ ನಮ್ಮ ಎಲ್ಲ ಒಳ್ಳೆಯದಕ್ಕೆ ಸವಾಲಾಗುತ್ತಿದೆ. ನಮ್ಮ ಜನ ತಮ್ಮ ಹಳ್ಳಿ, ಪರಿಸರಕ್ಕೆ ಮೀರಿದ ದುಷ್ಟ ಶಕ್ತಿಗಳ ಗುಲಾಮರಾಗುತ್ತಿದ್ದಾರೆ. ಈ ಮಟ್ಟದಲ್ಲಿ ನೋಡಿದಾಗ ನಿಮ್ಮಂಥ ಬಹುಮುಖ್ಯ ಬರಹಗಾರರ ಲೇಖನಗಳು ಕೂಡ ಎಲ್ಲೋ ರೊಮ್ಯಾಂಟಿಕ್ ಅನ್ನಿಸುತ್ತಾ ಹೋತುತ್ತವೆ.

ಬೇಸರ ಪಡಬೇಡಿ. ಎಲ್ಲಾ ಸರಿಹೋದೀತು. ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ.

Friday, September 5, 2008

ಅಬಬ್ಬಾ! ಅಬ್ಬಿ...



ಅಬ್ಬಿ ಜಲಪಾತ
ಬೆಂಗಳೂರಿನಿಂದ ಮಡಿಕೇರಿ 260 ಕಿ.ಮೀ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ 7 ಕಿಲೋಮೀಟರ್.
ಚಿತ್ರದುರ್ಗದಿಂದಾದರೆ ಹೊಸದುರ್ಗ, ಅರಸೀಕೆರೆ, ಹಾಸನ, ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ 275 ಕಿ.ಮಿ.















ಹಾರಂಗಿ ಜಲಾಶಯ
ಕುಶಾಲನಗರದಿಂದ 9 ಕಿ.ಮೀ.
ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ 1962, ಮುಗಿದ ವರ್ಷ 1982
ಅಣೆಕಟ್ಟೆಯ ಎತ್ತರ - 174 ಅಡಿ, ಉದ್ದ - 2775 ಅಡಿ.
ಜಲಾನಯನ ವಿಸ್ತೀರ್ಣ - 259 ಚದುರು ಕಿಲೋಮೀಟರ್. 1,60,000 ಎಕರೆಗಳಿಗೆ ನೀರುಣಿಸುತ್ತದೆ.
ಒಟ್ಟು ಮುಳುಗಡೆಯ ಪ್ರದೇಶ - 4717 ಎಕರೆ.





ಕಾವೇರಿ ನಿಸರ್ಗಧಾಮ
ಕುಶಾಲನಗರದಿಂದ 2 ಕಿ.ಮೀ.





ಬೈಲುಕುಪ್ಪೆ ಟಿಬೆಟ್ ನಿರಾಶ್ರಿತರ ತಾಣ
ಕುಶಾಲನಗರದಿಂದ 3 ಕಿ.ಮೀ.