Sunday, July 27, 2008

ಮಾಡೋದೆಲ್ಲ ಅನಾಚಾರ, ಮನೆಮುಂದೆ ಬೃಂದಾವನ



ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಕಂಡ ಕಂಡ ದೇವಸ್ಥಾನಗಳಿಗೆ ಹೋಗಿ ತನ್ನ ಸರಕಾರದ ಪರವಾಗಿ ದೇವರಲ್ಲಿ ಹರಕೆ ಹೊರುತ್ತಿದ್ದಾರೆ. ಕಾರಣ ಮಳೆ ಬರಲಿ ಎಂದು. ತಮಾಷೆಯೋ, ವಿಪರ್ಯಾಸವೋ ಮುಖ್ಯಮಂತ್ರಿಗಳ ಸರ್ಕಾರದ ಡಜನ್ ಮಂತ್ರಿಗಳು ಮಾಡುತ್ತಿರುವ 'ಲೋಕೋದ್ದಾರ' ಕಾರ್ಯ ಮಾತ್ರ ಕಣ್ಣಿಗೆ ಬಿದ್ದೇ ಇಲ್ಲ ಎನ್ನುವ ಹಾಗಿದೆ. ಮಳೆ ಬರಬೇಕಂದ್ರೆ ಕಾಡಿರಬೇಕು. ಪರಿಸರ ಚೆನ್ನಾಗಿರಬೇಕು. ಇದನ್ನು ನಾಲ್ಕನೇ ಕ್ಲಾಸಿನ ವಿದ್ಯಾರ್ಥಿ ಬೇಕಾದ್ರೂ ಕಾರಣ ಸಹಿತ ವಿವರಿಸ್ತಾನೆ. ಆದರೆ ಗಣಿ ಧಣಿಗಳು ಮಾಡುತ್ತಿರುವ ಕೆಲಸವೇನು? ಕಾಡನ್ನು ಅಡ್ಡಡ್ಡ ಸೀಳಿ, ನೆಲವನ್ನು ಅಗೆಯುತ್ತಿದ್ದಾರೆ. ಇಂಥದ್ದನ್ನು ಬಗಲಲ್ಲಿ ಕಟ್ಟಿಕೊಂಡು ಕಂಡ ದೇವರ ಮುಂದೆ ಕೈಮುಗಿದರೆ ಸಿಗುವುದಾದರು ಏನು? ಮುಖ್ಯಮಂತ್ರಿಗಳು 'ನಾನೇನು ಪಾಪ ಮಾಡಿಲ್ಲ' ಅಂತಾ ಶುದ್ಧ ಹಸ್ತರ ಹಾಗೆ ಮಾತಾಡುತ್ತಾ ತಿರುಗುತ್ತಿದ್ದಾರೆ. ಇಷ್ಟಕ್ಕೆಲ್ಲಾ ಒಲಿಯುವುದಕ್ಕೆ ವರುಣ ಯಡಿಯೂರಪ್ಪ ಕೊಂಡು ತಂದ ಶಾಸಕರೇ?

Wednesday, July 23, 2008

ಬಾಲ ಬಂಧುಲಮಲ್ಲ


ಹಿಂದಣ ಅನಂತವನು ಮುಂದಣ ಅನಂತವನು
ಒಂದು ದಿನ ಒಳಗೊಂಡಿತ್ತು ನೋಡಾ
ಒಂದು ದಿನವನೊಳಕೊಂಡು ಮಾತಾಡುವ ಮಹಾಂತನ
ಕಂಡು ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು ಕಾಲದಂತುವನರಿಯದೆ
ಅಂತೆ ಹೋದರು ಕಾಣಾ ಗುಹೇಶ್ವರ

Friday, July 18, 2008

ಏನು ಹೇಳಲೋ ನಿನ್ನ ಬಿರುದಾ ಮದಕೇರಿ...



'ನಮ್ಮ ನಾಡಿನ ಸಾಂಸ್ಕೃತಿಕ ಪುರಾಣ ಎಂದರೆ ಅದು ಕೇವಲ ರಾಮಾಯಣ, ಮಹಾಭಾರತಗಳ ಪುರಾಣ ಎಂಬ ಸಾರ್ವತ್ರಿಕ ಅಭಿಪ್ರಾಯವಿರುವ ಈ ಸನ್ನಿವೇಶದಲ್ಲಿ, ಬುಡಕಟ್ಟು ಮಹಾಕಾವ್ಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಹುಡುಕುವ ಕಾರ್ಯ ನಡೆಯಬೇಕಿದೆ. ಮಾತೆತ್ತಿದರೆ 'ಭಾರತೀಯ ಸಂಸ್ಕೃತಿ' ಎಂಬ ಸಾರ್ವತ್ರಿಕರಿಸುವ ಭ್ರಮೆಯಿಂದ ಹೊರ ಬಂದು ಪ್ರತಿಯೊಂದು ಭಾಷೆಯ ನೆಲಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ, ತನ್ನದೇ ಆದ ಸಂಸ್ಕೃತಿ ಇದೆ ಎಂಬ ವಾಸ್ತವದ ನೆಲೆಯಲ್ಲಿ, ನೆಲದ ಗುಣ ಹುಡುಕುವ ಕಾರ್ಯಕ್ಕೆ ನಾವೀಗ ಮುಂದಾಗಬೇಕಿದೆ. ಅಖಿಲ ಭಾರತೀಯ ಮಟ್ಟದ ರಾಮ, ಕೃಷ್ಣ, ಶಿವ ಅಥವಾ ಇತರೆ ದಶಾವತಾರದ ದೈವಗಳಂತಲ್ಲದೆ ಒಂದು ವಿಶಿಷ್ಟ ಭೂಪ್ರದೇಶದ ಅಥವಾ ಒಂದು ಬುಡಕಟ್ಟಿನ ಪರಂಪರೆಯಲ್ಲಿ ಸೃಷ್ಟಿಯಾಗಿರುವ ದೈವ ಪುರುಷರು ಇವತ್ತಿನ ಸಂಸ್ಕೃತಿ ಚಿಂತಕರಿಗೆ ಮುಖ್ಯವಾಗಬೇಕಾಗಿದೆ. ಕಾಡು ಮತ್ತು ನಾಡಿನ ಹತ್ತಾರು ಜನ ವರ್ಗಗಳು ಪೂಜಿಸುವ ದೈವಗಳು ಮತ್ತು ಆ ದೈವಗಳ ಬಗ್ಗೆ ಅವರು ಕಟ್ಟಿಕೊಂಡ ಕಥನಗಳು ನೂರಾರು. ಈ ಕಥನಗಳೇ ನಿಜವಾದ ಅರ್ಥದಲ್ಲಿ ನಮ್ಮ ಸಂಸ್ಕೃತಿಯ ಇತಿಹಾಸವನ್ನು ರೂಪಿಸಬಲ್ಲ ಮುಖ್ಯ ಸಂಗತಿಗಳು. ಈ ಕಥನಗಳನ್ನು ಅಭ್ಯಸಿಸುವುದರಿಂದ ಭಾರತದ ಇದುವರೆಗಿನ ವ್ಯವಸ್ಥೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಜನವರ್ಗಗಳಿಗೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆ ಎಂಬುದನ್ನೂ ಆ ಸಂಸ್ಕೃತಿಗೆ ಒಂದು ಪರಂಪರೆ ಇದೆ ಎಂಬುದನ್ನೂ ಆ ಪರಂಪರೆಯೇ ಒಂದು ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆ ಎಂಬುದನ್ನೂ ನಾವು ತಿಳಿಯುತ್ತೇವೆ' ಎಂದು ಚಂದ್ರಶೇಖರ ಕಂಬಾರರು ಕನ್ನಡ ವಿವಿ ಹೊರತಂದ 'ಮಂಟೇಸ್ವಾಮಿ ಮಹಾಕಾವ್ಯ' ಕ್ಕೆ ಮುನ್ನುಡಿಯಲ್ಲಿ ಬರೆಯುತ್ತಾರೆ.

ಕನ್ನಡದಲ್ಲಿ ಐತಿಹಾಸಿಕ ಜನಪದ ಕಾವ್ಯಗಳ ಕುರಿತು ಶ್ರೀಮತಿ ಜಯಲಕ್ಷ್ಮಿ ಸೀತಾಪುರ ರವರು ಮಹತ್ವದ ಸಂಶೋಧನೆ ಮಾಡಿದ್ದಾರೆ. ಕರ್ನಾಟಕದ ಜನಪದ ವೀರಕಾವ್ಯಗಳಿಗೆ ಪ್ರೇರಣೆಯನ್ನು ನೀಡಿದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗ ಮುಖ್ಯವಾದುದು. ಚಿತ್ರದುರ್ಗದ ವೀರರನ್ನು ಕುರಿತಂತೆ ವಿಫುಲವಾಗಿ ಲಾವಣಿಗಳು ಮತ್ತು ಕಾವ್ಯಗಳು ಸೃಷ್ಟಿಯಾಗಿವೆ. ಅವುಗಳಲ್ಲಿ ಕೆಲವನ್ನು ಜಯಲಕ್ಷ್ಮಿಯವರು ಸಂಗ್ರಹಿಸಿದ್ದಾರೆ. ಅವರ ಸಂಗ್ರಹದಲ್ಲಿ ಚಿತ್ರದುರ್ಗದ ಮದಕರಿನಾಯಕರಿಗೆ ಸಂಬಂಧಿಸಿದ್ದನ್ನು ಮಾತ್ರ ನಿಮಗೆ ಪರಿಚಯಿಸುತ್ತಿದ್ದೇನೆ.

ಚಿತ್ರದುರ್ಗ ಜಿಲ್ಲೆಯ ಕೆರೆ, ದೇವಾಲಯ, ಸ್ಮಾರಕ ಶಿಲೆ ಮುಂತಾದವುಗಳ ಭಿನ್ನ ನೆಲೆಯಲ್ಲಿ ಅನೇಕ ವೀರರ ಕಥೆಗಳು ಹುದುಗಿಕೊಂಡಿವೆ. ಚಿತ್ರದುರ್ಗ ಜಿಲ್ಲೆ ಪ್ರೇಮಗೀತೆಗಳಿಗೇ ಅಲ್ಲದೆ ಚಾರಿತ್ರಿಕ ಗೀತೆಗಳಿಗೂ, ಕೌತುಗೀತೆಗಳಿಗೂ ಆಗರವೆನಿಸಿವೆ ಎಂಬುದನ್ನು ಗುರುತಿಸಿ ಮತಿಘಟ್ಟ ಕೃಷ್ಣಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಕೋಲಾಟ ಪದಗಳನ್ನು, ಐತಿಹಾಸಿಕ ಗೀತೆಗಳನ್ನು ಪ್ರಕಟಿಸಿದ್ದಾರೆ. ಈ ಜಿಲ್ಲೆಯ ಕೋಲಾಟದ ಪದಗಳನ್ನು ಹಾಡುವ ‘ನಾಯಕರು’ ತಮ್ಮ ಕುಲಭೂಷಣರಾದ ದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದ ಪದಗಳನ್ನು ಹಾಡುತ್ತಾರೆ. ವಿಶೇಷ ಎಂದರೆ ಇವರು ಚಿತ್ರದುರ್ಗದ ನಾಯಕರೆಲ್ಲರನ್ನು ‘ಮದಕರಿ ನಾಯಕ’ ಎಂದೇ ಹೇಳುತ್ತಾರೆ.

ಮಾಯಕೊಂಡದ ಯುದ್ಧ ಚಿತ್ರದುರ್ಗದ ಇತಿಹಾಸದಲ್ಲಿ ತುಂಬ ಮಹತ್ವದ್ದು. ಆ ಯುದ್ಧದಲ್ಲಿ ದುರ್ಗದ ನಾಯಕ ಮತ್ತು ಆತನ ನೆಚ್ಚಿನ ಸರದಾರ ನಾಡಿಗ ಸಂಕಣ್ಣ ಮಡಿದರು. ಆ ಯುದ್ಧದಲ್ಲಿ ಕುತಂತ್ರದಿಂದ ನಾಯಕನನ್ನು ಕೊಲ್ಲಲಾಯಿತೆಂಬ ಸೂಚನೆ ಕೂಡ ಕೆಲವು ಪದಗಳಲ್ಲಿ ಸಿಗುತ್ತದೆ. ‘ಕಾಳಗದ ಪದ’ ಯುದ್ಧದ ಬಿರುಸನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ. ರಾಜಕುಮಾರ ಜಂಪಣ್ಣನ ಶೌರ್ಯವನ್ನು ಕುರಿತ ಪದಗಳು, ಅವನ ಅಕಾಲ ಮರಣವನ್ನು ಕುರಿತ ಪದಗಳು ಕೂಡ ಮತಿಘಟ್ಟ ಅವರ ಸಂಗ್ರಹದಲ್ಲಿವೆ. “ಒಂದು ರೀತಿಯಲ್ಲಿ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲೆಗೆ ವಿಶಿಷ್ಟ ಸ್ಥಾನ ಸಲ್ಲಬೇಕು” ಎಂಬ ಮತಿಘಟ್ಟ ಅವರ ಮಾತು, ಚಿತ್ರದುರ್ಗಕ್ಕೆ ಐತಿಹಾಸಿಕ ಕಾವ್ಯಗಳಲ್ಲಿ ಸಲ್ಲಬೇಕಾದ ಸ್ಥಾನವನ್ನು ನಿರ್ದೇಶಿಸುತ್ತದೆ.

ಚಿತ್ರದುರ್ಗವನ್ನು ಕುರಿತ ಗೀತೆಗಳನ್ನು ಸಂಗ್ರಹಿಸಿದವರಲ್ಲಿ ಕೃಷ್ಣಮೂರ್ತಿ ಅವರೇ ಅಲ್ಲದೆ, ಕ.ರಾ.ಕೃ. ಮತ್ತು ಹುಲ್ಲೂರು ಶ್ರೀನಿವಾಸ ಜೋಯಿಸ ಅವರುಗಳೂ ಮುಖ್ಯರಾದವರು. ಹುಲ್ಲೂರು ಶ್ರೀನಿವಾಸ ಜೋಯಿಸರು ಹಲವಾರು ಗೀತೆಗಳನ್ನು ಸಂಗ್ರಹಿಸಿರುವುದೇ ಅಲ್ಲದೆ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ‘ಪಾಳೆಯಗಾರರ ಜನಪದ ಗಾತೆಗಳು’, ‘ಮಾಯಕೊಂಡದ ಲಡಾಯಿ’, ‘ಮಾಯಿಕೊಂಡದ ಮುತ್ತಿಗೆ ಅಥವಾ ರಣಧೀರ ಹಿರೇ ಮದಕರಿನಾಯಕ’ ಮುಂತಾದ ಸಂಗ್ರಹಗಳನ್ನು ಹೊರತಂದಿರುವ ಶ್ರೀನಿವಾಸ ಜೋಯಿಸರು ಚಿತ್ರದುರ್ಗದ ವಿದ್ವಾಂಸರ ಗಮನ ಸೆಳೆದವರು. ಕ.ರಾ.ಕೃ. ಅವರು ಪ್ರಕಟಿಸಿದ ‘ಮಲ್ಲಿಗೆ ನಗುತಾವೆ’ ಎಂಬ ಸಂಕಲನದಲ್ಲಿ ‘ಚಿತ್ರದುರ್ಗದ ಮದಕರಿ ನಾಯಕನ ಗೀತೆಗಳು’, ‘ಏನು ಹೇಳಲೋ ನಿನ್ನ ಬಿರುದಾ’, ‘ನಾಯಕನ ರಥವ ಕುರಿತು ಪ್ರಕಟಿಸಿದ ‘ಪಾಳಯಗಾರರಪದಗಳು’ ಮತ್ತು ‘ಚಿತ್ರಕಲ್ಲು ಮದಕರಿ’ ಎಂಬ ಸಂಕಲನಗಳಲ್ಲಿ ಮದಕರಿ ನಾಯಕನನ್ನು ಕುರಿತ ಬಿಡಿಗೀತೆಗಳು ಒಟ್ಟಿಗೆ ಸಿಗುತ್ತವೆ.

ಐತಿಹಾಸಿಕವಾಗಿ ಹಿರಿಯ ಮದಕರಿನಾಯಕ ಕ್ರಿ.ಶ.1721 ರಿಂದ 1748ರವರೆಗೆ ಆಳ್ವಿಕೆ ನಡೆಸಿದರೆ, ಕೊನೆಯ ಅರಸನಾದ ರಾಜಾವೀರ ಮದಕರಿನಾಯಕ ಕ್ರಿ.ಶ. 1754 ರಿಂದ 1779ರವರೆಗೆ ಅಧಿಕಾರ ನಡೆಸಿದ್ದಾನೆ. ಹಿರೇ ಮದಕರಿ ನಾಯಕ ಇಂದಿನ ಜಿಲ್ಲೆಯ ಮಾಯಕೊಂಡದಲ್ಲಿ ನಡೆದ ಯುದ್ಧದಲ್ಲಿ (ಕ್ರಿ.ಶ.1748-49) ಸಾವನ್ನಪ್ಪಿದವನು. ರಾಜಾ ಮದಕರಿನಾಯಕ ಸ್ವಜನರ ಪಿತೂರಿಗೂ ವೈರಿಗಳ ತಂತ್ರಕ್ಕೂ ಬಲಿಯಾದವನು. ನೆರೆ ಸಂಸ್ಥಾನಿಕರ ದ್ವೇಷಕ್ಕೆ ಆತ ಬಲಿಯಾಗಿ ಶ್ರೀರಂಗಪಟ್ಟಣದ ಹೈದರಾಲಿಗೆ ದುರ್ಗವನ್ನು ಒಪ್ಪಿಸಿದನು. ಆತ ಸೆರೆಯಾಳಾಗಿ ದುರ್ಗದ ಚರಿತ್ರೆಯಲ್ಲಿ ದುರಂತಕ್ಕೆ ಆಸ್ಪದವಾದವನು. ಆದರೆ ಈ ಚಾರಿತ್ರಿಕ ಸಂಗತಿಗಳನ್ನು ಜನಪದ ಕವಿಗಳು ತಮ್ಮದೆ ಆದ ರೀತಿಯಲ್ಲಿ ನಿರೂಪಿಸಿದ್ದಾರೆ.

ತಾವರೆಗೆರೆ, ಇಕ್ಕನೂರು, ಕೋಡಿಹಳ್ಳಿಗಳನ್ನು ವಶಪಡಿಸಿಕೊಂಡ ಮದಕರಿ ನಾಯಕ:

ಸೀರ್ಯಾವ ಗೆದ್ದ ಸಿನ್ನದುಂಗುರ ಗೆದ್ದ
ಮಾತಿನಲ್ಲಿ ಗೆದ್ದ ಮಲೆನಾಡು.

ಮದಕರಿ ನಾಯಕನ ಇಂಥ ವೀರಗುಣವನ್ನು ತಿಳಿಸುವ ಹಲವು ಗೀತೆಗಳಿವೆ. ಇವುಗಳಲ್ಲಿ ಮದಕರಿನಾಯಕ ಗೆದ್ದ ಪ್ರದೇಶಗಳನ್ನು ಜನಪದರು ಉಲ್ಲೇಖಿಸಿದ್ದಾರೆ:

ಕುಂತೆ ಕಡಿದ ಕುಂದರಿಪ ತಂಕ
ನಿಂತ್ ಕಡಿದ ನೀಡುಗಲ್ಲಿನ ತಂಕ
ಬಾಗಿ ಕಡೆದ ಬಳ್ಳಾರಿ ತಂಕ
ತೂಗಿ ಕಡಿದ ತುಮ್ಕೂರು ತಂಕ
ಧೀರ ಮದಕೇರಿ ಕಡಿದ
ಸೀರ್ಯ ದೂರೆ ಬಾಗಿಲ ತಂಕ

ಮದಕರಿ ನಾಯಕ ಮೇಲು ದುರ್ಗವನ್ನು ಭದ್ರಪಡಿಸಿ ಆಯಕಟ್ಟಿನ ಸ್ಥಳಗಳಲ್ಲಿ ಫಿರಂಗಿಗಳನ್ನು ಇಡಿಸಿದ ಒಳಪೇಟೆ ಹೊರಪೇಟೆಗಳನ್ನು ಕಟ್ಟಿಸಿದ.

ಮೇಲು ದುರುಗದ ಮ್ಯಾಲೆ ಜೋಡೆಳ್ಳು ಫಿರಂಗಿ
ನೋಡೆ ನಿಂಗಮ್ಮ ನಿನಮಗ
ನೋಡೆ ನಿಂಗಮ್ಮ ನಿನಮಗ ಮೆದಕೇರಣ್ಣ
ಸಿರ್ಯಾವೇ ಗೆದ್ದು ಬರುತಾನೆ

ಎಂಬುದು ಜನರ ವಿಶ್ವಾಸ ಮೂಡಿಬಂದ ಮಾತು.
ರಾಜ್ಯವನ್ನು ಸುಭದ್ರಗೊಳಿಸಿದ ಮದಕರಿನಾಯಕ ಜರಮಲೆ ಸೀಮೆಗೆ ಯುದ್ಧಕ್ಕೆ ಹೊರಟ. ಗಂಡುಗಲಿಯಾದ ನಾಯಕ ಓಲೆಯನ್ನು ನೋಡಿ ಸಿಡಿದೆದ್ದು ಹೀಗೆ:

ಈಬೇಟು ಹುಡುಗರು ಚೀಟಿ ಚಿಲ್ಲಣದೋರು
ಆಸುರು ಬಲ್ಕೀದ ಈ ಬೇರು
ಅಸುರು ಬಿಲ್ಕೀದ ಈಬೇರ್ ಮೆಲಕೇರಣಗೆ
ಬೇಬೇ ಸಲಾಮ್ ತಾವು ಕೊಡುತಾರೆ
ದೊಡ್ಡ ದೊಡ್ಡ ಹಿರಿಯರು ಎದ್ದು ಗುರಿಕಾರರು
ಚಿಂತರುಕಲ್ಲಿಗು ತಕ್ಕ ಹಳಬರು - ಮೆದಕೇರಣಗೆ
ನಿಂತು ಸಲಾಮತಾ ಕೊಡುತಾರೆ.

ಯುದ್ಧದ ಕರೆಯನ್ನು ಕೇಳಿದ ಮದಕರಿ ನಾಯಕನು ಎದ್ದ ಬಗೆಯನ್ನು ಜನಪದ ಕವಿ ವರ್ಣಿಸಿದ ರೀತಿ ಇದು:

ಎದ್ದನು ಮದಕೇರಿ ಎಳೆಮೀಸೆ ತಿರುವುತ
ಕೈಕಾಲು ಮುಖವ ತೊಳೆದಾನೆ - ಮದಕೇರೆ
ನಿಲುವ ಕನ್ನಡೆಯ ಹಿಡಿದಾನೆ ಮದಕೇರಿ
ಇಟ್ಟಾನೆ ಹಿರಿಯ ನಾಮಗಳ.

ಯುದ್ಧಕ್ಕೆ ಹೊರಟ ಮದಕರಿ ನಾಯಕನು ತನ್ನ ಕುಲದೇವತೆ ಉಚ್ಚಂಗಿ ಎಲ್ಲಮ್ಮನ ಬಳಿಗೆ ಪ್ರಸಾದ ಕೇಳಲು ಹೋಗುತ್ತಾನೆ. ಆದರೆ ದೇವಿ ಎಡಗಡೆ ವರ ಕೊಡುತ್ತಾಳೆ. ಅವನು ಕುಪ್ಪಸ ತೊಡಲು ಹೋದಾಗ ‘ಬೆಕ್ಕೆರಡು ಸೀತಾವು’ ಇಷ್ಟಾದರೂ ಮದಕರಿ ನಾಯಕ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನು ಹಾವಿನ ಶಕುನಕ್ಕೂ ಅಂಜಲಿಲ್ಲ. ಮೇಲುವರ್ಗದ ಸಿದ್ದೇಶನ ಗುಡಿಯನ್ನೂ ಕೇಳಲಿಲ್ಲ. ಆತ ವರನನ್ನು ಕೇಳಿದ ಎಲ್ಲ ದೈವಗಳೂ ಅವಕೃಪೆಯನ್ನೇ ನೀಡಿವೆ.

ಮದಕರಿ ನಾಯಕ ಮಾಯಕೊಂಡದ ಕಣದಲ್ಲಿ ಯುದ್ಧ ಮಾಡಿದ ಚಿತ್ರವನ್ನು ಜನಪದ ಕವಿಗಳು ವರ್ಣಿಸಿದ್ದಾರೆ. ಸಂಕನೆಂಬ ಕಲಿಯನ್ನು ಕೂಡಿಕೊಂಡು ಮದಕರಿ ಹೋರಾಡಿದ ರೀತಿ ಇದು.

ಆನೆ ಮೇಲೆ ಮೆದಕೇರಿ ಕೆಳಗಡೆ ಸಂಕಣ್ಣ
ಆಗ ಬ್ಯಾಗದಲೇ ಹೊರಟಾರೋ
ಆಗ ಬ್ಯಾಗದಲೀ ಹೊರಟು ಹೋಗುವಾಗ
ತುರುಕರ ತಂಡೇ ಬೆನ್ನತ್ತಿ
ಅಡ್ಡಗಟ್ಟಿದವಣ್ಣ ಆರು ಸಾವರಿದಂಡು
ಬೆನ್ನು ಹತ್ತಿದವಣ್ಣ ಮೂರು ಸಾವಿರದಂಡು
ಮೆದರಕೇರಿಗಾಗಾ ಸಿಗಕೊಡದರು.

ಮದಕರಿ ನಾಯಕನನ್ನು ಕತ್ತಿಯಲ್ಲಿ ಕಡಿದರು, ಬಾಕುವಿನಲ್ಲಿ ತಿವಿದರು. ಕತ್ತಿ ಕಟಾರಿ ಕೈಹಿಟ್ಟು ಹೊದಾಗ ‘ಮಿಟ್ಟಿ’ಯಲ್ಲೇ ಹೊಡೆದರು. ಕತ್ತಲಾಗುವ ವೇಳೆಯಲ್ಲಿ ಮಾಯಕೊಂಡದ ಕೋಟೆಯ ಬಾಗಿಲನ್ನು ಹಾಕಿಕೊಂಡರು. ಮದಕರಿನಾಯಕ ಚಿತ್ರದುರ್ಗಕ್ಕೆ ಹೋಗುವುದು ಬೇಡವೆಂದು ನಿಶ್ಚಯಿಸಿದ. ಗಂಗಾಸ್ನಾನ ಮಾಡಿ ಕುಲದೇವರನ್ನು ನೆನೆದ. ಮನೆದೇವರು ಪ್ರತ್ಯಕ್ಷನಾಗಿ ವರ ಬೇಡೆಂದಾಗ:

ಚಿತ್ರದುರ್ಗಕ್ಕೆ ಹೋದರೆ ಹಿಂಸೆ ಬಂದಿತು ನಮಗೆ
ಇಲ್ಲಿನ ಈ ರಾಜ್ಯವು ಬೇಡೆಂದ ಮನೆಸ್ವಾಮಿ
ನನ್ನ ತಗೊಂಡೆ ಹೋಗೆಂದ.

ಅದಕ್ಕೆ ಮನೆ ಸ್ವಾಮಿ ಮೂರು ಮಾಯದ ಹಣ್ಣನ್ನು ಆತನ ಕೈಗೆ ಕೊಟ್ಟ. ಹಣ್ಣಿನೊಡನೆ ಆನೆಯನ್ನು ಹತ್ತಿ ಕುಳಿತ ಮದಕರಿ ರಣಭೂಮಿಗೆ ಬಂದ. ಆನೆಗೊಂದು ಹಣ್ಣು ತಿನ್ನಿಸಿ, ತಾನೊಂದು ಹಣ್ಣು ತಿಂದು ಸಂಕಣ್ಣನಿಗೊಂದು ಹಣ್ಣನ್ನು ಕೊಟ್ಟ. ಆನೆಯೂ ಸೇರಿದಂತೆ ಇವರಿಬ್ಬರು ರಣರಂಗದಲ್ಲೇ ಪ್ರಾಣಬಿಟ್ಟರು.

ಸ್ವಾಭಿಮಾನಿಯಾದ ಮದಕರಿ ನಾಯಕ ದುರ್ಗಕ್ಕೆ ಹಿಂತಿರುಗಲಿಲ್ಲ. ಸಾಹಸಿಯಾಗಿ ಅವನು ಹೋರಾಡಿದರೂ ಕೋಟೆ ಆತನ ಕೈವಶವಾಗಲಿಲ್ಲ. ಆತ ದುರ್ಗಕ್ಕೆ ಹಿಂದಿರುಗದೆ ರಣರಂಗದಲ್ಲಿಯೇ ಮೃತ್ಯುವನ್ನು ಆಹ್ವಾನಿಸಿದ. ಇದನ್ನು ಕವಿಗಳು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ.

ಹೋದೋನೆ ಸತ್ತರಿಕೆ ಹೋದೋನೆ ಪಲ್ಲಕ್ಕಿ
ಹಿಂದಿರುಗಿ ದುರ್ಗಕ್ಕೆ ಬಂದಾವೋ
ತಾಯೀನೆ ಚಿನ್ನಮ್ಮ ಏನೆಂದು ಅಳುತಾಳೆ
ಹೋದಾನೆ ಕಂದಮ್ಮ ಬರಲಿಲ್ಲ.
ಸುದ್ದಿ ತಂದಣ್ಣಾಗೆ ಮಜ್ಜಿಗೆ ಬಾನಾ ಇಟ್ಟು
ಏನು ಸುದ್ದಿಯ್ಯಾ ರಣದೊಳಗೆ
ಏನು ಸುದ್ದಿ ಇಲ್ಲ ಏನು ಗದ್ದಲವಿಲ್ಲ
ಧೀರ ಮದಕೇರಿ ಮಡಿಹೋದ

ಮದಕರಿ ಆನೆಯ ಮೇಲೆ ಕುಳಿತೇ ಮರಣವನ್ನು ಅಪ್ಪಿದ ದೃಶ್ಯ ಅತ್ಯಂತ ದಾರುಣವಾದದ್ದು. ಮುಂಗೋಳಿ ಕೂಗಿ ಮೋಡ ಕೆಂಪೇರಿದಾಗ ಮಾಯಕೊಂಡದ ಬಾಗಿಲನ್ನು ತೆರೆದು ನೋಡಿದ ಶತ್ರುಗಳಿಗೆ ಆನೆ ಕಣ್ಣ ಮುಂದೆ ತೋರಿತು. ಅವರು ಹೆದರಿ ಮತ್ತೆ ಬಾಗಿಲನ್ನು ಹಾಕಿಕೊಂಡರು. ಮದಕರಿ ನಾಯಕ ನೆಲ್ಲಕ್ಕುರುಳಿದ ರೀತಿಯನ್ನು ಜನಪದ ಕವಿ ಪರಿಣಾಮಕಾರಿಯಾಗಿ ಹೀಗೆ ವರ್ಣಿಸಿದ್ದಾನೆ.
ಬಿದ್ದಾನೆ ಮದಕೇರಿ ಬಿಳಿಯಂಗಿ ಮೇಲಾಗಿ
ವಜ್ಜುರದ ಬಾಕು ಅಡಿಯಾಗಿ
ವಜ್ಜುರ ಬಾಕು ಅಡಿಯಾಗಿ ಮದಕೇರಣ್ಣ
ಸೊರಿದಿಗೆ ಮುಖ ಎದುರಾಗಿ

– (ಅಪ್ರಕಟಿತ) ಜಯಮ್ಮ ಸಂಗಡಿಗರು ಚಿತ್ರದುರ್ಗ, – ಸಂಗ್ರಹ: ಶ್ರೀಮತಿ ಜಯಲಕ್ಷ್ಮಿ ಸೀತಾಪುರ.

Saturday, July 12, 2008

ಮಾತು ಬೆಣ್ಣೆ.. ಪ್ರೀತಿ ಬಿಸ್ಕತ್..



ದಾಮಿ ಪರಿಚಯ ಮಾಡಿಸುತ್ತಾ, ಹಟ್ಟಿ ಚಿನ್ನದ ಗಣಿಯಲ್ಲಿರುವ ನನ್ನ ಮಾವ ರವಿ ಕುಮಾರ್ ಬಗ್ಗೆ ಹೇಳಿದ್ದೆ. ಅವರ ಮನೆಯಲ್ಲಿ ಕಳೆದ ಎರಡು ದಿನಗಳು ತುಂಬಾ ದಿನ ನೆನಪಿನಲ್ಲಿರುವಂತಹ ದಿನಗಳು. ಗಣಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ವಾಸಕ್ಕಾಗಿ ಹಟ್ಟಿ ಹಳ್ಳಿಯಿಂದ ಸುಮಾರು ದೂರದಲ್ಲಿ ಸುಸಜ್ಜಿತ ಕ್ವಾಟ್ರಸ್ ಗಳಿವೆ. ಇವುಗಳನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತಂತೆ. ವಿಶಾಲವಾದ ಕಾಂಪೋಂಡ್. ಒಳಗೆ ವಿವಿಧ ಬಗೆಯ ಹೂ ಗಿಡಗಳ ಕುಂಡಗಳು. ನಡುವೆ ಜೋಕಾಲಿ. ತುಂಬಾ ಸುಂದರವಾದ ಜಾಗ.
ಮಾವನವರದ್ದು ಮೂವರು ಮಕ್ಕಳ ಸುಖವಾದ ಸಂಸಾರ. ರವಿ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರು. ಇವರು ಬಿ.ಇ. ಮಾಡಿದ್ದು ಹಾಸನದಲ್ಲಿ. ಅದೇ ಕಾಲೇಜಿನಲ್ಲಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಎಂಜಿನಿಯರಿಂಗ್ ಮಾಡುತ್ತಿದ್ದರು. ಇವರಿಬ್ಬರೂ ಆಪ್ತಮಿತ್ರರು. ಈಗಲೂ ತಮ್ಮ ಬಾಲ್ಯದ ಕ್ರಿಕೆಟ್ ಬದುಕನ್ನು ಸ್ವಾರಸ್ಯವಾಗಿ ನನ್ನ ಮಾವ ವಿವರಿಸುತ್ತಿರುತ್ತಾರೆ.

ನಾವು ಸಣ್ಣವರಿರುವಾಗ ಬೇಸಿಗೆ ಮತ್ತು ದಸರಾ ರಜೆಗಳನ್ನು ಕಳೆಯಲು ನಮ್ಮ ಹಳ್ಳಿ (ಮುಸ್ಟೂರು)ಗೆ ಹೋಗುತ್ತಿದ್ದೆವು. ಮಂಜು ಮತ್ತು ನಾಗರಾಜ ನನ್ನ ಬಾಲ್ಯದ ಸ್ನೇಹಿತರು. ವರಸೆಯಲ್ಲಿ ಒಬ್ಬನು ಮಾವ, ಮತ್ತೊಬ್ಬನು ಅಳಿಯ. ಇವರಿಬ್ಬರು ಮಹಾನ್ ಪೋಕರಿಗಳು. ಚಿಕ್ಕ ವಯಸ್ಸಿಗೇ ಸೀಗರೇಟ್ ಸೇದುವ ಹವ್ಯಾಸ ರೂಢಿಸಿಕೊಂಡಿದ್ದರು. ಇವರ ಜೊತೆ ಸೇರಿ ನಾನೂ ಒಮ್ಮೆ ರುಚಿ ನೋಡಿ ನಮ್ಮ ತಾಯಿಯವರ ಕೈಗೆ ಸಿಕ್ಕಿಬಿದ್ದು ದೊಡ್ಡ ರಂಪ ಆಗಿ ಬೇಗನೆಯೇ ಸೀಗರೇಟ್ ಚಟ ಕೈ ಬಿಡಬೇಕಾಯಿತು. ಇವರಿಬ್ಬರಿಗೆ ನಮ್ಮ ಬಂಧು ಬಾಂಧವರ ಎಲ್ಲ ರಹಸ್ಯಗಳೂ ಗೊತ್ತಿರುತ್ತಿತ್ತು. ಇವರ ಜಾಸೂಸ್ ಗಿರಿಯಿಂದ ನಮ್ಮ ರವಿ ಮಾವನವರ ಪ್ರೇಮ ಪ್ರಕರಣ ಬಯಲಾಗಿತ್ತು. ನಮ್ಮ ತಂದೆಯವರ ಚಿಕ್ಕಪ್ಪನ ಮಗಳು ನಾಗರತ್ನ ( ನನಗೆ ಅತ್ತಿಗೆ ) ಮತ್ತು ನನ್ನ ಮಾವನರ ನಡುವೆ ಸುಮಾರು ದಿನಗಳ ಪ್ರೇಮವಿತ್ತು. ಬಿ.ಎ ಮುಗಿಸಿ ಮನೆಯಲ್ಲಿದ್ದ ನನ್ನ ಅತ್ತಿಗೆ ಮತ್ತು ಎಂಜಿನಿಯರಿಂಗ್ ಮುಗಿಸಿ ನಿರುದ್ಯೋಗಿಯಾಗಿದ್ದ ನನ್ನ ಮಾವನವರಿಗೆ ಮಾಡಲು ಬೇರೇನು ಕೆಲಸವಿಲ್ಲದೆ ಪ್ರೀತಿಸುತ್ತಿದ್ದರು. ಇವರಿಬ್ಬರ ಕುಚೇಷ್ಟೆಯಿಂದ ನಮ್ಮ ಮಾವನವರ ಪ್ರೇಮ ಹಿರಿಯರಿಗೆ ಗೊತ್ತಾಗಿ ಬೇಗನೆ ಇಬ್ಬರಿಗೂ ಮದುವೆ ಮಾಡಬೇಕಾಯಿತು.

ನಂತರ ಮಾವನವರಿಗೆ ಹಟ್ಟಿ ಚಿನ್ನದ ಗಣಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಜಿನಿಯರ್ ಕೆಲಸ ಸಿಕ್ಕಿತು. ಇಲ್ಲಿ ಬಂದು ನೆಲಸಿದರು.

ನನ್ನ ಅತ್ತಿಗೆ ಪಾಕ ಪ್ರವೀಣೆ. ನಾವು ಬದಾಮಿ ಟ್ರಿಪ್ ಫಿಕ್ಸ್ ಮಾಡಿದ ಕೂಡಲೆ ದಾರಿಯಲ್ಲಿ ತಿನ್ನಲು ಬೇಕಾಗುತ್ತದೆ ಎಂದು ಚಕ್ಕುಲಿ, ಶಂಕರಪೊಳೆ, ಬೆಣ್ಣೆ ಬಿಸ್ಕತ್ ಮುಂತಾದ ತಿನಿಸುಗಳನ್ನು ತಯಾರು ಮಾಡಿಕೊಂಡಿದ್ದರು.

ಬೆಣ್ಣೆ ಬಿಸ್ಕತ್ ಗಳನ್ನು ನಾವು ಬೇಕರಿಯಿಂದ ಕೊಂಡು ತಂದು ತಿನ್ನುತ್ತಿದ್ದೆವು. ಅದನ್ನು ಮಾಡಲು ಪಾಕತಜ್ಞರಿಂದ ಮಾತ್ರ ಸಾಧ್ಯ ಎಂದು ತಿಳಿದಿದ್ದ ನಮಗೆ, ಅತ್ತಿಗೆ ಮನೆಯಲ್ಲೇ ಮಾಡುತಿದ್ದದ್ದು ಸಕತ್ ಆಶ್ಚರ್ಯವಾಗಿತ್ತು. ಮನೆಯಲ್ಲಿಯೇ ಮಾಡಿದ ಬಿಸ್ಕತ್ ನ ರುಚಿಯೇ ಬೇರೆ. ಅದರಲ್ಲೂ ನಮ್ಮತ್ತೆ ಕೈ ಬಿಸ್ಕತ್ತು ಸಂಬಂಧಿಗಳ ಮನೆಗಳಲ್ಲಿ ತುಂಬಾ ಪ್ರಸಿದ್ಧಿ. ನನಗಂತು ಹೊಸ ಹೊಸ ತಿಂಡಿ ತಿನಿಸುಗಳನ್ನು ತಿನ್ನುವುದು, ಮಾಡುವುದೆಂದರೆ ಮೊದಲಿಂದಲೂ ತುಂಬಾ ಆಸಕ್ತಿ. ನಾನು ಪಿಯುಸಿ ಓದುವಾಗ ಒಮ್ಮೆ ಇವರ ಮನೆಗೆ ಬಂದಿದ್ದೆ. ಆಗ ಇವರ ಬೆಣ್ಣೆ ಬಿಸ್ಕತ್ತಿಗೆ ಮಾರು ಹೋಗಿ, ಮನೆಗೆ ಬಂದು ನಾನೂ ಮಾಡಿ ಸಂತೋಷ ಪಟ್ಟಿದ್ದೆ.

ನೀವು ಆ ಬೆಣ್ಣೆ ಬಿಸ್ಕತ್ ರುಚಿ ನೋಡಬೇಕೆ? ಹಾಗಿದ್ದರೆ ನಿಮಗಾಗಿ ಮಾಡುವ ವಿಧಾನ ಕೊಟ್ಟಿದ್ದೇನೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು: ಮೈದಾ ಅರ್ಧ ಕಿಲೋ, ಸಕ್ಕರೆ ಅರ್ಧ ಕಿಲೋ, ಒಂದು ಕಪ್ ಬೆಣ್ಣೆ ಅಥವಾ ವನಸ್ಫತಿ, ಬೇಕಿಂಗ್ ಪೌಡರ್ ಒಂದು ಚಮಚೆ, ಒಂದು ಕಪ್ ತುರಿದ ಒಣ ಕೊಬ್ಬರಿ, ಏಲಕ್ಕಿ ಪುಡಿ ಒಂದು ಚಮಚೆ, ಬೆಣ್ಣೆಯಲ್ಲಿ ಕರಿದ ಗೊಡಂಬಿ ಚೂರು ಅರ್ಧ ಕಪ್.

ಮಾಡುವ ವಿಧಾನ: ಮೊದಲು ಸಕ್ಕರೆಯನ್ನು ಪುಡಿ ಮಾಡಿಟ್ಟುಕೊಳ್ಳಿ. ಬೆಣ್ಣೆಯನ್ನು ದ್ರವರೂಪಕ್ಕೆ ಬರುವವರೆಗೂ ನಾದಿಕೊಳ್ಳಿ. ನಂತರ ಪುಡಿ ಮಾಡಿದ ಸಕ್ಕರೆ ಮತ್ತು ಮೈದಾವನ್ನು ಸೇರಿಸಿ ಬೆಣ್ಣೆಯಲ್ಲಿ ಕಲಸಿ. ಬೇಕಿಂಗ್ ಪೌಡರ್, ಏಲಕ್ಕಿ ಪುಡಿ, ಗೋಡಂಬಿ ಚೂರನ್ನು ಬೆರಸಿ. ಸಮನಾದ ಆಕಾರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ. ನಂತರ ಉಂಡೆಗಳನ್ನು ಒಂದು ತಟ್ಟೆಯಲ್ಲಿಟ್ಟು ಮೈಕ್ರೋ ಓವನ್ನಲ್ಲಿಡಿ. ಸುಮಾರು 75 ಡಿಗ್ರಿ ಉಷ್ಣಾಂಶದಲ್ಲಿ ನಾಲ್ಕು ನಿಮಿಷ ಬಿಡಿ. ಬಿಸಿ ಬಿಸಿಯಾದ ಬೆಣ್ಣೆ ಬಿಸ್ಕತ್ ರೆಡಿ.

ಓವನ್ ಬರುವ ಮೊದಲು ಬಿಸ್ಕತ್ ಮಾಡಲು ನಮ್ಮತ್ತೆ ಒಂದು ಉಪಾಯ ಕಂಡುಕೊಂಡಿದ್ದರು. ನುಣುಪಾದ ಮರಳನ್ನು ಒಂದು ಬಾಣಲೆಯಲ್ಲಿ ಹಾಕಿ ಗ್ಯಾಸ್ ಸ್ಟವ್ ಮೇಲಿಟ್ಟು, ಅದರ ಮೇಲೆ ತಟ್ಟೆಯನ್ನು ಬೋರಲಾಗಿ ಇಟ್ಟು, ಅದು ಬಿಸಿಯಾದ ಮೇಲೆ ಎಲ್ಲವನ್ನೂ ಮಿಶ್ರಮಾಡಿ ಕಟ್ಟಿಟ್ಟ ಉಂಡೆಗಳನ್ನು ಇಡುತ್ತಿದ್ದರು. ಇಪ್ಪತ್ತು ನಿಮಿಷಗಳಲ್ಲಿ ಬಿಸ್ಕತ್ ತಯಾರಾಗುತ್ತಿತ್ತು. ಓವನ್ ಇಲ್ಲದಿದ್ದವರು ಬೇಕಿದ್ದರೆ ಈ ತಂತ್ರಜ್ಞಾನದಲ್ಲಿ ಪ್ರಯೋಗ ಮಾಡಿ ನೋಡಬಹುದು. ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು. ಅಥವಾ ನಮ್ಮ ಭ್ರಮೆಯೋ...

Wednesday, July 9, 2008

ಊರು.. ನೀರು..


ಮೊನ್ನೆ ಭಾನುವಾರ ಯಾಕೋ ತುಂಬಾ ಬೇಸರವಾಗಿತ್ತು. ಬೆಳಗ್ಗೆ ಸ್ವಿಮ್ಮಿಂಗಿಗೂ ಹೋಗದೆ ಪೇಪರ್ ಓದಲು ಕೂತರೆ ಅದೇ ಅವಕಾಶವಾದಿಗಳ ಹೊಲಸು ರಾಜಕೀಯ. ಪಕ್ಷಾಂತರಿಗಳ ಜನಾನುರಾಗಿ ಹೇಳಿಕೆಗಳು. ಸಾಪ್ತಾಹಿಕ ಪುರವಣಿಗಳೋ ಜಡ್ಡು ಹಿಡಿದಿವೆ. ಯಾವುದೂ ಬೇಡ ಇನ್ನೂ ಸ್ವಲ್ಪಹೊತ್ತು ಮಲಗೋಣವೆಂದು ಯೋಚಿಸುತ್ತಿರುವಾಗ ಹೆಸರಘಟ್ಟಕ್ಕೆ ಬರ್ತೀಯಾ ಎಂದು ನನ್ನ ರೂಮ್ಮೇಟ್ ನಿರಂಜನ ಕೇಳಿದ. ಸರಿ ಒಳ್ಳೆಯದೇ ಆಯಿತು ಪ್ರತಿಮಾ ಬೇಡಿಯ 'ನೃತ್ಯಗ್ರಾಮ'ವಾದರೂ ನೋಡಿಬರುವ ಎಂದು ಬೇಗನೆ ಸ್ನಾನ ಮಾಡಿ ಇಬ್ಬರೂ ಬೈಕಲ್ಲಿ ಹೊರಟೆವು.

ರೈನ್ ವಾಟರ್ ಕ್ಲಬ್ ನ ವಿಶ್ವನಾಥ್ ಸುಮಾರು ದಿನಗಳಿಂದ ಬೆಂಗಳೂರಿನ ಪರಂಪರೆಯ ಬಗ್ಗೆ ನಮ್ಮ ಯುವ ಬೆಂಗಳೂರಿಗರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದಾರೆ. ಈಗಾಗಲೇ 'ಹೆರಿಟೇಜ್ ವಾಕ್' ಮೂಲಕ ಗವಿಗಂಗಾಧರೇಶ್ವರ ದೇವಾಲಯ, ಕೆಂಪೇಗೌಡ ಗೋಪುರ, ವೈಟ್ ಫೀಲ್ಡ್ ಸುತ್ತಮುತ್ತಲಿನ ಪ್ರದೇಶ, ಹಳೇ ಮಾರ್ಕೇಟ್, ಟಿಪ್ಪುವಿನ ಕೋಟೆಗಳ ಪರಿಚಯ ಮಾಡಿಸಿದ್ದಾರೆ. ಈ ಬಾರಿಯದ್ದು 'ಊರು-ನೀರು' ಹೆಸರಘಟ್ಟದಿಂದ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೆರೆಯ ಪರಿಚಯ.



ಕ್ರಿ.ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು. ಅರ್ಕಾವತಿ ನದಿಯ ನೀರು ಕೆರೆಗೆ ಮೂಲ. ನೂರಾರು ವರ್ಷಗಳ ಕಾಲ ನೀರಾವರಿಗೂ ಈ ಕೆರೆಯನ್ನು ಬಳಸಲಾಯಿತು. ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರೊದಗಿಸಲು ದಿವಾನ್ ಕೆ. ಶೇಷಾದ್ರಿ ಐಯರ್ ಅವರ ನೇತೃತ್ವದಲ್ಲಿ 1894ರಲ್ಲಿ ಒಂದು ಯೋಜನೆ ಕೈಗೊಳ್ಳಲಾಯಿತು. ಇದಕ್ಕೆ ಮೈಸೂರಿನ ಚೀಫ್ ಎಂಜಿನಿಯರ್ ಎಂ.ಸಿ. ಹಚಿನ್ಸನ್ ಅವರ ನೆರವೂ ಇತ್ತು.

ಬೆಂಗಳೂರು ನಗರಕ್ಕೆ ತಿಪ್ಪಗೊಂಡನಹಳ್ಳಿ ಕೊಳದಿಂದ ನೀರು ತರುವವರೆಗೂ (1932-33) ಹೆಸರಘಟ್ಟದ ಕೆರೆಯೇ ಅತಿದೊಡ್ಡ ಪೂರೈಕೆದಾರ. ಮೊದಲ ಬಾರಿ ಬೆಂಗಳೂರು ನಗರಕ್ಕೆ ಧರ್ಮಾಂಬುಧಿ, ಸಂಪಂಗಿ, ಅಲಸೂರು, ಸ್ಯಾಂಕಿ ಕೆರೆಗಳಲ್ಲದೆ ದೀರ್ಘಕಾಲ ಬಳಸಬಹುದಾದ ನದಿಯ ನೀರು ಸರಬರಾಜು 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಸಾಕಾರಗೊಂಡಿತು. ಆಗಿನ ಜನಸಂಖ್ಯೆ ಎರಡು ಲಕ್ಷ ಐವತ್ತು ಸಾವಿರ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 55 ಲೀಟರಿನಂತೆ ಸತತ 37 ವರ್ಷ ಸರಬರಾಜು ಮಾಡಲಾಯಿತು.

ಇಟ್ಟಿಗೆಗಳಿಂದ ನಿರ್ಮಿಸಿದ ಕಾಲುವೆಗಳ ಮೂಲಕ ತುರುಬನಹಳ್ಳಿಗೆ ನೀರನ್ನು ತಂದು ಶೋಧಿಸಿ, ಕ್ಲೋರಿನ್ ಬೆರೆಸಿ ಮುಂದೆ ಸೊಲದೇವನಹಳ್ಳಿಗೆ ಕೊಂಡೊಯ್ದು ಅಲ್ಲಿ ಸ್ಟೀಮ್ ಪಂಪ್ ಮೂಲಕ ಚಿಮ್ನಿ ಬೆಟ್ಟ ತಡಾಯಿಸುತ್ತಿದ್ದರು. ಮುಂದೆ ಗುರುತ್ವಾಕರ್ಷಣ ಬಲದಿಂದಲೇ ನಗರದವರೆಗೆ ನೀರು ಹರಿಯುತ್ತಿತ್ತು.



1924, 25 ಮತ್ತು 26ರನೇ ವರ್ಷ ಮಾನ್ಸೂನ್ ವೈಫಲ್ಯದಿಂದ ನೀರ ಶೇಖರಣೆ ಪ್ರಮಾಣ ಕಡಿಮೆಯಾಗುತ್ತಾ ಬಂದಿತು. ಕೊಳತೂರು ಮತ್ತು ಮಧುರೆ ಕೆರೆಗಳ ಮೂಲಕ ದೊಡ್ಡ ತುಮಕೂರು ಕೆರೆಯಿಂದ ಹೆಸರಘಟ್ಟದ ಕೆರೆಗೆ ನೀರು ತರುವ ಕೆಲಸ ಮಾಡಲಾಯಿತಾದರೂ ಬಹಳದಿನ ಅದು ಸಾಧ್ಯವಾಗಲಿಲ್ಲ.

ಬೆಂಗಳೂರು ಗತ್ಯಂತರವಿಲ್ಲದೆ ತಿಪ್ಪಗೊಂಡನಹಳ್ಳಿ ಕೊಳ್ಳ ಮತ್ತು ಕಾವೇರಿ ನೀರಿಗಾಗಿ ತೊರೆಕಾಡಿನಹಳ್ಳಿ ಕಡೆಗೆ ಮುಖಮಾಡಿತು. ಹೆಸರಘಟ್ಟ ಕೆರೆಯ ಜಲ ಮರುಪೂರಣ ಮಾಡುವ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂದು ಕೆರೆ ಸಂಪೂರ್ಣ ಬತ್ತಿದೆ. ಮುಂದೊಂದು ದಿನ ತಿಪ್ಪಗೊಂಡನಹಳ್ಳಿ ಕೊಳಕ್ಕೂ ಇದೇ ಗತಿ ಬರಬಹುದು.

ಅತ್ಯಂತ ವ್ಯವಸ್ಥಿತ, ಮಹಾನಗರ ಬೆಂಗಳೂರಿನ ಸ್ಥಿತಿಯೇ ಹೀಗೆ. ಇನ್ನೂ ರಾಜ್ಯದ ಯಾವ ಯಾವ ಊರುಗಳಲ್ಲಿ ಎಷ್ಟೆಷ್ಟೋ ಕೆರೆಗಳು ಬತ್ತಿ ಹೋಗಿವೆಯೋ..?



ಹೀಗೆ ಬತ್ತಿ ಹೋದ ಕೆರೆ ನೋಡಿ ಬರುವ ಹೊತ್ತಿಗೆ ಕಿವಿಗೆ ಬಿದ್ದಿದ್ದು ಕೊಟಗನಹಳ್ಳಿ ರಾಮಣ್ಣನವರ ಹಾಡು.. ದೊಡ್ಡಬಳ್ಳಾಪುರದ "ಸಂವಾದ" ತಂಡದವರು ಸೊಗಸಾಗಿ ಹಾಡಿದರು.

ಅಲ್ಲಿ ಕೇಳಿದ ಒಂದು ಹಾಡಿನ ಸಾಲು

ಮಣ್ಣಿಂದ ಬಂದದ್ದು ಮಣ್ಣಿಗೆ ಸೇರಬೇಕು

ಸೇರದಂತೆ ತಡೆದೆ ಯಾಕಣ್ಣ

ನೀ ಸೇರದಂತೆ ತಡೆದೆ ಯಾಕಣ್ಣ

ನೀ ಮಣ್ಣೀನ ಮಹಿಮೆ ಅರಿಯಣ್ಣ

ಗೀಯಗಾ ಗಾ ಗೀಯಗಾ... ಗೀಯಗಾ ಗಾ ಗೀಯಗಾ...

Tuesday, July 8, 2008

ರಾಜ ಫೆಡರರ



ಬೀಸುತಿಹ ತಂಗಾಳಿ ಬಿಸಿಯಾಗಿಕಾಡಿ

ನೆನಪಿನ ಭೀತಿಯಲಿ ನಾ ಬಂದಿಯಾಗಿ

ಮನಸು ಹೃದಯ ನೊಂದು ನೋವಾಗಿದೆ

ಒಲವು ನಲಿವು ಮೂಡಿ ಮತಕಾಗಿದೆ

ಅರಳುವ ಹೂವೊಂದು ಅಮರವ ಭಯದಲೀ

ಸಾಗುತಿದೆ ಬದುಕು


ಸವಿನೆನಪುಗಳು ಬೇಕು ಸವಿಯಲೀ ಬದುಕು

ಕಹಿನೆನಪು ಸಾಕೊಂದು ಮಾಸಲೀ ಬದುಕು

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ

ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು

(ಯಾವುದೊ ಚಿತ್ರದ ಹಾಡಿನ ಸಾಲು)

Saturday, July 5, 2008

ದೇವಾಲಯಗಳ ತೊಟ್ಟಿಲು ಶಿಲ್ಪ ಸ್ವರ್ಗದ ಬಾಗಿಲು..


F-stop : f/7.1
Aperture Value : f/3.9
ISO Speed Ratings : 100

(ಪಟ್ಟದಕಲ್ಲು ಪ್ರಪ್ರಥಮ ಹಿ೦ದೂ ಶಿಲ್ಪಕಲೆಯ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗು೦ಪಿಗೆಸೇರಿದ್ದು. ಇಲ್ಲಿನ ಶಿಲ್ಪಕಲೆಯ ವೈಶಿಷ್ಟ್ಯತೆ - ದ್ರಾವಿಡ ಹಾಗೂ ಆರ್ಯ ಎರಡೂ ಶೈಲಿ ಸಂಯೋಗ. ಮೂಲತಃ ದೇವಾಲಯಗಳ ಮಾದರಿಗಳಲ್ಲಿ ವೇಸರ ವಾಸ್ತುಶಿಲ್ಪ ಶೈಲಿ ಪ್ರಾರಂಭದ ಹಿಂದೂ ದೇವಾಲಯಗಳಲ್ಲಿ ಕಾಣಬಹುದು. ವೇಸರ ಶೈಲಿಯು ದ್ರಾವಿಡ ಮತ್ತು ನಗರ ಎರಡೂ ಪ್ರಕಾರಗಳ ಸಂಯೋಗ. ಪಟ್ಟದಕಲ್ಲು ಕೆಲಕಾಲ ಚಾಲುಕ್ಯರ ರಾಜಧಾನಿಯಾಗಿತ್ತಂತೆ. ಎ೦ಟನೇ ಶತಮಾನದಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಲಾಗಿದೆ. ಇಲ್ಲಿ ಒ೦ಬತ್ತು ಮುಖ್ಯ ದೇವಾಲಯಗಳು ಮತ್ತು ಒ೦ದು ಜೈನ ಬಸದಿ ಇವೆ. ಎಲ್ಲಕ್ಕಿ೦ತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ವಿಕ್ರಮಾದಿತ್ಯನ ಎರಡನೇ ರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ವಿಕ್ರಮಾದಿತ್ಯನ ದ೦ಡಯಾತ್ರೆಯ ನ೦ತರ ಕಟ್ಟಿಸಲಾಯಿತಂತೆ. ನಾಲ್ಕು ದೇವಾಲಯಗಳು ದ್ರಾವಿಡ ಶೈಲಿಯಲ್ಲಿದ್ದರೆ ಮತ್ತೆ ನಾಲ್ಕು ಆರ್ಯ ಶೈಲಿಯಲ್ಲಿವೆ. ಪಾಪನಾಥ ದೇವಾಲಯದಲ್ಲಿ ಎರಡೂ ಶೈಲಿಯ ಮಿಶ್ರಣವಿದೆ.)

ಪಟ್ಟದಕಲ್ಲು
ಬದಾಮಿಯಿಂದ 23 ಕಿಲೋಮೀಟರ್ ದೂರ.
ಪಯಣ - 2008ರ ಜೂನ್ 29ನೇ ದಿನಾಂಕ
ಕ್ಯಾಮೆರಾ - Nikon D60 Digital SLR
ಲೆನ್ಸ್ - 16- 55 ಎಂಎಂ


F-stop : f/7.1
Aperture Value : f/5.7


F-stop : f/7.1
Aperture Value : f/3.9


F-stop : f/7.1
Aperture Value : f/5.7


F-stop : f/7.1
Aperture Value : f/5.7


F-stop : f/7.1
Aperture Value : f/41

F-stop : f/10
Aperture Value : f/3.7


F-stop : f/10
Aperture Value : f/4.1


F-stop : f/10.1
Aperture Value : f/4.4


F-stop : f/5.6
Aperture Value : f/3.5


F-stop : f/5.6
Aperture Value : f/4.8


F-stop : f/10
Aperture Value : f/3.5


F-stop : f/10
Aperture Value : f/3.4


F-stop : f/5.6
Aperture Value : f/3.5


F-stop : f/10
Aperture Value : f/3.5


F-stop : f/5.6
Aperture Value : f/3.7


F-stop : f/5.6
Aperture Value : f/4.8


F-stop : f/5.6
Aperture Value : f/5.7

F-stop : f/11
Aperture Value : f/4

Wednesday, July 2, 2008

ಭವ್ಯ ಬದಾಮಿಯಲ್ಲಿ ಆ ದಿನಗಳನ್ನು ನೆನೆಯುತ್ತಾ...

(ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತ. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.
ಕ್ರಿಸ್ತಶಕ ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಹಾಳುಗೆಡವಿದರೆಂಬುದು ಇತಿಹಾಸ. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಮರು ಸ್ಥಾಪಿಸಿದ. ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ. ಅಲ್ಲಿಗೆ ಬಾದಾಮಿಯು ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲುಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು.)


ಳೆದವಾರ ಹಟ್ಟಿಚಿನ್ನದ ಗಣಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಮ್ಯಾನೇಜರ್ ಆಗಿರುವ ರವಿ ಕುಮಾರ್ (ನನ್ನ ಮಾವ) ಅವರ ಒತ್ತಾಯ ಮತ್ತು ನನ್ನ ಇತಿಹಾಸ ಆಸಕ್ತಿ ಎರಡೂ ಸೇರಿ ಬದಾಮಿ ನೋಡುವ ಅವಕಾಶ ಸಿಕ್ಕಿತ್ತು. ತಡಮಾಡದೆ ಆಫೀಸಿಗೆ ರಜಾ ಚೀಟಿಕೊಟ್ಟು ಹೆಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೊರಟೇಬಿಟ್ಟೆ. ಬದಾಮಿಗೆ ನೇರವಾಗಿ ಬೆಂಗಳೂರಿನಿಂದ ಸಾಕಷ್ಟು ಬಸ್ಸುಗಳಿವೆ. ದಾರಿಯಲ್ಲಿ ಹಂಪಿಯೂ ಸಿಗುತ್ತೆ. ರಜಾ ಕಡಿಮೆ ಇದ್ದಿದ್ದರಿಂದ ನೇರವಾಗಿ ಹಟ್ಟಿಗೆ ಹೋದೆ. ಹಟ್ಟಿಯಿಂದ ಸುಮಾರು ನೂರು ಕಿಲೋಮೀಟರ್ ಪ್ರಯಾಣ. ನಾವೆಲ್ಲ ತಿಳಿದಂತೆ ಉತ್ತರ ಕರ್ನಾಟಕವೆಂದರೆ ಬರೀ ಬಿಸಿಲು ಬಯಲಿನ ಪ್ರದೇಶವೆಂಬುದು ತಪ್ಪೆಂದು ಬನಶಂಕರಿಗೆ ಬಂದಾಗ ತಿಳಿಯಿತು.

ಸುಂದರವಾದ ತೆಂಗಿನ ತೋಟಗಳ ನಡುವೆ ಪ್ರಶಾಂತವಾಗಿ ಕುಳಿತಿರುವ ಬನಶಂಕರಿ ದೇವಿಗೆ ಪೂಜೆಸಲ್ಲಿಸಿ ಮುಂದೆ ಹೊರಟರೆ ಕೆಂಪು ಮಣ್ಣಿನ ಶಿಲಾಪದರದ ಬೆಟ್ಟಗಳ ಸಾಲು ಎದುರಾಗುತ್ತವೆ. ಬನಶಂಕರಿಯಿಂದ 14 ಕಿಲೋಮೀಟರ್ ಪ್ರಯಾಣ ಬದಾಮಿ. ನಮ್ಮದೋ ಸುಮೋ ಜೀಪು. ಡ್ರೈವರ್ ಮೆಹಬೂಬ್ ಸಕಲಕಲಾವಲ್ಲಬಾ. ಅವನಿಗೆ ಈ ಪ್ರದೇಶ ಚಿರಪರಿಚಿತ. ಸರಾಗವಾಗಿ ಸಾಗಿದ್ದ ನಮ್ಮ ಪ್ರಯಾಣ ತಟ್ಟನೆ ಒಮ್ಮೆಗೆ ನಿಂತಿತು. ಮೆಹಬೂಬನ ಕೋಳಿ ರುಚಿಯ ಚಟಕ್ಕೆ ನಮ್ಮ ಪ್ರಯಾಣ ಒಂದು ಗಂಟೆ ತಡವಾಗಬೇಕಾಯಿತು. ಬದಾಮಿಗೆ ಬಂದಾಗ ಮಧ್ಯಾಹ್ನ 12 ಗಂಟೆ.

ನಮಗೋ ಇತಿಹಾಸದ ಜ್ಞಾನ ಕಡಿಮೆ. ಗೈಡ್ ಇಲ್ಲದೆ ಮುಂದುವರೆಯುವುದು ಸರಿಯಲ್ಲವೆಂದು ತೀರ್ಮಾನಿಸಿದೆವು. ಸುಮಾರು ಮುವತ್ತೈದರ ಪ್ರಾಯದ ಒಬ್ಬವ್ಯಕ್ತಿ ಇನ್ನೂರು ಕೊಡಿ ನಿಮಗೆ ಬದಾಮಿಯ ಇತಿಹಾಸ, ಕಲೆಯಬಗ್ಗೆ ತಿಳಿಸುತ್ತೇನೆಂದ. ಕರ್ನಾಟಕ ಟೂರಿಸಮ್ ಅನುಮೋದಿಸಿರುವ ಗೈಡ್ ಪಾಸ್ ಪರಿಶೀಲಿಸಿ ನೂರೈವತ್ತಕ್ಕೆ ಚೌಕಾಸಿಮಾಡಿ ಮುಂದುವರೆದೆವು.

ಉತ್ತರಕ್ಕೆ ಬೆಟ್ಟ, ದಕ್ಷಿಣಕ್ಕೆ ಮೆದು ಕಲ್ಲಿನ ಬೆಟ್ಟಗಳು. ಈ ಎರಡನ್ನೂ ಬೇರ್ಪಡಿಸುವ ಅಗಸ್ತ್ಯ ಹೊಂಡ ಪಶ್ಚಿಮಕ್ಕಿದ್ದರೆ, ಬದಾಮಿ ಊರು ಪೂರ್ವಕ್ಕೆ ಇದೆ. ಆರರಿಂದ ಎಂಟನೇ ಶತಮಾನದಲ್ಲಿ ಅತ್ಯಂತ ವೈಭವದ ದಿನಗಳನ್ನು ಕಂಡ ಬದಾಮಿಯಲ್ಲಿ ಈಗಲೂ ಸಹ ಚಾಲುಕ್ಯರ ಶಿಲ್ಪಕಲೆಯ ವೈಭವ ನೋಡಬಹುದು. ಎರಡನೇ ಪುಲಕೇಶಿ ಚಾಲುಕ್ಯರ ಪ್ರಮುಖ ದೊರೆ. ಈತನ ಕಾಲದಲ್ಲಿ ಚಾಲುಕ್ಯರ ಸಾಮ್ರಾಜ್ಯ ನರ್ಮದಾ ನದಿ ತೀರದವರೆಗೆ ಹಬ್ಬಿತ್ತಂತೆ. ಪುಲಕೇಶಿಗೂ ಮತ್ತು ಹರ್ಷವರ್ದನಿಗೆ ಘೋರ ಕಾಳಗವಾಯಿತು. ಇದರಲ್ಲಿ, ಪುಲಕೇಶಿ ವಿಜಯಸಾಧಿಸಿ, 'ದಕ್ಷಿಣಪಥೇಶ್ವರ' ಎಂಬ ಬಿರುದನ್ನು ಸ್ವತಃ ಹರ್ಷವರ್ಧನನೇ ದಯಪಾಲಿಸಿದನಂತೆ. ಚಾಲುಕ್ಯರ ವೈಭವವನ್ನು ಇಲ್ಲಿರುವ ಗುಹಾಲಯಗಳಲ್ಲಿ, ಪಟ್ಟದಕಲ್ಲಿನಲ್ಲಿ ಮತ್ತು ಐಹೊಳೆಯಲ್ಲಿ ಕಾಣಬಹುದು.

ಬದಾಮಿಗೆ ಹಲವಾರು ಶತಮಾನಗಳ ಇತಿಹಾಸವಿದೆ. ಆಗಸ್ತ್ಯ ಕಾಲದಲ್ಲಿ ಬದಾಮಿಯ ಉಲ್ಲೇಖವಿದೆ. ಮೊದಲು ಬಾದಾಮಿಗೆ 'ವಾತಾಪಿ' ಎಂಬ ಹೆಸರಿತ್ತು. ಜನಪದ ಕತೆಯ ಪ್ರಕಾರ ಯಕ್ಷಣಿ ವಿದ್ಯೆ ಗೊತ್ತಿರುವ ಇಲಲ್ವ ಮತ್ತು ವಾತಾಪಿ ಎಂಬ ರಾಕ್ಷಸ ಸಹೋದರರು ಇಲ್ಲಿರುವ ಗುಡ್ಡ ಬೆಟ್ಟಗಳಲ್ಲಿ ವಾಸವಾಗಿದ್ದರು. ಋಷಿ ಮುನಿಗಳನ್ನು ಹತ್ಯೆಗಯೈಲು ಒಂದು ಸುಲಭ ಉಪಾಯ ಕಂಡುಕೊಂಡಿದ್ದರು. ಯಕ್ಷಣಿ ವಿದ್ಯೆಯಿಂದ ಇಲಲ್ವ ವಾತಾಪಿಯನ್ನು ಮೇಕೆಯನ್ನಾಗಿ ಪರಿವರ್ತಿಸುತ್ತಿದ್ದ. ನಂತರ ಇಲಲ್ವ ಯಾವುದಾದರು ಮುನಿಗಳನ್ನು ಕರೆದುಕೊಂಡು ಬಂದು, ಆ ಮೇಕೆಯ ಮಾಂಸದಿಂದ ತಯಾರಿಸಿದ ಊಟವನ್ನು ಬಡಿಸುತ್ತಿದ್ದ. ನಂತರ ಇಲಲ್ವ ವಾತಾಪಿಯನ್ನು ಹೊರಗೆ ಕರೆಯುತ್ತಿದ್ದ. ವಾತಾಪಿ ಹೊಟ್ಟೆ ಬಗೆದು ಹೊರಗೆ ಬರುತ್ತಿದ್ದ. ಹೀಗೆ ಹಲವಾರು ಮುನಿಗಳ ಹತ್ಯೆಗಳಾದವು. ನಂತರ ಈ ದುಷ್ಟರ (ಯಾರು ದುಷ್ಟರು?) ಸಂಹಾರಕ್ಕಾಗಿ ಅಗಸ್ತ್ಯ ಮುನಿಗಳು ಆಗಮಿಸಿದರು. ಊಟವಾದ ನಂತರ ವಾತಾಪಿ ಜೀರ್ಣವಾಗೆಂದು ಹೇಳುತ್ತಾರೆ. ಇಲಲ್ವ ವಾತಾಪಿಯನ್ನು ಹೊರಗೆ ಬಾ ಎಂದಾಗ ಆತ ಜೀರ್ಣವಾದ ಕಾರಣ ಹೊರಗೆ ಬರಲು ಅಗುವದಿಲ್ಲ. ಹೀಗೆ ವಾತಾಪಿ ಕಥೆ ಮುಗಿಯುತ್ತದೆ. ವಾತಾಪಿಇದ್ದನೆಂಬ ಕಾರಣಕ್ಕಾಗಿ ವಾತಪಿ ಎಂಬ ಹೆಸರೂ ಬಂದಿರಬಹುದು.

ದಕ್ಷಿಣದಲ್ಲಿರುವ ಬೆಟ್ಟಗಳಲ್ಲಿ ಕೆಂಪು ಮಣ್ಣಿನ ಶಿಲಾಬೆಟ್ಟಗಳಿವೆ. ಇದರಲ್ಲಿ ನಾಲ್ಕು ಗುಹಾಂತರ ದೇವಾಲಯಗಳಿವೆ. ಮೊದಲನೆಯದು ಶಿವನಿಗೆ ಅರ್ಪಿತವಾಗಿದೆ. ಇಲ್ಲಿ ನಟರಾಜನ ಒಂದು ಅದ್ಬುತವಾದ ನಾಟ್ಯದ ಭಂಗಿಯಿದೆ. ಇದರ ವಿಶೇಷ ನಾಟ್ಯ ಪ್ರಕಾರದ ಎಂಬತ್ತೋಂದೂ ಭಂಗಿಯನ್ನು ಪ್ರದರ್ಶಿಸಿರುವುದು. ಶಿಲ್ಪಿ ತನ್ನ ನೈಪುಣ್ಯತೆ ಮೆರೆದಿದ್ದಾನೆ. ಅರ್ಧನಾರಿಶ್ವರನ ವಿಗ್ರಹ, ನಂದಿ, ದುರ್ಗ, ಗಣಪತಿ ಮತ್ತು ಹಾವಿನಹೆಡೆ ಕೆಳಗಡೆರುವ ಶಿವ, ಮುಂತಾದ ಸೊಗಸಾದ ಕೆತ್ತನೆಗಳನ್ನು ಕಾಣಬಹುದು.

ಎರಡು ಮತ್ತು ಮೂರನೇ ಗುಹೆಗಳು ವಿಷ್ಣುವಿಗೆ ಸರ್ಪಿತವಾಗಿವೆ. ಪ್ರವೇಶದ್ವಾರದಲ್ಲಿ ಜಯ-ವಿಜಯ ದ್ವಾರಪಾಲಕರು, ಒಳಗಡೆ ವಿಷ್ಣುವಿನ ಅವತಾರಗಳಾದ ವಾಮನ ಅವತಾರ, ಕೃಷ್ಣ ಲೀಲೆಗಳು, ನರಸಿಂಹನ ಅವತಾರ, ಹರಿಹರ, ಶೇಷನಾಗ ಮತ್ತು ಛಾವಣಿ ಮೇಲೆ ಸ್ವಸ್ತಿಕ, ಮತ್ಸಗಳ ಸುಂದರವಾದ ಕೆತ್ತನೆ ಕಾಣಬಹುದು.

ಮೂರನೆಯದು ಜೈನರಿಗೆ ಸಮರ್ಪಿತವಾದ ಈ ಗುಹೆಯಲ್ಲಿ ಪಾರ್ಶ್ವನಾಥ, ತೀರ್ಥಂಕರರ ಕೆತ್ತನೆಗಳಿವೆ.

ಗೈಡ್ ಸಂಪೂರ್ಣ ತಲ್ಲೀನನಾಗಿ ವರ್ಣಿಸುತ್ತಾ, ಗುಹಾಂತರ ದೇವಾಲಯಗಳಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಧರ್ಮಸಮಾನತೆ. ಆಗಿನ ಕಾಲಕ್ಕೆ ಶೈವರು ಮತ್ತು ವೈಷ್ಣವರ ನಡುವೆ ಸಾಮರಸ್ಯ ಮೂಡಿಸಲು ಶಿವ ಮತ್ತು ವಿಷ್ಣು ದೇವಾಲಯಗಳನ್ನು ನಿರ್ಮಿಸಿದರು. ಜೊತೆಯಲ್ಲಿ ಜೈನರಿಗೂ ಪ್ರಾಮುಖ್ಯತೆ ನೀಡಲು ಒಂದು ಜೈನ ಬಸದಿಯನ್ನೂ ನಿರ್ಮಿಸಿದರು ಎಂದು ನಮ್ಮ ಹಿಂದೂ ಧರ್ಮದ ಔದಾರ್ಯತೆಯನ್ನು ಕೊಂಡಾಡತೊಡಗಿದ. ನಮ್ಮ ಮಾವನವರಿಗೋ ನಮ್ಮ ಸಂಸ್ಕೃತಿ, ನಮ್ಮ ಹಿಂದೂ ಧರ್ಮದಬಗ್ಗೆ ಹೆಮ್ಮೆ ಎನ್ನಿಸತೊಡಗಿತು.

ನನಗೆ ಮನಸಿನಲ್ಲಿ ಎಲ್ಲಿಯೋ ಒಂದು ಸಂಶಯ ಸುಳಿಯ ತೊಡಗಿತು. ಈ ವ್ಯಕ್ತಿ ಹೇಳುತ್ತಿರುವ ಇತಿಹಾಸ ಯಾರ ಇತಿಹಾಸ. ಬಹು ಸಂಖ್ಯಾತರಾದ ದುಡಿಯುವ ವರ್ಗಗಳಿಗೆ ಸೇರದ ಇತಿಹಾಸವನ್ನು ನಾವು ಯಾವ ರೀತಿ ಅರ್ಥೈಸಿಕೊಳ್ಳುತ್ತಿದ್ದೇವೆ. ಶೈವ ಮತ್ತು ವೈಷ್ಣವ ಧರ್ಮದ ಹೊಡೆದಾಟ ಕೇವಲ ಉನ್ನತ ವರ್ಗಗಳ ಸಣ್ಣತನವಲ್ಲವೇ. ಕಡೆಗೆ ಗುಹೆಯ ಮೆಟ್ಟಿಲುಗಳನ್ನು ಇಳಿಯುವಾಗ ಗೈಡನ್ನು ಕೇಳಿದೆ ನಿನ್ನದು ಯಾವ ಜಾತಿ ಎಂದು. ಮೆಲ್ಲನೆ ನಾಚುತ್ತಾ 'ಅಗಸರು' ಎಂದು.

ಮನಸ್ಸಿನಲ್ಲೇ ಅಂದುಕೊಂಡೆ ಇತಿಹಾಸ ನಿನ್ನನ್ನು ಎಲ್ಲಿಯೂ ನೆನಪಿಸಿಕೊಂಡಿಲ್ಲವಲ್ಲವೆಂದು.

(ಗೈಡ್ ಹೇಳಿದ ಇತಿಹಾಸದ ಕಥೆಗಳನ್ನು ನಮ್ಮ ಮುಂದೇ ನಿಲ್ಲುವಂತೆ ಮಾಡಿದ್ದು ಬದಾಮಿಯ ಸ್ಮಾರಕಗಳು. ಈ ದೇಗುಲಗಳ, ಪ್ರತಿಮೆಗಳ ಹಿಂದೆ ಅದೆಷ್ಟು ಕಥೆಗಳು ಇವೆಯೋ? ಅದೆಷ್ಟು ಶ್ರಮಿಕರ ಜೀವನಗಾಥೆಗಳಿವೆಯೋ..? ನಾವು ಮಾತ್ರ ಚಾಲುಕ್ಯರ ದೊರೆಗಳನ್ನು ನೆನಪಿಸಿಕೊಳ್ಳುತ್ತೇವೆ. ಗೈಡ್ ನಮಗೆ ಒಂದೋ ಎರಡು ಹೇಳಿದನಷ್ಟೆ.. ಅಂಥ ಕಥೆಗಳ ಕಂಪನಗಳನ್ನು ಎಲ್ಲರೊಳಗೂ ಉಂಟು ಮಾಡುವ ಬದಾಮಿಯನ್ನು ಕೆಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇನೆ. ಅಲ್ಲಿ ತೆಗೆದ ಒಂದಿಷ್ಟು ಫೋಟೋಗಳು ಇಲ್ಲಿವೆ...)



ಚಾಲುಕ್ಯರ ರಾಜಧಾನಿಯಾಗಿದ್ದ ಇತಿಹಾಸ ಪ್ರಸಿದ್ಧ ಬದಾಮಿ ಗುಹಾಂತರ ದೇವಾಲಯ


ಮೊದಲನೆ ಗುಹಾಲಯ (ಶಿವ)


ಅರ್ಧನಾರೇಶ್ವರ


ಶಿವ ಪಾರ್ವತಿ ಮತ್ತು ಸೇವಕಿ

ಶಿವನ ನಾಟ್ಯಭಂಗಿ

ಎರಡನೆಯ ಗುಹಾಲಯ (ವಿಷ್ಣು)

ವಾಮನ ಅವತಾರ


ಚಕ್ರವರ್ತಿ ಪುಲಕೇಶಿ ಹೋಲುವ ವಿಷ್ಣುವಿನ ಮೂರ್ತಿ

ವಿಷ್ಣುವಿನ ವರಹಾ ಅವತಾರ

ನರಸಿಂಹ

ಅಗಸ್ತ್ಯ ಹೊಂಡ




ಭೂತನಾಥ ದೇವಾಲಯ