Wednesday, December 17, 2008

ನಮ್ಮಜ್ಜಿ ಹೇಳಿದ ಕತೆ



ಒಂದಾನೊಂದು ಕಾಲದಲ್ಲಿ, ಮೈಸೂರು ರಾಜ್ಯದ ಮುಸ್ಟೂರು ಎಂಬ ಹಳ್ಳಿಯಲ್ಲಿ ಇಬ್ಬರು ಅಣ್ಣ ತಂಮ್ಮಂದಿರಿದ್ದರು. ದೊಡ್ಡವನು ಸ್ವಾಮಿ ಸಣ್ಣವನು ಸುನಿ. ದೊಡ್ಡಣ್ಣ ಸ್ವಾಮಿ ಅವರ ತಾತನ ಹೊಲ ನೋಡಿಕೊಂಡು ಸುಖವಾಗಿದ್ದ. ತಮ್ಮ ದೊಡ್ಡವನಿಗಿಂತ ಜಾಣ ಪಟ್ಟಣ ದುರ್ಗದಲ್ಲಿ ಓದೋಕೋಗಿದ್ದ. ಅಣ್ಣ ಸ್ವಾಮಿ ಪ್ರತಿ ವರ್ಷದಂತೆ ಕಪ್ಲೆ ಗುಡಿಸಲು ಹೊಲ್ದಗೆ ಸೌತೆಕಾಯಿ ಹಾಕಿದ್ದ. ನೋಡ ನೋಡುತ್ತಾ ಬೀಜ ಗಿಡವಾಗಿ, ಗಿಡ ಬಳ್ಳಿಯಾಗಿ, ಬಳ್ಳಿ ಹೂಬಿಟ್ಟು, ಹೂ ಹೀಚಲೊಡದ್ವು. ದಿನವೆಲ್ಲ ಕಲ್ಲೊಲದಲ್ಲಿ ಸೇಂಗಾ ಕಳೆ ತೆಗೆದು, ಹೊತ್ತು ಮುಳುಗೋವತ್ತಿಗೆ ಸೌತೆ ಬಳ್ಳಿ ಕಾಯೋಕೆ ಅವರಜ್ಜಿ ಮಾಡಿಕೊಟ್ಟ ಜ್ವಾಳದ ಮುದ್ದೆ ಹುಣಸೆ ಚಿಗುರಿನ ಉದಕ ಬುತ್ತಿ ಕಟ್ಟಿಕೊಂಡು ಸ್ವಾಮಿ ದಿನಾಲು ಹೊಲ ಕಾಯೋಕೆ ಹೋಗ್ತಿದ್ದ.

ಒಂದಿನ ರಾತ್ರಿ ಮುದ್ದೆ ಉಂಡು ಕಂಬ್ಳಿ ಹೊದ್ಕೊಂಡು ಇನ್ನೇನು ಮಕ್ಕಬೇಕು ಅನ್ನೋ ಹೊತ್ಗೆ ಒಂದು ಬಲವಾದ ಕಪ್ಪಲಾಟ ಪಕ್ಕದ ಹುಣಿಸೇ ಮರದ್ ಕೆಳ್ಗೆ ಗುಟುರಾಕಿತು. ಸ್ವಾಮಿ ಗಡ ಗಡಾ ಅಂತ ನಡುಗೋಗಿಬಿಟ್ಟ. ಕಪ್ಪಲಾಟ ಘರ್ಜಿಸುತ್ತಾ ಕೇಳಿತು ಎಲ್ಲಿ ನಿಮ್ಮಜ್ಜ ಲಿಂಗಪ್ಪ ಎಲ್ಲಿ ನಿಮ್ಮಪ್ಪ ಮುಸ್ಟೂರ.. ನಾನು ದಿನಾಲು ಇದೇ ಹೊತ್ತಿಗೆ ಬರ್ತೀನಿ ನನ್ಗೆ ಕರಿಕಂಬ್ಳಿ ಗದ್ಗೆ ಹಾಸಿ, ನಾಲ್ಕು ಮೂಲಗೆ ನಾಲ್ಕು ಸೌತೆಕಾಯಿ ಇಡಬೇಕು ಅಂತ ಹೇಳಿತು. ಕಪ್ಪಲಾಟ ಸೌತೆಕಾಯಿನ ಕಟಕ್ಕನೆ ತಿಂದು ಪುಟುಕ್ಕನೆ ಸ್ವಾಮಿ ಬಾಯಲ್ಲಿ ಹೂಸು ಬಿಟ್ಟಿತು. ದಿನಾ ಕಪ್ಪಲಾಟ ಬರೋದು, ಸ್ವಾಮಿ ಕರಿಕಂಬ್ಳಿ ಗದ್ದುಗೆ ಹಾಸೋದು, ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಡೋದು ನಡೀತಾ ಇತ್ತು.

ಬರಬರುತ್ತ ಸ್ವಾಮಿ ಸಣ್ಣಗಾದ. ಮನೆಯಲ್ಲಿ ಅವರಜ್ಜಿ ಕೇಳಿದ್ರೆ ಏನೂ ಹೇಳ್ತಿರ್ಲಿಲ್ಲ. ಒಂದಿನ ಸುನಿ ದುರ್ಗದಿಂದ ಬ್ಯಾಸಿಗೆ ರಜಕ್ಕೆ ಊರಿಗೆ ಬಂದ. ಅಣ್ಣ ಸಣ್ಣಗಾಗಿದ್ದನ್ ನೋಡಿ ಗದರಿಸಿ ಕೇಳಿದ. ಆಗ ಸ್ವಾಮಿ ಬಾಯಿ ಬಿಟ್ಟ. ಸುನಿ, ಗುಡುಸ್ಲೊಲಕ್ಕೆ ಒಂದು ಕಪ್ಪಲಾಟ ಗಂಟು ಬಿದ್ದಿದೆ. ದಿನಾಲು ಸೌತೆಕಾಯಿ ತಿಂದು ನನ್ನ ಬಾಯಿಗೆ ಹೂಸು ಬಿಡುತ್ತೆ ಅಂತ ನಿಜ ಉಸುರಿದ. ತಮ್ಮಂಗೆ ಮೈಯಲ್ಲಾ ಉರ್ದೋಯ್ತು. ನಮ್ಮಣ್ಣನ ಕಾಡ್ತಿರೋ ಕಪ್ಪಲಾಟನ ಮಟ್ಟ ಹಾಕಬೇಕೂಂತ ತೀರ್ಮಾನ ಮಾಡ್ದ. ಅಣ್ಣ ನೀನು ಇವತ್ತು ಕಲ್ಲೊಲಕ್ಕೆ ಹೋಗು, ನಾನು ಸೌತೆಕಾಯಿ ಕಾಯೋಕೋಗ್ತಿನಿ ಅಂದ.

ಸಾಯಂಕಾಲ ಅವರಜ್ಜಿ ಕಟ್ಟಿಕೊಟ್ಟ ಬುತ್ತಿ ತಗೊಂಡು ಹೊಲಕ್ಕೆ ಹೋದ. ಜೊತೆಗೆ ಒಂದು ಚುಚ್ಗ ತಗಂಡು ಹೋದ. ಹೊತ್ತು ಮುಳುಗಿ ಕತ್ಲಾಗ್ತಾ ಬಂತು. ಚುಚ್ಗನ ಸರಿಯಾಗಿ ಬೆಂಕಿಯಲ್ಲಿ ಕೆಂಪಗೆ ಕಾಸಿಕೊಂಡ. ಹುಣಿಸೆ ಮರದ ಕೆಳಗೆ ಕಪ್ಪಲಾಟಕ್ಕಾಗಿ ಕಾದ್ಕೊಂಡು ಕುಂತ್ಗಂಡ. ಸರಿಯಾದ ಸಮಯಕ್ಕೆ ಕಪ್ಪಲಾಟ ಬಂತು. ಜೋರಾಗಿ ಘರ್ಜಿಸುತ್ತಾ 'ಸ್ವಾಮೀ.. ಕರಿಕಂಬ್ಳಿ ಗದ್ಗೆ ಹಾಸಿದಿಯೇನೋ?' 'ಹೂಂ ಸ್ವಾಮಿ...' 'ನಾಲ್ಕು ಮೂಲೆಗೆ ನಾಲ್ಕು ಸೌತೆಕಾಯಿ ಇಟ್ಟಿದಿಯೇನೋ...?' 'ಹೂಂ ಸ್ವಾಮಿ...' 'ಹಾ ಜಾಣ' ಅಂದು ಒಂದು ಸೌತೆ ಕಾಯಿ ತಿಂದು ಸುನಿ ಬಾಯಿಗೆ ಹೂಸು ಬಿಟ್ಟಿತು. ಕೆಟ್ಟು ವಾಸನೆ. ಸುನಿ ಸಹಿಸಿಕೊಂಡು ಇನ್ನೊಂದು ಸೌತೆಕಾಯಿತಿಂದು ಮತ್ತೆ ಹೂಸು ಬಿಡೋಕೆ ಬಂತು, ಸರಿಯಾಗಿ ಕಾಯಿಸಿದ ಚುಚ್ಗನ ಕಪ್ಪಲಾಟದ ಮುಕುಳಿಗೆ ಇಟ್ಟು ಬಿಟ್ಟ. ಕುಯ್ಯಯ್ಯೋ ಅಂತ ಕೂಗ್ತಾ ಗೂರ್ನಳ್ಳಿ ಗುಡಿಗೆ ಬಂತು. ಏನು ಮಾಡಿದರೂ ಚುಚ್ಗ ಉದುರುತ್ತಿಲ್ಲ. ಕಡೆಗೆ ಗೂರ್ನಳ್ಳಿ ಹನುಮಂತನಿಗೆ ಬೇಡ್ಕೊಂತು. 'ಸ್ವಾಮಿ ಹನುಂತರಾಯ.. ಈ ಕಾದಿರೋ ಚುಚ್ಗ ಉದುರಿದರೆ ಬರೋ ವಾರ ನಿನಗೆ ಪರ್ವ್ ಮಾಡ್ತಿನಿ ಅಂತ ಕೈ ಮುಕ್ಕೊಂತು. ಬರ್ನೆ ಚುಚ್ಗ ಕೆಳಗೆ ಬಿತ್ತು. ದೇವರೆ ಹಮನುಂತ ನೀನು ದೊಡ್ಡೋನು ಅಂತ ಕೈ ಮುಗಿದು. ಗೋಕಟ್ಟೆ ಕಡೆಗೆ ಹೋಯ್ತು.

ಆಯ್ತವಾರ ಆಯ್ತು, ಬೆಸ್ತವಾರ ಆಯ್ತು, ಕಪ್ಪಲಾಟ ಪರ್ವಗೆ ಹೋಜು ಮಾಡಿಕೊಳ್ಳದೆ ಕಾಲ ಕಳಿತಿತ್ತು. ಶನಿವಾರ ಬಂದೇ ಬಿಡ್ತು ಏನು ಮಾಡೊದು ಅಂತ ಕಪ್ಪಲಾಟ ಕಂಗಾಲಾಗಿ ಕೂತಿದ್ದಾಗ ಒಂದು ಮೊಲ ಬಂತು. ಅದನ್ನು ಹಿಡ್ಕೊಂಡು ತಿನ್ನಬೇಕು ಅನ್ನೋದ್ರೊಳಗೆ ದೊಣ್ಣೇಹಳ್ಳಿ ಕಡೆಯಿಂದ ಒಂದು ಗಾಡಿ ಬರೋ ಸಪ್ಪಳ ಹಾಯಿತು. ಮೊಲನ ಹಿಡ್ಕೊಂಡು ಗುಡಿಯಿಂದಕ್ಕೆ ಹೋಯ್ತು. ಜಗಳೂರು ಸಾಬರು ನಾಯ್ಕನಟ್ಟಿ ಸಂತೆಗೆ ಉಪ್ಪು, ಮೆಣಸು, ಬೆಲ್ಲೆ, ಗೋದಿ ತುಂಬಿಕೊಂಡು ಹೋಗುತ್ತಿದ್ದರು. ದಾರಿ ಪಕ್ಕ ಗುಡಿ ಬಾವಿ ಅತ್ರ ನಿಲ್ಲಿಸಿ ನೀರು ಕುಡಿಯೋಕೆ ಹೋದ್ರು. ಇದೇ ಸಮಯ ಎಂದು ಕಪ್ಪಲಾಟ ಮೊಲಕ್ಕೆ ಹೇಳಿತು ' ನೀನು ನಂಗೆ ಸಾಯ ಮಾಡಿದರೆ ನಿನ್ನನ್ನು ಬಿಟ್ ಬಿಡ್ತೀನಿ ನಾವು ಇಬ್ರೂ ಸೇರಿ ಹನುಮಂತ್ರಾಯನ ಪರ್ವ ತೀರ್ಸೋಣ' ಅಂತ್ ಹೇಳಿ ಇಬ್ರೂ ಸೇರಿ ಸಾಬ್ರ ಗಾಡಿ ಹತ್ತಿ ಗೋದಿ, ಬೆಲ್ಲ ಕದ್ದು ಗುಡಿ ಹಿಂದೆ ತಂದು ಇಟ್ಟವು.

ಮುಸ್ಟೂರಿನ ಕುಂಬಾರು ಜಗಳೂರು ಸಂತೆಗೆ ಮಡಿಕೆ ಮಾರಲು ಹೊರಟಿದ್ರು. ಗುಡಿಬಳಿ ಬಂದಾಗ ಗಾಡಿ ನಿಲ್ಲಿಸಿ ಗಂಟೆ ಹೊಡೆದು ಕೈಮುಗಿಯೊದ್ರೊಳಗೆ ಕಪ್ಪಲಾಟ ಮತ್ತು ಮೊಲ ಮಡಿಕೆ ಹಾರಿಸಿಕೊಂಡು ಬಂದವು. ಎಲ್ಲ ಹೋಜು ಮಾಡಿಕೊಂಡು ಸಾಯಂಕಾಲ ಕಲ್ಲು ಹೂಡಿ ಬೆಂಕಿ ಇಟ್ಟು ಗೋದಿ ಹುಗ್ಗಿ ಮಾಡಿ ಹನುಮಂತರಾಯನಿಗೆ ಎಡೆ ಹಾಕಿದವು. ಮೊಲ ಕಪ್ಪಲಾಟಕ್ಕೆ ಬಾ ಮಾವ ಉಣ್ಣೋಣ ಅಂತು. ಕಪ್ಪಲಾಟ ನೀನು ಮೊದಲು ಉಣ್ಣು ಅಂತು. ಇಲ್ಲ ನೀನೇ ಮೊದಲು ಉಣ್ಣು ನಾನು ಬಡಿಸ್ತಿನಿ ಅಂತು ಮೊಲ. ರುಚಿಯಾದ ಗೋದಿ ಹುಗ್ಗಿನ ಚನ್ನಾಗಿ ಹೊಟ್ಟೆ ತುಂಬಾ ತಿಂದು ಬಿಡ್ತು ಕಪ್ಪಲಾಟ. ಮೊಲಕ್ಕೆ ಏನೂ ಉಳಿಯಲೇ ಇಲ್ಲ. ಆಗ ಕಪ್ಪಲಾಟ 'ಮೊಲರಾಯ ನೀನು ಮಡಿಕೆ ಹೊಳಗೆ ಇಳಿದು ತಳಕೆರೆದು ತಿನ್ನು ಅಂದಿತು. ಮೊಲ ಮಡಿಕೆಯೊಳಗೆ ಇಳಿತಿದ್ದಂಗೆ ಬಾಯಿ ಮುಚ್ಚಿ ಉರಿ ಇಟ್ಟಿತು. ಮೊಲ ತಗಿ ಮಾವ ಮೀಸೆ ಸುಡ್ತವೆ... ತಗಿ ಮಾವ ಬಾಲ ಸುಡ್ತತೆ ಅಂತ ಎಷ್ಟು ಕೂಗಿದ್ರೂ ಕಪ್ಪಲಾಟ ಮಡಿಕೆ ಬಾಯಿ ತಗಿಲಿಲ್ಲ. ಮೊಲ ಕಡೆಗೆ ಪ್ರಾಣ ಬಿಡ್ತು. ಇತ್ಲಾಗೆ ಊರಲ್ಲಿ ಅಣ್ಣತಮ್ಮ ಸುಖವಾಗಿದ್ರು.

Wednesday, November 19, 2008

ನಾನು ಕಂಡ ಬರ್ಕ್ ವೈಟ್



ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಕಳೆದ ಶನಿವಾರ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ 'ಈ ಪುಸ್ತಕ ನಂಗಿಷ್ಟ…' ಕಾರ್ಯಕ್ರಮದಲ್ಲಿ ನನಗಿಷ್ಟವಾದ ಪುಸ್ತಕ 'ಬರ್ಕ್ ವೈಟ್ ಕಂಡ ಭಾರತ'ದ ಬಗ್ಗೆ ಮಾತನಾಡಿದ ಒಟ್ಟು ಸಾರಾಂಶ...

ರ್ಕ್ ವೈಟ್ ಇಪ್ಪತ್ತನೇ ಶತಮಾನದ ಅಗ್ರಗಣ್ಯ ಫೋಟೋ ಜರ್ನಲಿಸ್ಟ್. ನ್ಯೂಯಾರ್ಕ್ ನಗರದಲ್ಲಿ 1904ರಲ್ಲಿ ಜನನ. ಸಾಮಾನ್ಯ ಅಮೇರಿಕನ್ ಮಕ್ಕಳಂತೆ ಪ್ಲೇನ್ ಫೀಲ್ಡ್ ಹೈಸ್ಕೂಲ್ ನಲ್ಲಿ ಓದು ಮುಂದೆ 1927ರಲ್ಲಿ ಕ್ಲಿವ್ ಲ್ಯಾಂಡ್ ಗೆ ಹೋಗಿ ವಾಸ್ತುಶಿಲ್ಪ ಹಾಗೂ ಕೈಗಾರಿಕಾ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆಯುತ್ತಾಳೆ. ಅವಳಿಗೆ ಯಂತ್ರಪ್ರಪಂಚ ಹಾಗೂ ತಂತ್ರಜ್ಞಾನದ ಜಗತ್ತುಗಳು ಮೆಚ್ಚುಗೆಯ ವಿಷಯವಾಗಿದ್ದವು. ಯಂತ್ರಗಳದು ಕೃತ್ರಿಮತೆಯಿಲ್ಲದ ನಿರಾಭರಣ ಸೌಂದರ್ಯ ಎಂದು ಬರ್ಕ್ ವೈಟ್ ಬಣ್ಣಿಸುತ್ತಾಳೆ.

ಟೈಮ್ ಮತ್ತು ಲೈಫ್ ಮ್ಯಾಗಜೈನ್ ಗಳನ್ನು ಒಳಗೊಂಡ ಫಾರ್ಚೂನ್ ಎಂಬ ಹೊಸ ಪತ್ರಿಕಾ ಬಳಗದಲ್ಲಿ ಕೆಲಸಕ್ಕೆ ಸೇರುತ್ತಾಳೆ. ಮಧ್ಯಪ್ರಾಚ್ಯದ ಕ್ಷಾಮ ಪೀಡಿತ ಜನಗಳ ಬವಣೆ ಕುರಿತಂತೆ ಫಾರ್ಚೂನ್ ಪತ್ರಿಕೆಗಾಗಿ 'ದಿ ಡ್ರಾಟ್ ' ಎಂಬ ಒಂದು ಸಾಮಾಜಿಕ ಸಾಕ್ಷ್ಯಚಿತ್ರ ತಯಾರಿಸುತ್ತಾಳೆ. ಇದರಿಂದ ಆಕೆಯ ವೃತ್ತಿಜೀವನದ ದಿಕ್ಕೇ ಬದಲಾಯಿತು. ಫೋಟೊ ಜರ್ನಲಿಸಂಗೆಂದೇ ಲೈಫ್ ಮ್ಯಾಗಜೀನ್ ಆರಂಭಿಸಿದ ವಿಶೇಷ ವಿಭಾಗಕ್ಕಾಗಿ ಮೊಂಟಾನ ಅಣೆಕಟ್ಟು ಪ್ರಾಜೆಕ್ಟಿನ ಚಿತ್ರಗಳನ್ನು ತೆಗೆಯಲು ಹೋಗಿದ್ದ ಬರ್ಕ್ ವೈಟ್ ತನ್ನ ಸ್ವಂತ ಆಸಕ್ತಿಯಿಂದ ತೆಗೆದ ಗಡಿನಾಡಿನ ಊರುಗಳ ಬದುಕಿನ ಚಿತ್ರಗಳಾದ 'ಯು ಹ್ಯಾವ್ ಸೀನ್ ದೇರ್ ಫೇಸ್' ಎಂಬ ಹೆಸರಿನ ಚಿತ್ರ ಸಾಕ್ಷ್ಯಚಿತ್ರಗಳ ಪರಂಪರೆಯಲ್ಲಿ ಮೈಲಿಗಲ್ಲು ಸ್ಥಾಪಿಸಿತು. ನಂತರ ತನ್ನ ವೃತ್ತಿ ಬದುಕಿನ ಸಂಗಾತಿ ಕಾಲ್ಡ್ ವೆಲ್ ನನ್ನೇ ಮದುವೆಯಾಗುತ್ತಾಳೆ. ಪತಿಯ ಜೊತೆ ಸೇರಿ ಯುದ್ಧಪೂರ್ವ ಜಕೋಸ್ಲಾವಕಿಯ ಬಗ್ಗೆ 'The North of Denube' ಎಂಬ ಕೃತಿಯನ್ನು ನಂತರ 'Say, is this USA' ಎಂಬ ಕೃತಿಯನ್ನು ರಚಿಸಿದಳು.

ದ್ವಿತೀಯ ಮಹಾಯುದ್ದದ ಸಂದರ್ಭದಲ್ಲಿ, ಸಂಯುಕ್ತ ಸಂಸ್ಥಾನದ ವಾಯುಸೇನಾಬಲದ ಸಮರ ಬಾತ್ಮೀದಾರಳಾಗಿ ಬರ್ಕ್ ವೈಟ್ ಕೆಲಸ ಮಾಡಿದಳು. ಎಷ್ಟೋ ವೇಳೆ ಸೇನೆಯ ಜೊತೆ ನಿಂತು ಜರ್ಮನಿಯ ಕೊನೆಯ ದಿನಗಳನ್ನು ಚಿತ್ರಿಸಿದಳು. ನಾಜೀ ಕ್ಯಾಂಪ್ ಒಳಹೊಕ್ಕು ' The Living Dead of Buchenwald' ಎಂಬ ಕೃತಿ ರಿಚಿಸಿದಳು. ಇದಂತೂ ಛಾಯಾಗ್ರಹಣದ ಇತಿಹಾಸದ ಅಮರ ಕೃತಿ ಎನಿಸಿದೆ.

ಈಕೆ ಭಾರತಕ್ಕೂ ಬಂದಿದ್ದಳು. ಭಾರತವನ್ನು ಕಂಡು ಬರೆದಳು. ಭಾರತದ ಇತಿಹಾಸವನ್ನು ಅರಿಯಲು ಹೊರಡುವವರಿಗೆ ಈಕೆ ನಮಗೆ ಮುಖ್ಯವಾಗುತ್ತಾಳೆ. ಜರ್ಮನಿಯ ಜನಾಂಗೀಯ ಹಿಂಸೆಗಳನ್ನು ಹತ್ತಿರದಿಂದ ಕಂಡಂತೆ ಭಾರತ ವಿಭಜನೆ ಸಂದರ್ಭದಲ್ಲಿ ನಡೆದ ಹಿಂಸೆಗಳಿಗೂ ಆಕೆ ಸಾಕ್ಷಿಯಾಗುತ್ತಾಳೆ ಎಂಬ ಕಾರಣದಿಂದ. ಈಕೆ 1946ರಲ್ಲಿ ಲೈಫ್ ಪತ್ರಿಕೆಗಾಗಿ ಕೆಲಸ ಮಾಡಲು ಭಾರತಕ್ಕೆ ಬಂದವಳು. ಬರ್ಕ್ ವೈಟ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತ ಸ್ವತಂತ್ರವಾಗುವ ದಿನಗಳು ಸಮೀಪಿಸುತ್ತಿದ್ದವು. ಆದರೆ ಅವಿಭಜಿತವಾಗಿಯೇ ಸ್ವಾತಂತ್ರ್ಯವನ್ನು ಪಡೆಯುವ ಭಾರತದ ಕನಸು ನುಚ್ಚುನೂರಾಗಿತ್ತು. ಜನಸಾಮಾನ್ಯರ ಬದುಕು ಕೋಮುದುಳ್ಳುರಿಯಲ್ಲಿ ಬೇಯುತ್ತಿತ್ತು. ಈ ಸಂದರ್ಭದ ಅನೇಕ ಸಂಗತಿಗಳನ್ನು ಹತ್ತಿರದಿಂದ ಕಂಡವಳು.
ಕೋಮುಗಲಭೆಗಳು, ಬರಗಾಲಕ್ಕೆ ತುತ್ತಾದ ಜನರ ಬವಣೆಗಳು, ಚರ್ಮ ಹದ ಮಾಡುವ ಕಾರ್ಖಾನೆಗಳಲ್ಲಿ ದುಡಿಯುವ ಬಾಲಕಾರ್ಮಿಕರು, ಲೇವಾದೇವಿಗಾರರು, ರಾಜಮಹಾರಾಜರು ಹಾಗೂ ಕೈಗಾರಿಕೋದ್ಯಮಿಗಳ ವ್ಯಕ್ತಿತ್ವ ಧೋರಣೆಗಳು, ಆರ್.ಎಸ್.ಎಸ್ ಚಟುವಟಿಕೆಗಳು, ಗಾಂಧೀಜಿ, ಭಾರತದ ಸಾಂಸ್ಕೃತಿಕ ಪದ್ಧತಿಗಳು ಮುಂತಾದ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರ್ಕ್ ವೈಟ್ ದಾಖಲಿಸಿದ್ದಾಳೆ.

ನನಗೆ ಬರ್ಕ್ ವೈಟ್ ಕಂಡ ಭಾರತದಲ್ಲಿ ಪ್ರಮುಖವಾಗಿ ಮೂರು ವ್ಯಕ್ತಿತ್ವಗಳ ಬಗ್ಗೆ ಹೇಳಬೇಕೆನ್ನಿಸುತ್ತಿದೆ. ಒಂದು ಮಹಾತ್ಮಗಾಂಧಿ ಎರಡು ನೆಹರು, ಮೂರನೆಯದು ವ್ಯಕ್ತಿಯಲ್ಲದಿದ್ದರು ಸಾಮಾನ್ಯ ಭಾರತೀಯನ ಮನಸ್ಸುಗಳಲ್ಲಿ ವಿಭಿನ್ನ ಸಂಚಲನೆ ಮೂಡಿದ ಆರ್.ಎಸ್.ಎಸ್. ಬಗ್ಗೆ.

ಗಾಂಧಿ:
ಲೈಫ್ ಪತ್ರಿಕೆಗಾಗಿ ಮಹಾತ್ಮ ಗಾಂಧಿಯವರ ಒಂದು ಫೋಟೊಗಾಗಿ ಬಂದ ಬರ್ಕ್ ವೈಟ್ ಸಂಪೂರ್ಣವಾಗಿ ಗಾಂಧಿಯವರ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾಳೆ. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಗಾಂಧಿ ನಮಗೆ ಯಾಕೆ ಮಹತ್ವವಾಗುತ್ತಾರೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತಾಳೆ. ಯಂತ್ರಗಳ ಬಗ್ಗೆ ಗಾಂಧಿಯವರಿಗಿದ್ದ ಧೋರಣೆಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಚರಕ ಮನುಷ್ಯನ ವ್ಯಕ್ತಿತ್ವದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಈಕೆಗೆ ಬಲು ಗೌರವ. ಧರ್ಮ ಸಹಿಷ್ಣುತೆಯ ಬಗ್ಗೆ ಇಡೀ ದೇಶದಲ್ಲಿ ಅತ್ಯಂತ ಶಕ್ತಿಯುತವೂ ಸ್ಪಷ್ಟವೂ ಆಗಿದ್ದ ಏಕೈಕ ದನಿಯಾಗಿದ್ದವರು ಗಾಂಧಿ.

ನಮಗೆಲ್ಲ ಗಾಂಧಿಯವರ ಬಗ್ಗೆ ಇದ್ದ ಅನುಮಾನ ಹರಿಜನ ಮತ್ತು ಇತರ ಕಾರ್ಮಿಕ ಜನರು ದರಿದ್ರಾವಸ್ಥೆಯಲ್ಲಿ ಜೀವಿಸುತ್ತಿದ್ದರೂ ಅವರ ಸ್ಥಿತಿಗಳಿಗಳನ್ನು ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಪ್ರಚೋದನೆಯಾಗಲಿಲ್ಲ ಎಂಬುದು. ಇವಕ್ಕೆಲ್ಲ ಈ ಪುಸ್ತಕದಲ್ಲಿ ಸ್ಪಷ್ಟ ಉತ್ತರಗಳು ನಮಗೆ ಸಿಗುತ್ತವೆ. ಗಾಂಧಿಯವರಿಗೆ ಹೀಗಾದುದಕ್ಕೆ ಅವರಲ್ಲಿ ಆಳವಾಗಿ ಬೇರೂರಿದ್ದ ಮತ್ತು ಸ್ವಭಾವತಃ ಅವರಲ್ಲಿ ರೂಪುಗೊಂಡಿದ್ದ ದೃಷ್ಟಿಕೋನವೇ ಕಾರಣ. ಗಾಂಧಿಯವರು ಕೇವಲ ಬಿರ್ಲಾ ಅಥವಾ ಬಿರ್ಲಾಗಳು, ದಾಲ್ಮಿಯಾಗಳು, ಮಹಾರಾಜರುಗಳನ್ನು ಹಾಗೂ ಸಂಪತ್ತಿನ ಮಾಲೀಕರನ್ನು ರಕ್ಷಿಸ ಹೊರಟಿರಲಿಲ್ಲ. ಹಳೆಯ ವ್ಯವಸ್ಥೆಯನ್ನು ಸರಳವಾದ ಯಂತ್ರಪೂರ್ವ ಯುಗವನ್ನು ಹಾಗೇ ಕಾಪಾಡಿಕೊಳ್ಳುವುದು ಅವರ ಗುರಿಯಾಗಿತ್ತು. ಇದು ಬದಲಾಗುವುದು ಅವರಿಗೆ ಬೇಕಿರಲಿಲ್ಲ.

ಈ ಸಮಾಜವನ್ನು ಪುನರ್ರಚಿಸುವುದು ಗಾಂಧಿಯವರ ಗುರಿಯಾಗಿರಲಿಲ್ಲ. ಪ್ರತಿಯೊಂದು ಮಾನವ ಹೃದಯವನ್ನೂ ಪರಿವರ್ತಿಸುವುದು ಅವರ ಗುರಿಯಾಗಿತ್ತು. ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿಯ ಒಳ್ಳೆಯತನ ಈಚೆ ಬರುವಂತೆ ಮಾಡಿ, ಈ ಮೂಲಕ ಅಸ್ಪೃಶ್ಯತೆಯಂತಹ ನೀಚ ಪದ್ದತಿಗಳನ್ನು ತೊಲಗಿಸುವುದು ಅವರ ಉದ್ದೇಶವಾಗಿತ್ತು.

ನೆಹರೂ:
ಈಗಂತೂ ಜನ ಸಾಮಾನ್ಯರಲ್ಲಿ ನೆಹರೂ ಅವರನ್ನು ಕೆಟ್ಟದಾಗಿ ಚಿತ್ರಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸರದಾರ್ ಪಟೇಲ್ ಅವರನ್ನು ದೇಶದ ಪ್ರಧಾನಿ ಮಾಡಬೇಕಿತ್ತು ಎಂಬುದು ಅವರ ತರ್ಕ. ನೆಹರೂ ಅವರನ್ನು ಪ್ರಧಾನಿ ಮಾಡಿದ ಗಾಂಧಿಯವರ ನಿರ್ಧಾರ ಎಷ್ಟು ಸಮಂಜಸವಾಗಿತ್ತು ಎಂಬುದು ಬರ್ಕ್ ವೈಟ್ ಸ್ಪಷ್ಟವಾಗಿ ವಿವರಿಸುತ್ತಾಳೆ.

ಸಾಮಾನ್ಯ ಮನುಷ್ಯರ ದೃಷ್ಟಿಯಲ್ಲಿ ಬಿರ್ಲಾ ಎಂದರೆ ಭಾರೀ ಕೈಗಾರಿಕೋದ್ಯಮದ ಪ್ರತೀಕ ಮತ್ತು ಪಟೇಲರು ಇದಕ್ಕೆ ವಕ್ತಾರ. ಜನಸಾಮಾನ್ಯರು ಪಟೇಲರನ್ನು ಶ್ರೀಮಂತರೊಂದಿಗೆ, ನೆಹರೂ ಅವರನ್ನು ಎಡಪಂಥೀಯ ಮನೋಭಾವದೊಂದಿಗೆ ಸಮೀಕರಿಸುತ್ತಿದ್ದರು. ಪಟೇಲರು ಕೈಗಾರಿಕೋದ್ಯಮಿಗಳ ಹಾಗೂ ಮಹಾರಾಜರುಗಳ ಪರವಾಗಿ ಮಾತನಾಡಿದರೆ ನೆಹರೂ ಸಾಮಾನ್ಯ ಮನುಷ್ಯನ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಪಟೇಲ್ ಮತ್ತು ನೆಹರೂ ಅವರ ಧೋರಣೆಗಳಲ್ಲಿನ ಈ ಘರ್ಷಣೆ ಯಾವಾಗಲೂ ಕುದಿಯುತ್ತ ಸ್ಫೋಟಕ ಸ್ಥಿತಿಯಲ್ಲಿ ಇರುತ್ತಿತ್ತು. ಆದರೂ ಅದು ಎಂದೂ ಸ್ಫೋಟಗೊಳ್ಳಲಿಲ್ಲ.

ಗಾಂಧೀಜಿಯವರು ಕೋಮುಗಲಭೆಗಳಿಂದ ರೋಸಿ ಉಪವಾಸವೊಂದೇ ದಾರಿ ಎಂದು ತೀರ್ಮಾನಿಸಿದ ಸುದ್ದಿಯನ್ನು ಬರ್ಕ್ ವೈಟ್ ಅಮೇರಿಕಾಗೆ ಪ್ರಸಾರ ಮಾಡಬೇಕಿತ್ತು. ಗಾಂಧಿಯವರ ಉಪವಾಸದ ಮಹತ್ವವನ್ನು ಅಮೇರಿಕನ್ನರಿಗೆ ತಿಳಿಸಿ ಕೊಡುವುದು ಸುಲಭ ಸಾಧ್ಯವಾಗಿರಲಿಲ್ಲ. ಏಕೆಂದರೆ ಅಮೇರಿಕದಲ್ಲಿ ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇಕಾದ ಸಂವಾದಿ ಸನ್ನಿವೇಶವಿಲ್ಲ. ಭಾರತದಲ್ಲಿ ಜನರು ಬೇರೆ ಬೇರೆ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಸಾಲ ಕೊಟ್ಟವನು ಸಾಲಗಾರನಾಗಿರುವವನ ಮನೆಯ ಮುಂದೆ ಉಪವಾಸ ಮಾಡುತ್ತಾರೆ. ಮನಕರಗಿ ಸಾಲ ಹಿಂದಿರುಗಿಸುವ ಹಾಗೆ ಮಾಡುತ್ತಾರೆ. ಈ ಬಗ್ಗೆ ನೆಹರೂ ಅವರೊಂದಿಗೆ ಮಾತನಾಡಿದರೆ ಕೆಲಸ ಸುಲಭವಾಗಬಹುದು ಎಂದು ಬರ್ಕ್ ವೈಟ್ ಅನ್ನಿಸಿತು. ನೆಹರೂ ಆಲೋಚನಯ ರೀತಿ ಪಾಶ್ಚಾತ್ಯರು ಪೌರ್ವತ್ಯರನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಒಂದು ಸೇತುವೆಯನ್ನು ಕಲ್ಪಿಸಬಲ್ಲದು.

ಗಾಂಧಿಯವರ ಉಪವಾಸದ ಪರಿಣಾಮ ಯಾವ ರೀತಿಯದು ಎಂಬುದನ್ನು ವ್ಯಕ್ತಪಡಿಸುವುದಕ್ಕೆ ಅಗತ್ಯವಾದಷ್ಟು ಮಾಹಿತಿ ನೆಹರು ನೀಡುತ್ತಾರೆ. 'ತಮ್ಮನ್ನು ತಾವೇ ದಂಡಿಸಿಕೊಳ್ಳುವ ಕ್ರಿಯೆ ಭಾರತೀಯ ಮನಸ್ಸುಗಳ ಮೇಲೆ ಬಹಳ ಪ್ರಭಾವ ಬೀರುತ್ತದೆ. 'ತಮ್ಮನ್ನು ತಾವೇ' ಎಂಬ ಮಾತನ್ನು ನೆಹರೂ ವಿಶೇಷವಾಗಿ ಒತ್ತಿ ಹೇಳಿದರು. ಗಾಂಧಿ ಇತರ ಎಲ್ಲರಿಗಿಂತ ಭಿನ್ನವಾದ ಜನಸೇವಕ. ಭಾರತದಲ್ಲಿ ಜನರ ನಡುವೆ ಏಳುತ್ತಿರುವ ಅಡ್ಡಗೋಡೆಗಳು ಗಾಂಧಿಯವರಿಗೆ ಬಹಳ ದುಃಖ ಉಂಟು ಮಾಡಿವೆ. ಜನರ ಮನಸ್ಸನ್ನು ಪರಿವರ್ತಿಸಲು ಗಾಂಧಿ ಈ ಅಂತಿಮ ಕ್ರಮ ಕೈಗೊಂಡಿದ್ದಾರೆ. ಉಪವಾಸದಿಂದ ಎರಡು ರೀತಿಯ ಕೆಲಸಗಳಾಗುತ್ತವೆ. ಸಮಸ್ಯೆಯನ್ನು ಬೇಗ ಪರಿಹರಿಸಬೇಕು ಎಂದು ಒಂದು ತುರ್ತನ್ನು ಅದು ಉಂಟುಮಾಡುತ್ತದೆ. ಮತ್ತು ಜನರು ಹಳೆಯ ರೀತಿಯ ಆಲೋಚನೆಗಳನ್ನು ಬಿಟ್ಟು ಹೊಸ ರೀತಿ ಆಲೋಚಿಸುವಂತೆ ಮಾಡುತ್ತದೆ. ಅದು ಒಂದು ಅನೂಕೂಲಕರವಾದ ಮಾನಸಿಕ ಬದಲಾವಣೆಯನ್ನು ತರುತ್ತದೆ. ಈ ಬದಲಾವಣೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಇತರರಿಗೆ ಸೇರಿದ್ದು.

ಇದರಿಂದ ರಕ್ತಪಾತ ನಿಲ್ಲುವುದೇ? ಇಷ್ಟೆಲ್ಲ ದ್ವೇಷ ತಾಂಡವವಾಡುತ್ತಿರುವಾಗ ಎಂದು ಅನುಮಾನ ವ್ಯಕ್ತಪಡಿಸಿದಾಗ ನೆಹರೂ ಹೇಳುತ್ತಾರೆ 'ನಿಜಕ್ಕೂ ಈ ದ್ವೇಷದಲ್ಲಿ ಮುಳುಗಿ ಹೋಗಿರುವವರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಆದರೆ ಮಧ್ಯಮ ವರ್ಗದ ಮೇಲೆ ಇದು ಬಹಳ ಪ್ರಭಾವ ಬೀರುತ್ತದೆ.

ಆರ್.ಎಸ್.ಎಸ್.:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಬರ್ಕ ವೈಟ್ ಹೀಗೆ ಹೇಳುತ್ತಾಳೆ, ಈ ಸಂಘಟನೆಯಲ್ಲಿ ಹೊಸದಾಗಿ ಸೇರಿಕೊಂಡಿದ್ದವರೆಲ್ಲ ಮುಖ್ಯವಾಗಿ ಆಫೀಸುಗಳ ಗುಮಾಸ್ತರು ಅಥವಾ ವ್ಯಾಪಾರಿ ಕುಟುಂಬಗಳಿಂದ ಬಂದ ಹುಡುಗರು. ದೈಹಿಕ ಬಲ, ಶಿಸ್ತನ್ನು ಬೆಳೆಸುವುದು ಈ ಸಂಘಟನೆಯ ಉದ್ದೇಶ ಎಂದು ಅವರು ಮೇಲೆ ಹೇಳಿಕೊಳ್ಳುತ್ತಿದ್ದರು. ಯಾವುದೇ ಖಾಲಿ ಜಾಗವಿರಲಿ ಅಲ್ಲಿ ಬೆಳಗಿನ ಹೊತ್ತು ಈ ಯುವಕರು ಗುಂಪು ಸೇರುತ್ತಿದ್ದರು. ಕವಾಯತು ಮಾಡುತ್ತಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಒಂದು ಲೋಟ ಹಾಲು ಸಿಗುತ್ತಿತ್ತು. ಇದು ಕಡಿಮೆ ಆದಾಯದ ಗುಂಪುಗಳಿಗೆ ಬಲವಾದ ಆಕರ್ಷಣೆಯಾಗಿತ್ತು. ಈ ಹಾಲಿನ ಖರ್ಚನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದು ಎಂದಿಗೂ ಬಹಿರಂಗವಾಗುತ್ತಿರಲಿಲ್ಲ. ಇದನ್ನು ಕೆಲವು ದೊಡ್ಡದೊಡ್ಡ ಕೈಗಾರಿಕೋದ್ಯಮಿಗಳು ಹಾಗೂ ಕೆಲವು ಮಹಾರಾಜರುಗಳು ಇದಕ್ಕೆ ಅನುಕೂಲ ಒದಗಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ತಮ್ಮದು ರಾಜಕೀಯ ಸಂಘಟನೆಯಲ್ಲ ಎಂದು ಆರ್.ಎಸ್.ಎಸ್. ಹೇಳುತ್ತಿತ್ತು. ಆದರೂ ಈ ತರುಣರು ಕುಡಿಯುತ್ತಿದ್ದ ಹಾಲಿನೊಂದಿಗೆ ಜನಾಂಗೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ತಿಳುವಳಿಕೆಯೂ ಸಾಕಷ್ಟು ಒಳಸೇರುತ್ತಿತ್ತು. ಅವರ ರಹಸ್ಯ ಸಾಹಿತ್ಯದ ಕೆಲವು ಭಾಗಗಳನ್ನು ಓದುವ ಅವಕಾಶ ನನಗೆ ಸಿಕ್ಕಿತ್ತು. ಹಿಂದೂ ಪಾರಮ್ಯದ ಬಗ್ಗೆ ಅದರಲ್ಲಿದ್ದ ಪ್ರತಿಯೊಂದು ಸಾಲೂ ಸಹ, ಜರ್ಮನಿಯಲ್ಲಿ 30ರ ದಶಕದಲ್ಲಿ ತಲೆ ಎತ್ತಿದ ಜನಾಂಗೀಯವಾದವು, ತಮ್ಮದೇ ಶ್ರೇಷ್ಠ ಜನಾಂಗ, ಎಂದು ಹೇಗೆ ಅಲ್ಲಿನ ಜನರಿಗೆ ಬೋಧಿಸುತ್ತಿತ್ತೋ ಅದನ್ನೇ ನೆನಪಿಸುವಂತಿತ್ತು.

ಪ್ರಜಾಪ್ರಭುತ್ವದ ಧೋರಣೆಗಳು ಸರಿಯಾಗಿಲ್ಲ. ಮುಸ್ಲಿಮರನ್ನು ಹಿಂದೂ ರಾಷ್ಟ್ರದ ಸಂಪೂರ್ಣ ಅಧೀನದಲ್ಲಿರುವ ವಿದೇಶಿಯರು ಎಂದು ಪರಿಗಣಿಸಬೇಕು ಎಂಬ ಆರ್.ಎಸ್.ಎಸ್. ನಿಲುವು ನಂಬಿಕೆಗಳನ್ನು ನೋಡಿದಾಗ ಈ ಯುವ ಚಳುವಳಿಯು ಪಶ್ಚಿಮದ ಫ್ಯಾಸಿಸ್ಟ್ ಹಾಗೂ ಸರ್ವಾಧಿಕಾರಿ ಧೋರಣೆಯಂತೆಯೇ ಬೆಳೆಯುವ ಹಾಗೂ ಜ್ಯೂಗಳ ವಿರುದ್ಧ ನಾಜಿಗಳು ವರ್ತಿಸಿದಂತೆ ಇವರೂ ಕೂಡ ಅಲ್ಪಸಂಖ್ಯಾತರ ವಿರುದ್ಧ ವರ್ತಿಸುವ ಅಪಾಯ ಎದ್ದು ಕಾಣುತ್ತಿತ್ತು.

Thursday, November 6, 2008

ಮಡಿ ಬಟ್ಟೆ ಕವಿತೆ



ಉಸ್ಸ್... ಉಸ್ಸ್...
ಲಯಬದ್ದ ಉಸಿರಾಟಕ್ಕೆ
ಎದೆಯ ಸೆರಗು ಇಷ್ಟಿಷ್ಟೇ-
ಅಷ್ಟೂ ಜಾರಿದೆ
ದಾರಿಹೋಕರ ಕಣ್ಣು ರುಚಿಗೆ
ಎದೆಯ ಸೀಳು ಸಿಕ್ಕಿದೆ!

ಉಪ್ಪ್... ಉಪ್ಪ್...
ಲಯಬದ್ದ ಹೊಗೆತಕ್ಕೆ
ಮರ್ಯಾದೆಯ ಒಳಲಂಗ
ಮೊಣಕಾಲ ದಾಟಿದೆ
ಕೈ ತುಂಬಾ ನಡೆದಿದೆ
ನೀರಿನ ಚೆಲ್ಲಾಟ !
ಬುಸ್ಬುಸ್ ನೊರೆಯೊಂದಿಗೆ
ಆಡಿದ ಸೋಪು
ಜಾರಿದೆ
ಅಂತೂ ಇಂತೂ
ಕೊಳೆಯೂ ಮಾಯವಾಗಿದೆ...!

ಬಿಗಿದು ಕಟ್ಟಿದ ತಂತಿ ಮೇಲೆ
ತೊಳೆದ ಬಟ್ಟೆಗಳು ಹಾರಾಡುತ್ತಿವೆ
ಅವುಗಳಿಗೆ
ಎಷ್ಟೊಂದು ಬಣ್ಣ, ಎಷ್ಟೊಂದು "ಮಡಿ"ಕೆ!

-ಪಿ. ಮಂಜುನಾಥ

Wednesday, November 5, 2008

ಆ ಜನತೆಗೆ ಸಾಷ್ಟಾಂಗ ನಮಸ್ಕಾರ


ಬಾರಕ್ ಹುಸೇನ್ ಒಬಾಮಾನನ್ನು ಗೆಲ್ಲಿಸಿ ಪ್ರಜಾಪ್ರಭುತ್ವದ ಬಲುದೊಡ್ಡ ವಿಜಯಕ್ಕೆ ಕಾರಣರಾದ ಅಮೇರಿಕದ ಜನತೆಗೆ ನಿಸಾರ್ ಬರೆದ ಅಮೇರಿಕ, ಅಮೇರಿಕ ಪದ್ಯ ಸಾಲುಗಳಿಂದ ನಮಿಸುತ್ತೇನೆ.
ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ
ನಿನ್ನವರ ಟೈ ಸೂಟು ಸ್ಕರ್ಟುಗಳನೊಂದೊಂದೆ ಕಳಚಿ, ನೆತ್ತರಿನಿಂದ
ಸ್ಪ್ಯಾನಿಶರ ಜರ್ಮನರ ಫೋರ್ಚುಗೀಸಾಂಗ್ಲ ನೀಗ್ರೋಗಳ
ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ
ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ-
ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡು
ನುಡಿ ಎಡವಿ ಕೈಮುಗಿದು ಬೆಪ್ಪಗಾಗುತ್ತೇನೆ..

Sunday, November 2, 2008

ವಿಶ್ವಪ್ರಸಿದ್ಧ ಹಂಪಿ ಕಲ್ಲಿನ ರಥಕ್ಕೆ ಗೋಪುರವಿತ್ತು!





ಹೌದು ಇದು ಆಶ್ಚರ್ಯವೆನಿಸಿದರೂ ನಿಜ. ವಿಜಯನಗರ ಸಾಮ್ರಾಜ್ಯದಲ್ಲಿನ ಪ್ರಸಿದ್ಧ ದೊರೆ ಶ್ರೀಕೃಷ್ಣ ದೇವರಾಯನ ಆಳ್ವಿಕೆಯ ಕಾಲ ಸುಮಾರು 1520. ಇವನ ಆಳ್ವಿಕೆಯಲ್ಲಿಯೇ ವಿಜಯನಗರ ಉತ್ತುಂಗ ಸ್ಥಿತಿ ತಲುಪಿ, ಸುಂದರವಾದ ವಾಸ್ತು-ಶಿಲ್ಪಗಳು, ದೇಗುಲಗಳ ಕೆತ್ತನೆ ನಡೆದದ್ದು. ಆ ಸಂದರ್ಭದಲ್ಲೇ ಬೆಣಚುಕಲ್ಲಿನಿಂದ ನಿರ್ಮಾಣವಾದ ಈ ರಥಕ್ಕೆ ಚೆಂದಾದ ಗೋಪುರವೊಂದಿತ್ತು. ವಿಜಯನಗರ ಸಾಮ್ರಾಜ್ಯದ ವೈಭವೋಪೇತ ಜನಜೀವನದ ಬಗ್ಗೆ ಇತಿಹಾಸ ಸಂಶೋಧಕ ರಾಬರ್ಟ್ ಸೆವೆಲ್ ಬರೆದ 'ಎ ಫರ್ ಗಾಟನ್ ಎಂಪೈರ್' ಪುಸ್ತಕದಲ್ಲಿ ಹಂಪಿ ಕಲ್ಲಿನ ರಥದ ಬಗ್ಗೆ ವಿಸ್ತಾರವಾಗಿ ಬರೆದಿದ್ದು ಅದರ ಮೂಲಚಿತ್ರವನ್ನು ಕಣ್ಣೆದುರಿಗೆ ತೆರೆದಿಟ್ಟಿದ್ದಾರೆ.

ಈ ಚಿತ್ರವನ್ನು ನೋಡಿದರೆ ಇತಿಹಾಸದ ಗ್ರಹಿಕೆ ಮತ್ತು ನಮಗಿರುವ ಜ್ಞಾನದ ಬಗ್ಗೆ ಯೋಚನೆಗೆ ಅಚ್ಚುತ್ತದೆ. ರಾಬರ್ಟ್ ಸೆವೆಲ್ ಪುಸ್ತಕ ಪ್ರಕಟವಾದದ್ದು 1900ರಲ್ಲಿ. ಈ ಚಿತ್ರವನ್ನು ಸುಮಾರು ಒಂದು ಶತಮಾನದ ಹಿಂದೆ ತೆಗೆದದ್ದು. ಈ ನಡುವೆ 1986ರವರೆಗೆ ಅಂದರೆ ಯುನೆಸ್ಕೋ ವರ್ಲ್ಡ್ ಹೆರಿಟೆಜ್ ಸೈಟ್ ಎಂದು ಘೋಷಿಸುವವರೆಗೂ ಈ ಹಂಪಿಯಗತಿ ಹೇಗಿತ್ತು ಎಂಬುದನ್ನು ಊಹಿಸಬಹುದು. ಗೋಪುರವಿಲ್ಲದ ರಥದಂತೆ ಕಳೆದ ಐದುನೂರು ವರ್ಷಗಳಲ್ಲಿ ಅಲ್ಲಿ ಏನೇನಾಯಿತು ಎಂಬುದು ಅವರವರ ಊಹೆಗೆ ಬಿಟ್ಟದ್ದು. ಅಂದಹಾಗೆ ನವೆಂಬರ್ 3ರಿಂದ 5ರವರೆಗೆ 'ಹಂಪಿ ಉತ್ಸವ' ನಡೆಯುತ್ತಿದ್ದೆ ಅಲ್ಲಲ್ಲ 'ಗಣಿ ಉತ್ಸವ' ನಡೆಯುತ್ತಿದೆ.

Wednesday, October 29, 2008

ಪಿ. ಮಂಜುನಾಥ್ ಬರೆದ 'ಅಮೇರಿಕಾ ಅಕ್ಕ'



ಮಿತ್ರ ಪಿ. ಮಂಜುನಾಥ್ ಮೂಲತಃ ಶಿರಾ ತಾಲೂಕು ಗೋಮಾರದಹಳ್ಳಿಯವರು. ಕಲಾವಿದ, ಕವಿ, ಕಥೆಗಾರ, ಪ್ರಗತಿಪರ ಚಿಂತಕ . ನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ತಿಪಟೂರಿನ ರಂಗ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ವ್ಯಕ್ತಿ. ಇವರು ಅಭಿನಯಿಸಿದ ತಿರುಗಾಟದ ಯಶಸ್ವಿ ನಾಟಕ 'ಚಿರೆಬಂದಿವಾಡಿ'ಯ 'ಭಾಸ್ಕರ ದೇಶಪಾಂಡೆ' ಪಾತ್ರಕ್ಕೆ ಬಹು ಪ್ರಶಂಸೆ ವ್ಯಕ್ತವಾಗಿತ್ತು. ಈಗ ಸದ್ಯಕ್ಕೆ ಕಸ್ತೂರಿ ವಾಹಿನಿಯ ತುಮಕೂರು ವರದಿಗಾರ. ಇವರ ಇತ್ತೀಚಿನ ಕಥೆ 'ಅಮೇರಿಕಾ ಅಕ್ಕ' ಇಲ್ಲಿ ನಿಮಗಾಗಿ.
ಕಥೆ ಮೇಲ್ನೋಟಕ್ಕೆ ಮೈಮನಗಳ ಸುಳಿ ಅನ್ನಿಸಿದರೂ, ಮೂಲದಲ್ಲಿ ಮನುಷ್ಯ ಸಂಬಂಧಗಳ ಮುಕ್ತತೆ ಮತ್ತು ಮುಚ್ಚಿಕೊಳ್ಳುವಿಕೆಗಳ ತಾಕಲಾಟಗಳನ್ನು ಧ್ವನಿಸುತ್ತದೆ.

ನಾನು ಬೇಕೆಂದೇ ಸೂರಿಗೆ 'ಒಂದು ವಾಕ್ಯ ಬರೆದು ಕೊನೆಗೆ ಚುಕ್ಕೆ ಇಟ್ಟರೆ ಅದನ್ನು ವ್ಯಾಕರಣದಲ್ಲಿ ಕಾಮ ಎನ್ನುತ್ತಾರೆ' ಎಂದೆ. ಸೂರಿ ಗೊಳ್ಳೆಂದು ನಕ್ಕ!

ಹಾಗೆ ಹೇಳುವವರಿಗೆ ಕಾಮದ ವ್ಯಾಕರಣವೇ ಗೊತ್ತಿಲ್ಲವೆಂದು ಗೇಲಿ ಮಾಡಿದ! ಇಷ್ಟಾಗಿದ್ದೇ ಸಾಕು, ಸೂರಿ ಬಾಯಲ್ಲಿ ಹಸಿಹಸಿ ಕಾಮದ ಕತೆಗಳೇ ಹೊರಬೀಳಲಿದ್ದವು. ಅವನದೂ ಸೇರಿದಂತೆ ಊರ ಹೆಂಗಸರ, ಗಂಡಸರ ಅನೈತಿಕ ಕಾಮ ಪ್ರಸಂಗ, ಪ್ರಹಸನ ಕೇಳಲು ನನ್ನ ಕಿವಿ ತನ್ನಿಂದ ತಾನೇ ಹಣಿಯಾಗಿದ್ದವು.

ಆರು ಜನ ಅಕ್ಕಂದಿರಿಗೆ ಸೂರಿ ಒಬ್ಬನೇ ತಮ್ಮ. ನಮ್ಮ ಹಳ್ಳಿಕಡೆ ಒಂದು ಮಾತಿದೆ- ಏಳು ಮಕ್ಕಳಾಗಬಾರದು. ಅವರ ಬಾಳು ಏಳುಬೀಳು ಎಂದು. ಈ ಮಾತಿಗೆ ಪುಷ್ಟಿನೀಡುವಂತೆ ಸೂರಿ ಕುಟುಂಬ ಇದೆ. ಸೂರಿ ಹಿರಿ ಅಕ್ಕ ರತ್ನ ಡಾಕ್ಟರ್ ಮದುವೆಯಾಗಿ ಅಮೇರಿಕಾದಲ್ಲಿದ್ದಾಳೆ. ಕಿರಿ ಅಕ್ಕ ಚಂದ್ರಿ ಗಂಡನ ಕೊಲೆ ಮಾಡಿದ ಆರೋಪ ಹೊತ್ತು ಮಗಳ ಜೊತೆ ಜೈಲಿನಲ್ಲಿದ್ದಾಳೆ. ಸೂರಿಯ ಎಸ್ಸೆಸ್ಸೆಲ್ಸಿ ಫಲಿತಾಂಸ ಬರುವ ಮೂರು ದಿನಕ್ಕೆ ಮುಂಚೆ ಅವನಪ್ಪ ರಂಗಣ್ಣ ಸ್ಮಶಾನ ಸೇರಿದರು. ಸೂರಿ ಅವ್ವ ರಾಮಕ್ಕ ಬಲು ಬಜಾರಿ ಎಂದೇ ನಮ್ಮೂರಿನಲ್ಲಿ ಖ್ಯಾತಿ.

ಮತ್ತೊಬ್ಬಳು ಅಕ್ಕನ ಗಂಡ ಆತ್ಮಹತ್ಯೆ ಮಾಡಿಕೊಂಡ. ಗಂಡ ಸತ್ತ ಮೇಲೆ ದೈವದ ಹುಚ್ಚು ಹತ್ತಿದ ಶಿವಮ್ಮ ಹಳ್ಳದ ದಂಡೆಯೊಂದರಲ್ಲಿ ಆಶ್ರಮ ಮಾಡಿಕೊಂಡಿದೆ. ಉಳಿದ ನಾಗಮ್ಮ, ಸುನಂದ, ಲಲಿತ ಎಂಬ ಅಕ್ಕಂದಿರ ಕುಟುಂಬಗಳು ಅತ್ತ ಆರಕ್ಕೇರದೆ ಇತ್ತ ಮೂರಕ್ಕಿಳಿಯದೆ ಸಾಗುತ್ತಿವೆ. ಆದರೂ ಸೂರಿ ಎಂದರೆ ಅವನ ಅಕ್ಕಂದಿರಿಗೆಲ್ಲ ಬಲು ಪ್ರೀತಿ. ಅಮೇರಿಕಾ ಅಕ್ಕ ಡಾಲರ್ ದುಡ್ಡು ಕಳುಹಿಸಿ ಪ್ರೀತಿ ತೋರಿದರೆ, ಜೈಲಿನ ಅಕ್ಕ ಅದ್ಯಾವ ಮಾಯದಲ್ಲೋ ರಾತ್ರೋರಾತ್ರಿ ಜೈಲಿನಿಂದ ಇವನ ಮನೆಗೆ ಬಂದು, ನಾಲ್ಕು ಮಾತನಾಡಿಸಿ ಬೆಳಕು ಹರಿಯುವ ಮುಂಚೆ ಜೈಲು ಸೇರುತ್ತಾಳೆ!
ಆಶ್ರಮವಾಸಿ ಅಕ್ಕನ ಪ್ರಾರ್ಥನೆಗಳೆಲ್ಲವೂ ಸೂರಿಗೆ ಶ್ರೇಯಸ್ ಬಯಸಿಯೇ ಇರುತ್ತವೆ. ಉಳಿದ ಅಕ್ಕಂದಿರು ತಮ್ಮ ಶಕ್ತಾನುಸಾರ ಪ್ರೀತಿ ತೋರುತ್ತಾರೆ. ಅಷ್ಟಕ್ಕೂ ಪ್ರೀತಿಗೆ ಅಳತೆಗೋಲು ಎಲ್ಲಿದೆ ಹೇಳಿ?

ಅಕ್ಕಂದಿರ ಪ್ರೀತಿಯಲ್ಲಿ ಅದ್ದಿ ತೆಗೆದಂತಿರುವ ಸೂರಿಯದು ಮಹಾ ಜೀವನಪ್ರೀತಿ. ಅವನು ಗಂಟೆಗಟ್ಟಲೇ ಊಟ ಮಾಡುವುದು ಅವನ ಜೀವನ ಪ್ರೀತಿಗೊಂದು ಉದಾಹರಣೆಯಷ್ಟೆ. ಆತ ಊಟ ಮಾಡಿ ಮುಗಿಸಲು ಬರೋಬರಿ ಒಂದೂವರೇ ತಾಸು ಬೇಕು. ಆ ಪರಿ ಊಟದ ರುಚಿ ಎಂಜಾಯ್ ಮಾಡುತ್ತಾನೆ. ಅವನಮ್ಮ ರಾಮಕ್ಕನ ಜೊತೆ ವಾಸವಾಗಿರುವ ಸೂರಿಗೆ ಮದುವೆ ವಯಸ್ಸು ಮೀರುತ್ತಿದೆ. ಅಂದರೆ ನಮ್ಮಕಡೆ ಒಬ್ಬನೇ ಮಗನಿದ್ದರೆ ಹದಿನೆಂಟು-ಇಪ್ಪತ್ತು ವರ್ಷಕ್ಕೆಲ್ಲಾ ಮದುವೆ ಡೋಲು ಬಾರಿಸಿಬಿಡುತ್ತಾರೆ. ಆದರೆ ಸೂರಿಗೀಗ ಹತ್ತಿರತ್ತಿರ ಮೂವತ್ತು ವರ್ಷ. ಮದುವೆ ಬಗ್ಗೆ ಊಟದಷ್ಟು ಆಸಕ್ತಿ ತೋರುತ್ತಿಲ್ಲ. ಜೀವನಕ್ಕೆ ಜಮೀನಿದೆ. ಮಳೆ-ಬೆಳೆ ಕೈಕೊಟ್ಟರೆ ಅಕ್ಕ ಕಳುಹಿಸುವ ಡಾಲರ್ ದುಡ್ಡು ಇದೆ. ಅವನ ಬಗ್ಗೆ ನಮ್ಮೂರ ಪುಟಗೋಸಿ ಜನ ಹೇಳುವಂತೆ ಕುಡಿದ ನೀರು ಅಲುಗದಂತೆ ಇದ್ದಾನೆ. ಹೀಗಾಗಿ ಅವನಕ್ಕ ಗಂಡನ ಕೊಲೆ ಮಾಡಿದ ಕಳಂಕ ಹೊತ್ತು ಜೈಲು ಸೇರಿದ್ದರೂ ಅದನ್ನು ಲೆಕ್ಕಕಿಡದ ಅನೇಕರು ಸೂರಿಗೆ ಹೆಣ್ಣು ಕೊಟ್ಟು ಮದುವೆ ಮಾಡಲು ರೆಡಿಯಿದ್ದಾರೆ. ಜೊತೆಗೆ ಜೈಲಿನ ಅಕ್ಕನ ಮಗಳು ಸೇರಿ ಮೂವರು ಅಕ್ಕಂದಿರ ಹೆಣ್ಣು ಮಕ್ಕಳಿದ್ದಾರೆ-ಇವನನ್ನು ಮಾವ ಎಂದು ಕರೆಯಲು. ಅವರಲ್ಲೇ ಒಬ್ಬರನ್ನು ವರಿಸಿದರಾಯಿತು. ಆದರೇಕೋ ಭೂಪನೋ, ಊಪನೋ ಒಂದೂ ಅರ್ಥವಾಗದ ಸೂರಿ ಮದುವೆಗೆ ಮನಸ್ಸು ಕೊಟ್ಟಿಲ್ಲ. ಅಷ್ಟಕ್ಕೂ ಮದುವೆ ಬಗ್ಗೆ ಅವನ ಕೆಮಿಸ್ಟ್ರಿ ಏನಿದೆಯೋ ಗೊತ್ತಿಲ್ಲ.
***
"ನೀನು ಜೀವನದಲ್ಲಿ ಮೊದಲ ವಾಕ್ಯ ಬರೆದು ಕಾಮದ ಚುಕ್ಕಿ ಇಟ್ಟಿದ್ದು ಯಾವಾಗ?' ಎಂದ ಸೂರಿ. ನನಗೆ ಅವನ ಮಾತಿನ ಒಳತೋಟಿ ಅರ್ಥವಾದರೂ ಗೊತ್ತಿಲ್ಲದವನಂತೆ, ನೆನಪು ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುವಂತೆ ನಟಿಸಿದೆ. ಎರಡನೇ ಕ್ಲಾಸ್ನಲ್ಲಿ ರವಿಯು ಅಜ್ಜನ ಮನೆಗೆ ಹೋದ ಎಂದು ಬರೆದು ಮರೆಯದೇ ಚುಕ್ಕಿ ಇಟ್ಟಿದ್ದನ್ನು ನಗುತ್ತಲೇ ಹೇಳಿದೆ. ಸೂರಿ ಮೈ ಸಡಿಲ ಬಿಟ್ಟು ಕುಲುಕುಲು ನಕ್ಕ. ಅವನ ಬಾಯಲ್ಲಿ ಹಸಿ ಕಾಮದ ಕತೆ ಕೇಳಲು ಕಾತರಿಸುವ ನನ್ನ ಬಗ್ಗೆ ಅರಿವಿದ್ದ ಸೂರಿ, ತನ್ನ ವೈಯಕ್ತಿಕ ಕತೆಗಳನ್ನು ಬಿಚ್ಚಿ ಹೇಳುತ್ತಲೇ ನನ್ನ ಒಳಕೋಶಗಳನ್ನೆಲ್ಲಾ ಶೋಧಿಸುವಷ್ಟು ಚಾಲೂ ಇದ್ದ. "ಮರಿ, ನೀನು ಆರ್ಟ್ ಫಿಲಂ ಡೈರೆಕ್ಟರ್ ಕೈ ಕೆಳಗೆ ಕೆಲಸ ಮಾಡೋನು. ನೀನೂ ಮುಂದೊಂದು ದಿನ ಕತ್ತಲೇ ಕಿಕ್ಕಿರಿದ ಸಿನಿಮಾ ತೆಗೆದು, ಅದನ್ನು ಯಾವೂದಾದರೂ ಇಂಟರ್ನ್ಯಾಸಿನಲ್ ಪೆಸ್ಟಿವಲ್ನಲ್ಲಿ ಪ್ರದರ್ಶಿಸಿ ಪ್ರಖ್ಯಾತಿ ಪಡೆಯುವ ಆಸೆ ಕೂಡ ಇಟ್ಕೊಂಡಿದ್ದೀಯ. ಅದಕ್ಕೆ ಹೇಳುತ್ತೇನೆ, ನಿನ್ನ ಭಾವಕೋಶದಲ್ಲಿ ಸ್ಟೋರ್ ಮಾಡ್ಕೋ. ಯಾರ್ಯಾರ ಜೀವನದಲ್ಲಿ ಮೊಟ್ಟ ಮೊದಲಿಗೆ ಕಾಮದ ಮುಳ್ಳು ಚಿಟಿಕೆ ಆಡಿಸಿದಂತೆ ಆಗಿರುತ್ತದೆಂದು ಗೊತ್ತಿರುವುದಿಲ್ಲ. ನನ್ನದೇ ಹೇಳುವುದಾದರೆ...."ಎಂದ. ಆಗ ನಾನು ಸೂರಿ ಮುಂದೆ ಶ್ರೀಕೃಷ್ಣ ಭಗವದ್ಗೀತೆ ಹೇಳುವಾಗ ಅರ್ಜುನ ಇದ್ದಂತೆ ಇರಲು ಪ್ರಯತ್ನಿಸಿದೆ.

ಹೊಲೇರ ಪುಟ್ಟಿ, ಅಮೇರಿಕಾ ನನ್ನ ಅಕ್ಕ ರತ್ನಿ ಗೆಳತಿಯರು. ಆಗ ನನ್ನಕ್ಕ ಹೈಸ್ಕೂಲಿಗೆ ಹೋಗುತ್ತಿದ್ದಳೆಂದು ಕಾಣುತ್ತದೆ. ನಾನಿನ್ನು ಒಂದನೇ ತರಗತಿಗೆ ಸೇರಿದ್ದನೋ ಇಲ್ಲವೋ ನೆನಪು ಮಸುಕು ಮಸುಕು. ಬಾಲ್ಯದ ನೆನಪಿನ ಹಿಂದೆ ಓಡಿದಷ್ಟು ಕತ್ತಲು. ಅವತ್ತು ಭಾನುವಾರವೇ ಇದ್ದಿರಬೇಕು. ಅಕ್ಕ ಮಧ್ಯಾಹ್ನದ ಹೊತ್ತು ಮಲಗಿದ್ದಳು. ಏಕೋ ಪುಟ್ಟಿ ಅಕ್ಕನ ಹುಡುಕಿಕೊಂಡು ಮನೆಗೆ ಬಂದಳು. "ರತ್ನಿ, ಬಾರೇ ಬಾರೇ...'ಎಂದು ಬಾಗಿಲಲ್ಲಿ ನಿಂತು ಕೂಗುತ್ತಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ನಾನು ಅಕ್ಕ ಇದ್ದೆವು. ಅವಳ ಪಕ್ಕದಲ್ಲಿ ಮಲಗಿದ್ದ ನಾನು ಅವಳ ಎದೆ ಏರಿ ಕುಳಿತು ಚೇಷ್ಟೆ ಮಾಡುತ್ತಿದ್ದೆ. ಪುಟ್ಟಿ ಹೊರಗಿನಿಂದ "ಬಾರೇ ಬಾರೇ...' ಎಂದು ಕೂಗತ್ತಲೇ ಇದ್ದಳು. ಅಕ್ಕ "ಇರೇ, ಇವನು ಬಿಡುತ್ತಿಲ್ಲ. ಕಚಗುಳಿ ಇಡುತ್ತಿದ್ದಾನೆ' ಎಂದು ಕಿಲಕಿಲ ನಗುತ್ತಿದ್ದಳು. ಈ ಮಾತು ಏಕೋ ನನ್ನ ಕಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಮಾತಿನ ಲಹರಿ ನನ್ನ ಎದೆಯೊಳಗೆ ಬಿಚ್ಚಿಕೊಂಡಾಗಲೆಲ್ಲಾ ನನ್ನ ಆಗಿನ ಪುಟಾಣಿ ಬೆರಳುಗಳಲ್ಲಿ ಅಕ್ಕನ ಕಂಕುಳ ಅಡಿಯ ಎಳೆಗೂದಲು ಕೈಗೆ ಅಂಟಿಕೊಂಡಂತೆ ನೆನಪು ಮಿಸುಕಾಡುತ್ತದೆ. ನಾನು ಬಾಲ್ಯ ಕಾಲಕ್ಕೆ ಓಡಿದಾಗಲೆಲ್ಲಾ ಈ ಕಚಗಳಿ ನೆನಪಾಗುತ್ತದೆ. ಬಹುಶಃ ನನಗೆ ಆಗಲೇ ಇದ್ದಿರಬೇಕು- ಕಾಮದ ಮುಳ್ಳು ಚಿಟಿಕೆ ಆಡಿದಂತೆ ಆಗಿದ್ದು ಅನ್ನಿಸುತ್ತದೆ ಎಂದ.

ಸೂರಿಯ ಇಂಥ ಮುಕ್ತ ಮಾತುಗಳು ನನ್ನೊಳಗೆ ಮುಜುಗರ ಉಂಟು ಮಾಡುತ್ತಿದ್ದು ನಿಜ. ಯಾಕೆಂದರೆ ಅವನ ಮಾತಿನ ವಾಸನೆ ಹಿಡಿದ ನನ್ನ ಮನಸ್ಸು ಹಿಂದಕ್ಕೆ ಓಡಿದರೆ ನನ್ನೊಳಗೆ ಅದಿನ್ನೆಂಥ ನೆನಪು ಬಿಚ್ಚಿಕೊಂಡಿತೋ ಎಂಬ ಭಯವೂ ಆಗುತ್ತಿತ್ತು. ಕಾರಣ ನಾನು ಸೂರಿಯಂತೆ ಮುಕ್ತನಾಗುವುದರಲ್ಲಿ ಇಚ್ಚೆ ಇಲ್ಲದವನು. ಮುಚ್ಚಿಕೊಳ್ಳುವುದರಲ್ಲೇ ಈವರೆಗೂ ಸುಖ ಕಂಡವನು. ಮನುಷ್ಯ ಮೂಲತಃ ಸ್ವಾರ್ಥಿ. ಇದಕ್ಕೆ ನಾನು, ಸೂರಿ ಹೊರತಲ್ಲ. ಸೂರಿಗೆ ತನ್ನೊಳಗಿನ ಕತೆ ಬಿಚ್ಚಿಕೊಳ್ಳುವುದರಲ್ಲೇ ಸುಖ ಪಡೆಯುವ ಸ್ವಾರ್ಥವಿದ್ದರೆ, ನನ್ನದು ಬಾಲ್ಯದ ನೆನಪೇ ಕಾಡದಂತೆ ಮುಚ್ಚಿಕೊಳ್ಳುವ ಸ್ವಾರ್ಥ. ಅದಕ್ಕಾಗಿ ನನ್ನ ಬಾಲ್ಯದ ಎಂಥದ್ದಾದರೂ ಅಘಾತ ಹುಟ್ಟಿಸುವ ನೆನಪು ಬಿಚ್ಚಿಕೊಂಡು ಕಾಡುವ ಮುಂಚೆ ಈ ಸೂರಿಯ ಅಮೇರಿಕಾ ಅಕ್ಕನ ಕತೆ ಹೇಳುವ ಯತ್ನ ಮಾಡುತ್ತೇನೆ.
***
ಸೂರಿ ಕುಟುಂದಲ್ಲಿ ಅವನ ಹಿರಿ ಅಕ್ಕ ರತ್ನಿ ಮಾತ್ರವೆ ಹೆಚ್ಚು, ಅಂದರೆ ನರ್ಸಿಂಗ್ ಓದಿದ್ದಾಳೆ. ಅದೂ ಆ ಹೈಸ್ಕೂಲ್ ಮೇಸ್ಟ್ರು ನಾರಾಯಣಪ್ಪ ಅಂಥದ್ದೊಂದು ಹಲ್ಕ ಕೆಲಸ ಮಾಡದಿದ್ದರೆ ಆಕೆ ಓದು ಕೂಡ ಆವರೆಗೂ ಸಾಗುತ್ತಿರಲಿಲ್ಲ. ಇದರಿಂದ ಆಕೆ ಅಮೇರಿಕಾ ಸೇರಿ ಇಡೀ ಕುಟುಂಬವನ್ನು ಆತುಕೊಳ್ಳುತ್ತಿರಲಿಲ್ಲ. ಬಿಡಿ, ಅಷ್ಟಕ್ಕೂ ಈಗ ಗುಟ್ಟಾಗಿರುವಂತೆ ಕಾಣುವ ಸೂರಿ ಹಿರಿ ಅಕ್ಕನ ಕತೆಯನ್ನು ನಾನೊಬ್ಬನೇ ಮೊದಲ ಬಾರಿಗೆ ಹೀಗೆ ಬಹಿರಂಗ ಪಡಿಸುತ್ತಿಲ್ಲ. ಇದು ನಮ್ಮೂರಿಗೆ ಏಕೆ, ಸುತ್ತಲಿನ ಹದಿನಾರು ಹಳ್ಳಿಗೆ ಗೊತ್ತಿರುವ ಕತೆ. ಆದರೆ ಸಾರ್ವಜನಿಕರ ಸ್ಮೃತಿ ಅಲ್ಪ ಎಂಬ ತತ್ವಜ್ಞಾನಿಗಳ ಮಾತಿನಂತೆ ಈಗ ಅದು ಮರೆತು ಹೋದ ಕತೆ. ಅಲ್ಲದೆ ಸಮಾಜದಲ್ಲಿ ಯಾವುದೇ ವ್ಯಕ್ತಿ, ಕುಟುಂಬ ಆರ್ಥಿಕವಾಗಿ ಏಳಿಗೆ ಸಾಧಿಸಿದಂತೆ ಅವರನ್ನು ಗ್ರಹಿಸುವ ಸಮಾಜದ ಕ್ರಮವೇ ಬದಲಾಗಿಬಿಡುತ್ತದೆ. ಸೂರಿ ಅಕ್ಕ ರತ್ನಿ ಆ ಕಾಲಕ್ಕೆ ನಮ್ಮೂರ ಸುಂದರಿ. ಪಾಠದಲ್ಲಿ ಸರಸ್ವತಿ. ಓಟದಲ್ಲಿ ಜಿಂಕೆ. ಹಾಡುವುದರಲ್ಲೂ ಕೋಗಿಲೆ. ಆಗ ನಮ್ಮೂರಿನಲ್ಲಿ ಹೈಸ್ಕೂಲ್ ಇರಲಿಲ್ಲ. ಅಷ್ಟೇಕೆ ಆಗ ನಮ್ಮೂರಿನಲ್ಲಿ ತಗಡಿನ ಮೇಲೆ ಬರೆಸಿದ ಬೋರ್ಡ್ ಒಂದೇ ಇದ್ದದ್ದು- ಹಿರಿಯ ಪ್ರಾಥಮಿಕ ಶಾಲೆ, ಗಿಡುಗನಹಳ್ಳಿ ಎಂದು. ಆ ಬೋರ್ಡನ್ನು ಎಲ್ಲ ವಿದ್ಯಾರ್ಥಿಗಳಿಂದಲೂ 50ಪೈಸೆಯಂತೆ ಕಲೆಕ್ಟ್ ಮಾಡಿ ಹೆಡ್ಮಾಸ್ಟರ್ ಬರೆಸಿದ್ದರು.

ಆಗ ರತ್ನ ಪಬ್ಲಿಕ್ ಪರೀಕ್ಷೆಯಲ್ಲಿ ಏಳನೇ ತರಗತಿ ಪಾಸ್ ಮಾಡಿದ್ದಳು. ಶಾಲೆ ಮೇಸ್ಟ್ರು ಸಲಹೆ ಮೇರೆಗೆ ಅವರಪ್ಪ ರಂಗಣ್ಣ ರಂಗನಹಳ್ಳಿ ಹೈಸ್ಕೂಲ್ಗೆ ಸೇರಿಸಿದ್ದರು. ನಮ್ಮೂರಿಗೆ ರಂಗನಹಳ್ಳಿ ಐದು ಮೈಲಿ. ಓದುವ ಇಚ್ಚೆ ಇದ್ದವರು ಅಲ್ಲಿಗೆ ನಡೆದು ಹೋಗುವುದು ಅನಿವಾರ್ಯ. ಕೆಲಸವಿದ್ದರೆ ಮಾತ್ರ ಆ ಊರಿಗೂ-ನಮ್ಮೂರಿಗೂ ಎತ್ತಿನ ಗಾಡಿ ಓಡಾಡುತ್ತಿದ್ದವು. ಬಸ್ ಇರಲಿಲ್ಲ. ಊರಿನ ಇನ್ನಿಬ್ಬರು ಹುಡುಗರು ಹಾಗೂ ರತ್ನ ನಡೆದುಕೊಂಡೇ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು. ಇದನ್ನು ಒಂದೋ ಅಥವಾ ಎರಡನೇ ತರಗತಿಯಲ್ಲೋ ಓದುತ್ತಿದ್ದ ನಾವು ಬೆಕ್ಕಸಬೆರಗಾಗಿ ನೋಡುತ್ತಿದ್ದೆವು. ನಾವು ಅವರ ಹಾಗೆ ಹೈಸ್ಕೂಲಿಗೆ ಹೋಗುವ ಕನಸು ಕಾಣುತ್ತಿದ್ದೆವು.

ರತ್ನ ಬರೀ ಸುಂದರಿ ಎಂದರೆ ಸಾಲದು. ಯಾಕೆಂದರೆ ಎಂಥ ಅರಸಿಕರು ವರ್ಣಿಸುವಷ್ಟು ಸೌಂದರ್ಯ ಅವಳ ದೇಹದಿಂದ ಚಿಮ್ಮುತ್ತಿತ್ತು. ಆಕೆ ರಂಗನಹಳ್ಳಿ ಶಾಲೆಗೆ ಹೋಗಿ ಬರುತ್ತಿದ್ದ ದಾರಿಯಲ್ಲೇ ಅರವತ್ತು ದಾಟಿದ ತಿಮ್ಮಜ್ಜನ ಮನೆ ಇತ್ತು. "ರತ್ನೂ, ಬಾರೇ ಮೊಮ್ಮಗಳೇ... ಒಂದು ಲೋಟ ನೀರು ಕೊಡು...'ಎಂದು ಮನೆಯಿಂದ ಹೊರಗಡೆ ಕುಳಿತಿದ್ದ ತಿಮ್ಮಜ್ಜ ರತ್ನಿಯನ್ನು ಕರೆಯುತ್ತಿದ್ದ. ಆಕೆ ಕೈಯಿಂದ ನೀರು ತರಿಸಿಕೊಂಡು ಕುಡಿದು "ನಿನ್ನ ಅಮ್ಮ ನನಗೆ ತಂಗಿ ಆಗಬೇಕು. ಎಷ್ಟು ಚಂದ ಇದ್ದಿಯೇ ನನ್ನ ಸೊಸೆ....' ಎಂದು ಮುದ್ದಿಸುತ್ತಲೇ ಕೆನ್ನೆ, ಎದೆ ಸವರುತ್ತಿದ್ದ ತಿಮ್ಮಜ್ಜ! ಇದನ್ನು ನೋಡಿದ ನಮಗಿಂಥ ದೊಡ್ಡ ಹುಡುಗರು ಪುಳಕಿತರಾಗುವ ಜೊತೆಗೆ ತಿಮ್ಮಜ್ಜನ ಬಗ್ಗೆ ಅಸೂಯೆ ಪಡುತ್ತಿದ್ದರು.

ಈಗಲೂ ಅಪರೂಪಕ್ಕೆ ರತ್ನ ಪಾರಿನ್ನಿಂದ ಊರಿಗೆ ಬರುತ್ತಾಳೆ. ಈಗ ಅವಳನ್ನು ನೋಡಿದರೂ ಪ್ರಾಯದಲ್ಲಿ ಅವಳ ಸೌಂದರ್ಯ ಅದೆಷ್ಟು ಇತ್ತು ಎಂಬುದು ಗಣನೆಗೆ ಸಿಗುತ್ತದೆ. ಈಗಲೂ ಅವಳನ್ನು ದೃಷ್ಠಿಯಿಟ್ಟು ನೋಡಿದರೆ ಅವಳ ಕಣ್ಣುಗಳಲ್ಲಿ ಭಾವನೆಗಳ ಕಾಡನ್ನೇ ಕಂಡಂತೆ ಆಗುತ್ತದೆ.ದಿನಾಲೂ ಹೈಸ್ಕೂಲಿಗೆ ಐದು ಮೈಲಿ ದಾರಿ ಸವೆಸುವುದು ನಡೆದಂತೆ ಅವಳ ದೇಹವು ಆಕಾರ ಪಡೆಯುತ್ತ ಹೋಯಿತು. ಆಗ ಸಲುಗೆಯಿಂದ ರತ್ನಿ ಎನ್ನುತ್ತಿದ್ದ ಹುಡುಗರು ಕೂಡ ಮರ್ಯಾದೆಗೋ, ಅವಳ ಸೌಂದರ್ಯದ ಮೇಲಿನ ಗೌರವಕ್ಕೋ ರತ್ನ ಎಂದು ಕರೆಯತೊಡಗಿದರು. ಕಿರಿಯರಾದ ನಾವಂತೂ ರತ್ನಕ್ಕ ಎಂದು ಕರೆದು ಆಕೆಯಿಂದ ಅಆಇಈ... ಹೇಳಿಸಿಕೊಳ್ಳಲು ಮೇಲಾಟ ನಡೆಸುತ್ತಿದ್ದೆವು. ಸೂರಿ ಈಗಿನಂತೆ ನನಗೆ ಆಗಲೂ ಸ್ನೇಹಿತ. ರತ್ನಕ್ಕ ಹೆಚ್ಚು ಓದುತ್ತಿದ್ದಾಳೆ ಎಂಬ ಕಾರಣದಿಂದ "ಅವಳಿಂದ ಪಾಠ ಹೇಳಿಸ್ಕೋ ಹೋಗು...' ಎಂದು ನನ್ನ ಅಪ್ಪ-ಅಮ್ಮ ಸಂಜೆ ವೇಳೆ ಅವರ ಮನೆಗೆ ಕಳುಹಿಸುತ್ತಿದ್ದರು. ಎಂಟು, ಒಂಬತ್ತನೇ ತರಗತಿ ಪಾಸು ಮಾಡಿದ ರತ್ನ, ಎಸ್ಸೆಸ್ಸೆಲ್ಸಿಗೆ ಬರುವ ಹೊತ್ತಿಗೆ ಅದೊಂದು ಸಖೇದಾಶ್ಚರ್ಯ ವಿಷಯವಾಗಿಯೇ ನಮ್ಮೂರಿನಲ್ಲಿ ಹೊರಹೊಮ್ಮಿತು. ರಂಗಣ್ಣನ ಮಗಳು ಎಸೆಲ್ಸಿಯಂತೆ ಎಂದು ಹಿರಿತಲೆಗಳು ಮಾತಾಡಿಕೊಂಡಿದ್ದು ನಮ್ಮ ಕಿವಿಗೂ ಬಿದ್ದು, ಓದಿದರೆ ರತ್ನಕ್ಕನಂತೆ ಓದಬೇಕೆಂದು ಆ ಕ್ಷಣಕ್ಕೆ ತೀರ್ಮಾನಿಸುತ್ತಿದ್ದೆವು. ಜನರ ಅಂಥ ಕುತೂಹಲದ ಮಾತಿಗೂ ಕಾರಣವಿತ್ತು. ರತ್ನ ಹತ್ತನೇ ತರಗತಿಗೆ ಬರುವ ಹೊತ್ತಿಗೆ ನಮ್ಮೂರಿನಲ್ಲಿ ಅದನ್ನು ದಾಟಿದವರು ಒಬ್ಬರೋ ಇಬ್ಬರೋ ಮಾತ್ರ ಇದ್ದರು. ಅವರು ಕೂಡ ನಮ್ಮ ಊರಿನಲ್ಲಿ ಇರದೆ ಅವರವರ ನೆಂಟರ ಊರಿನಲ್ಲಿ ಓದುತ್ತಿದ್ದಾರೆ ಎಂಬ ಸುದ್ದಿ ಇದ್ದವು.
***
ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಇನ್ನು ಮುಂದೆ ಸಂಜೆ ಹೊತ್ತು ರತ್ನಕ್ಕ ನಮಗೆ ಪಾಠ ಹೇಳಿಕೊಡುವುದಿಲ್ಲ ಎಂದು ನಮಗೆ ಗೊತ್ತಾಗಿಹೋಯಿತು. ಆಗಿದ್ದೇನೆಂದರೆ ಎಸಲ್ಸಿ ಪಾಸ್ ಮಾಡುವುದೆಂದರೆ ಅದೊಂದು ರೀತಿ ಶಿಕ್ಷಣ ಕ್ಷೇತ್ರದಲ್ಲಿ ಗಂಡಾಂತರ ಗೆದ್ದಂತೆ ಎಂಬ ವಾತಾವರಣ ನಮ್ಮಲ್ಲಿತ್ತು. ನಮ್ಮ ಸುತ್ತಿನಲ್ಲಿ ಆ ಕಾಲಕ್ಕೆ ಎಸಲ್ಸಿ ಪಾಸು ಮಾಡಿದವನು ಯುದ್ದ ಗೆದ್ದ ಯೋಧನಂತೆ ಬೀಗುತ್ತಾ ಓಡಾಡುತ್ತಿದ್ದರು. ಆ ಸುದ್ದಿ ಪತ್ರಿಕೆ, ಟಿವಿ ಇರದಿದ್ದ ಆ ಕಾಲದಲ್ಲಿ ಅದ್ಹೇಗೋ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ತಲುಪಿಬಿಟ್ಟಿರುತ್ತಿತ್ತು. ಈ ಬಾರಿ ರತ್ನಕ್ಕನೂ ಎಸಲ್ಸಿ ಪರೀಕ್ಷೆ ಬರೆಯಬೇಕಿದ್ದರಿಂದ ಆಕೆಯ ಮೇಸ್ಟ್ರು "ದಿನ ಐದು ಮೈಲಿ ನಡೆದು ಓದಿದರೆ ಅದು ಪಾಸಾಗುವುದಿಲ್ಲ. ಪರೀಕ್ಷೆ ಹತ್ತಿರಾಗುವ ಮೂರು ತಿಂಗಳು ರಂಗನಹಳ್ಳಿಯಲ್ಲೇ ರೂಮು ಮಾಡಿಕೊಂಡು ಓದಬೇಕು' ಎಂದು ಸೂಚಿಸಿದ್ದರು. ಇದಕ್ಕೆ ರತ್ನಕ್ಕನ ಅಮ್ಮ ರಾಮಕ್ಕ, ಅಪ್ಪ ರಂಗಣ್ಣ ಮೊದಲಿಗೆ ಒಪ್ಪಿರಲಿಲ್ಲ. ಆಗ ಹುಡುಗಿ ಸೀದಾ ಹೋಗಿ "ನಮ್ಮ ಮನೆಯಲ್ಲಿ ರೂಮು ಮಾಡಿಕೊಟ್ಟು ಓದಿಸಲು ಒಪ್ಪುವುದಿಲ್ಲ. ಊರಿನಿಂದ ಓಡಾಡಿಕೊಂಡೇ ಓದುತ್ತೇನೆ' ಎಂದು ತಿಳಿಸಿದ್ದಳು. ಆದರೆ ಈ ಬಾರಿ ಇರುವ ಹತ್ತನೇ ತರಗತಿ ಹುಡುಗ-ಹುಡುಗಿಯರಲ್ಲಿ ಸ್ವಲ್ಪ ಚೆನ್ನಾಗಿ ಓದುವ ವಿದ್ಯಾರ್ಥಿಯೆಂದರೆ ರತ್ನ ಮಾತ್ರ. ಕೊನೆಯ ಮೂರು ತಿಂಗಳ ಸ್ಪೆಷಲ್ ಕ್ಲಾಸ್ ಅವಳಿಗೂ ಸಿಕ್ಕರೆ ಪಸ್ಟ್ಕ್ಲಾಸ್ ಬರಬಹುದು ಎಂಬ ನಂಬಿಕೆ ಮೇಸ್ಟ್ರುಗಳಿಗೆ ಇತ್ತು. ಆ ಹೈಸ್ಕೂಲ್ ಪ್ರಾರಂಭವಾಗಿ ಎಂಟು ವರ್ಷ ಕಳೆದಿದ್ದರೂ ಅಲ್ಲಿ ಒಮ್ಮೆಯೂ ಪಸ್ಟ್ ಕ್ಲಾಸ್ ಬಂದಿರಲಿಲ್ಲ. ರತ್ನಳಿಂದ ಅಂಥದ್ದೊಂದು ದಾಖಲೆ ಆಗುವುದಾದರೆ ಆಗಿಯೇ ಬಿಡಲಿ ಎಂಬ ಉಮೇದು ಮೇಸ್ಟ್ರುಗಳಿಗೆ ಇತ್ತು.

"ನಮ್ಮ ಮನೆಯಲ್ಲಿ ರೂಮು ಮಾಡಿಕೊಟ್ಟು ಓದಿಸುವುದಿಲ್ಲ' ಎಂಬ ರತ್ನಳ ಮಾತಿನಿಂದ ಹೆಡ್ಮಾಸ್ಟರ್ ಹೊನ್ನೇಗೌಡರು ನಿರಾಶರಾಗಲಿಲ್ಲ. ದೈಹಿಕ ಶಿಕ್ಷಕ ನಾರಾಯಣಪ್ಪನನ್ನು ಕರೆದರು. ಇಂದೇ ರತ್ನಳ ಜೊತೆ ಅವರ ಮನೆಗೆ ಹೋಗಿ, ಹೆಣ್ಣು ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯ ಎಂಬುದನ್ನು ಮನದಟ್ಟುಮಾಡಿಕೊಡಿ. ಹೇಗಾದರೂ ಅವರ ತಂದೆ-ತಾಯಿಗೆ ಒಪ್ಪಿಸಿ ಕೊನೆಯ ಮೂರು ತಿಂಗಳ ಸ್ಪೆಷಲ್ ಕ್ಲಾಸ್ಗೆ ಕರೆದುಕೊಂಡು ಬನ್ನಿ ಎಂದಪ್ಪಣೆ ಮಾಡಿದರು.

ನಾರಾಯಣಪ್ಪ ಹೈಸ್ಕೂಲ್ ಇರುವ ರಂಗನಹಳ್ಳಿಯವನು. ರತ್ನಳ ಜಾತಿಗೆ ಸೇರಿದವನು. ಸುತ್ತಮುತ್ತಲಿನ ಅನೇಕರು ನಾರಾಯಣಪ್ಪನನ್ನು ನೋಡಿ ಪರಿಚಯ ಇದ್ದವರೇ ಆಗಿದ್ದರು. ಗುಬ್ಬಿಯ ವಿದ್ಯಾಸಂಸ್ಥೆಯೊಂದು ರಂಗನಹಳ್ಳಿಯಲ್ಲಿ ಹೈಸ್ಕೂಲ್ ತೆರೆಯುವಾಗ ಸ್ಥಳೀಯರೊಬ್ಬರು ಇರಲಿ ಎಂಬ ಕಾರಣಕ್ಕೆ ನಾರಾಯಣಪ್ಪನಿಗೆ ದೈಹಿಕ ಶಿಕ್ಷಕ ಉದ್ಯೋಗ ನೀಡಿದ್ದರು. ನಾರಾಯಣಪ್ಪನಿಗೂ ರತ್ನ ತನ್ನ ಜಾತಿಯವಳು ಎಂಬ ಕಾರಣಕ್ಕೆ ವಿಶೇಷ ಆಸಕ್ತಿ ಇತ್ತು. ಅಲ್ಲದೆ ಒಂದೆರಡು ಬಾರಿ ಅವರಪ್ಪ ರಂಗಣ್ಣನನ್ನು ನೋಡಿದ ನೆನಪು ಇತ್ತು. ಆದ್ದರಿಂದ ಅವರ ಮನೆಯಲ್ಲಿ ಎಲ್ಲರನ್ನು ಒಪ್ಪಿಸಿ ರತ್ನಳನ್ನು ಸ್ಪೆಷಲ್ ಕ್ಲಾಸ್ಗೆ ಕರೆದುಕೊಂಡು ಬರುತ್ತೇನೆ ಎಂಬ ನಂಬಿಕೆ ನಾರಾಯಣಪ್ಪನದಾಗಿತ್ತು. ಅಂದು ಶಾಲೆ ಬಿಟ್ಟ ಕೂಡಲೇ ರತ್ನ ಹಾಗೂ ಇನ್ನಿಬ್ಬರು ವಿದ್ಯಾರ್ಥಿಗಳ ಜೊತೆ ನಾರಾಯಣಪ್ಪನು ನಡೆದೇ ಗಿಡುಗನಹಳ್ಳಿ ತಲುಪಿದ್ದರು.

ಮೇಸ್ಟ್ರು ನಾರಾಯಣಪ್ಪನ ಜೊತೆ ರತ್ನ ಮನೆಗೆ ಬರುವ ಹೊತ್ತಿಗಾಗಲೇ ಹೊಲಗಳಿಗೆ ಹೋಗಿದ್ದ ರಂಗಣ್ಣ-ರಾಮಕ್ಕ ಮನೆಗೆ ಬಂದಿದ್ದರು. ತಮ್ಮ ಮಗಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿ ಮೇಸ್ಟ್ರೊಬ್ಬರು ಮನೆಗೆ ಬಂದಿದ್ದು ಅವರೆಲ್ಲರಲ್ಲಿಯೂ ವಿಶೇಷ ಅಭಿಮಾನವನ್ನೇ ಮೂಡಿಸಿತು. ರತ್ನ ಆಟ-ಪಾಠದಲ್ಲಿ ಎಷ್ಟು ಚೂಟಿ ಎಂಬುದನ್ನು ನಾರಾಯಣಪ್ಪ ಅಗತ್ಯಕ್ಕಿಂತಲೂ ಹೆಚ್ಚು ಪೀಠಿಕೆ ಹಾಕಿ ವಿವರಿಸಿದರು. ಕೊನೆಗೆ ಪರೀಕ್ಷೆ ಹತ್ತಿರವಾಗುವ ಮೂರು ತಿಂಗಳು ರಂಗನಹಳ್ಳಿಯಲ್ಲೇ ಬಿಡುವಂತೆ ಕೋರಿಕೆ ಇಟ್ಟರು. ಈ ಮಧ್ಯೆ ರಾಮಕ್ಕ ಎಂದಿನಂತೆ ಎಲ್ಲದಕ್ಕೂ ಆಗಾಗ್ಗೆ ಬಾಯಿ ಹಾಕುತ್ತ "ಅಯ್ಯೋ ಹೆಣ್ಣು ಮಕ್ಕಳು ಎಷ್ಟು ಓದಿದರೂ ಮುಸುರೆ ತಿಕ್ಕುವುದು ತಪ್ಪುವುದಿಲ್ಲ' ಎಂಬ ಹಳೇ ಮಾತುಗಳನ್ನೆಲ್ಲಾ ಆಡಿದ್ದರು. ಇದಕ್ಕೆ ನಾರಾಯಣಪ್ಪ ಕೂಡ ಮಾತಿನಲ್ಲಿ ನಾನೇನೂ ಕಡಿಮೆ ಇಲ್ಲ ಎಂಬಂತೆ ಎಲ್ಲೋ ಓದಿಕೊಂಡು ಬಂದಿದ್ದ" ಹೇಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ನುಡಿಮುತ್ತು ಉದುರಿಸಿದ್ದರು. ಈ ನಡುವೆ ಅಗತ್ಯಕ್ಕಿಂತಲೂ ಒಂದು ಮಾತನ್ನು ಹೆಚ್ಚು ಆಡದ ರಂಗಣ್ಣನ ಚಿಂತೆ ಬೇರೆಯೇ ಇತ್ತು. ಮಗಳನ್ನು ಅಲ್ಲಿ ರೂಮು ಮಾಡಿ ಓದಿಸಿದರೆ ಎಷ್ಟು ಖರ್ಚು ಬರುತ್ತದೋ? ಅಷ್ಟೊಂದು ಹಣ ಹೊಂದಿಸುವುದು ನನ್ನ ಬಡತನದ ಬಾಳಿಗೆ ಆದೀತೆ ಎಂಬುದು ರಂಗಣ್ಣನ ಚಿಂತೆ. ಹಾಗೇ ನೋಡಿದರೆ ಆಗ ಶಿಕ್ಷಣಕ್ಕೆ ದುಬಾರಿ ಖರ್ಚು ಇರುತ್ತಿರಲಿಲ್ಲ. ಆದರೆ ನಮ್ಮ ಹಳ್ಳಿಕಡೆ ಆಗ ವಿದ್ಯಾಭ್ಯಾಸವೆಂದರೆ ಬಡವರ ಮಾತಲ್ಲ ಎಂಬ ನಂಬಿಕೆ ಬಲವಾಗಿ ನೆಲೆಸಿತ್ತು. ರಂಗಪ್ಪನ ಮುಖದ ಗೆರೆಯಲ್ಲೇ ಎಲ್ಲವನ್ನು ಅರ್ಥಮಾಡಿಕೊಂಡ ನಾರಾಯಣಪ್ಪ "ನಿಮ್ಮ ಅಭ್ಯಂತರ ಇಲ್ಲವೆಂದರೆ ನಮ್ಮ ಮನೆಯಲ್ಲೇ ಇದ್ದುಕೊಂಡು ಶಾಲೆಗೆ ಹೋಗಲಿ... ನಮ್ಮ ಮನೆಯಲ್ಲೂ ನನ್ನ ಹೆಂಡತಿ, ತಾಯಿ ಬಿಟ್ಟರೆ ಯಾರೂ ಇಲ್ಲ' ಎಂದು ಆಯ್ಕೆಯನ್ನು ಅವರಿಗೆ ಬಿಟ್ಟರು. ಮೇಸ್ಟ್ರು ಇಷ್ಟೊಂದು ಪ್ರೀತಿ, ಅಭಿಮಾನ ತೋರಿದ್ದು ಮನೆಯವರಿಗೆಲ್ಲರಿಗೂ ಮಗಳ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸಿತು. ಅಲ್ಲದೆ ನಾರಾಯಣಪ್ಪನ ಮೇಲಿನ ಅಭಿಮಾನವೂ ಇಮ್ಮಡಿಯಾಯಿತು. ಆದರೂ ಏಕಾಏಕಿ ಹುಂ ಎಂದು ಬಿಡಲು ರಂಗಣ್ಣ-ರಾಮಕ್ಕನಿಗೆ ಇಷ್ಟವಾಗಲಿಲ್ಲ. ಮಾತು ಬೇರೆಡೆ ಹೊರಳಿಸಿದರು.

ಮನೆಯವರಿಗೆಲ್ಲಾ ಮೇಸ್ಟ್ರು ನಮ್ಮ ಜಾತಿಯವರೇ ಎಂಬುದು ಗೊತ್ತಿದ್ದ ವಿಷಯವೇ ಆಗಿತ್ತು. ಮತ್ತಷ್ಟು ಹತ್ತಿರವಾಗಲು ಬಹುತೇಕ ನಮ್ಮ ಭಾಗದ ಒಕ್ಕಲಿಗರು ಕೇಳುವ ಹಾಗೆ "ನಿಮ್ಮದು ಯಾವ ಕುಲ ?' ಎಂದು ವಿಚಾರಿಸಿದರು. ನಾರಾಯಣಪ್ಪ "ಜಲ್ದೇನರು'ಎಂದ. "ನಾವು ಅಳುನವರು. ನೀವು ಖಾಸ ನೆಂಟರು ಆಗಬೇಕು. ನಿಮ್ಮ ತಾಯಿ ಕುಲ ಯಾವುದು?' ಎಂದ ರಂಗಣ್ಣ. ಇದಕ್ಕೆ ನಾರಾಯಣಪ್ಪ "ಅಳುನವರು' ಎಂದಿದ್ದೇ ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ನಂತರ ಹೆಣ್ಣುಗಳನ್ನು ಎಲ್ಲಿಗೆ ಕೊಟ್ಟಿದ್ದೀರಿ, ಎಲ್ಲಿಂದ ತಂದಿದ್ದೀರಿ ಎಂಬುದನ್ನೆಲ್ಲಾ ವಿಚಾರಿಸಿದ ಮೇಲೆ ನಾವು ನೀವು ಖಾಸ ನೆಂಟರೇ ಸೈ ಎಂಬ ತೀರ್ಮಾನಕ್ಕೆ ಪರಸ್ಪರರು ಬಂದರು. ಕೊನೆಗೆ ನಾರಾಯಣಪ್ಪ ಹೊರಡಲು ಇಚ್ಚಿಸಿ "ಮುಂದಿನ ಸೋಮವಾರದಿಂದ ರತ್ನ ನಮ್ಮ ಮನೆಯಲ್ಲೇ ಇರಲಿ. ಅಂದಿನಿಂದಲೇ ಸ್ಪೆಷಲ್ ತರಗತಿ ನಡೆಯುತ್ತವೆ' ಎಂದು ಎದ್ದರು. ಆಗ ರಂಗಣ್ಣನ ಮಾತಿಗೂ ಮುಂಚೆಯೇ ರಾಮಕ್ಕ "ನೀವು ಇಷ್ಟು ಹೇಳಿದ ಮೇಲೆ ನಮ್ಮದು ಯಾತರದ ಮಾತು? ದೈವದ ಇಚ್ಚಯಂತೆ ಆಗಲಿ' ಎಂದು ಒಪ್ಪಿಗೆ ಕೊಟ್ಟರು. ನಾರಾಯಣಪ್ಪ ಬಂದ ಕೆಲಸ ಆದ ಖುಷಿಯಲ್ಲಿ ಹೊರಡಲು ಎದ್ದರು. ಆಗ ರಂಗಣ್ಣ" ಏನ್ ನೆಂಟ್ರೇ, ಅಪರೂಪಕ್ಕೆ ಮನೆಗೆ ಬಂದಿದ್ದೀರಿ, ಊಟ ಮಾಡ್ಕೊಂಡು ಹೋಗಿ...' ಎಂದರು. ರಾಮಕ್ಕ "ಹೌದಲ್ವೆ, ನಿನ್ನೆಯೇ ಒಂದು ಕೋಳಿ ಕೋಯ್ಯಬೇಕು ಅಂತಿದ್ವಿ. ಮೇಸ್ಟ್ರು ಬಂದಿದ್ದಾರೆ. ಸುನಂದ ಒಂದು ಕೋಳಿ ಹಿಡ್ಕೋ ಹೋಗು...' ಎಂದು ಹೇಳಿ ಸುನಂದ ಕೋಳಿ ಗೂಡಿನ ಕಡೆಗೆ ಹೋಗುವ ಮುಂಚೆಯೇ ರಾಮಕ್ಕನೇ ಕೋಳಿಯನ್ನು ಕೊರ್ರ...ಕೊರ್ರಾ...ಅನ್ನಿಸತೊಡಗಿದರು. ನಾರಾಯಣಪ್ಪ "ಇಲ್ಲ, ಹೋಗ್ಬೇಕು' ಎಂದರೂ ಕೂಡ ಇರುವ ಇಚ್ಚೆಯನ್ನು ಆ ಮಾತೇ ವ್ಯಕ್ತಪಡಿಸುತ್ತಿತ್ತು.
***
ರತ್ನ ಎಸ್ಸೆಸ್ಸೆಲ್ಸಿಯನ್ನು ಸೆಂಕೆಂಡ್ ಕ್ಲಾಸ್ನಲ್ಲಿ ಪಾಸ್ ಮಾಡಿದಳು. ಆದರೆ ಆ ಖುಷಿ ಅನುಭವಿಸುವ ಸ್ಥಿತಿಯಲ್ಲಿ ರತ್ನ ಇರಲಿಲ್ಲ. ಆಕೆ ಆಗಲೇ ಮೂರು ತಿಂಗಳ ಗರ್ಭಿಣಿಯಾಗಿದ್ದಳು! ದೈಹಿಕ ಶಿಕ್ಷಕ ನಾರಾಯಣಪ್ಪನ ಪಾಪದ ಕೂಸು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಆಗತಾನೇ ಅಂಗಾಗಗಳು ದುಂಡಗಾಗುತ್ತಿದ್ದ ರತ್ನಳನ್ನು ನಾರಾಯಣಪ್ಪ ತನ್ನ ಮನೆಯಲ್ಲಿ ತನ್ನಿಚ್ಚೆಯಂತೆ ಬಳಸಿಕೊಂಡಿದ್ದ. ಜಾಗೃತಿವಹಿಸದೇ ವಿಷಯ ರಾಮಕ್ಕನಿಗೂ ಗೊತ್ತಾಯಿತು. ಆಗ ರಾಮಕ್ಕ ಅಕ್ಷರಶಃ ರಾಕ್ಷಸಿಯಾದಳು. ತನ್ನ ಮಗಳ ಬಾಯಲ್ಲಿ ರಕ್ತ ಬರುವಂತೆ ಹೊಡೆಯುತ್ತಲೇ ಐದು ಮೈಲಿ ಎಳೆದುಕೊಂಡು ಬಂದು ಮಗಳನ್ನು ಮೇಸ್ಟ್ರು ನಾರಾಯಣಪ್ಪನ ಮನೆ ಬಾಗಿಲಿಗೆ ಎಸೆದು ಹೋಗಿದ್ದಳು. ನೀನು ಸತ್ತರೂ ಇಲ್ಲೇ ಸಾಯಿ, ಬದುಕಿದರೂ ಇಲ್ಲೇ ಬದುಕು. ನೀನು ನನ್ನ ಮಗಳಲ್ಲ. ನಮ್ಮ ಮನೆತನದ ತಲೆ ತಗ್ಗಿಸಿದ್ದೀಯಾ. ಮೇಸ್ಟ್ರು ಮೀಸೆ ಇದಾವೆ ಅಂತ ತಪ್ಪು ಮಾಡಿದ್ದಾನೆ. ನಿನ್ನೇ ಕಟ್ಕಳಲಿ ಎಂದು ದೂಳು ತೂರಿ ಹೋಗಿದ್ದಳು.

ವಿಷಯ ಕ್ಷಣಾರ್ಧದಲ್ಲಿ ಸುತ್ತಲಿನ ಹಳ್ಳಿಗಳಲೆಲ್ಲಾ ವ್ಯಾಪಿಸಿತು. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಜನ ಮರುಚಿಂತೆನೆ ಮಾಡತೊಡಗಿದರು. ನಾರಾಯಣಪ್ಪನಂತಹ ಮೇಸ್ಟ್ರೀಗೆ ತಕ್ಕಶಾಸ್ತ್ರೀಯಾಗಬೇಕೆಂದುಕೊಂಡರು. ಆದರೆ ನಾರಾಯಣಪ್ಪ ಸರಕಾರಿ ಸಂಬಳ ಪಡೆದು, ಜಮೀನಿನ ಅದಾಯವೂ ಹೆಚ್ಚಾಗಿ ಉಳ್ಳವರ ಜಾತಿಗೆ ಸೇರಿದ್ದ. ಸುತ್ತಲಿನ ಹದಿನಾರು ಹಳ್ಳಿಗಳ ಮುಖಂಡರ ನ್ಯಾಯ ಪಂಚಾಯಿತಿ ನಡೆಯಿತು. ಬಹುತೇಕ ಮುಖಂಡರು ತಮ್ಮ ಜಾತಿಯ ಮೇಸ್ಟ್ರೀಗೆ ಶಿಕ್ಷೆ ಆಗುವುದು ಬೇಡ. ಏನೋ ಮನುಷ್ಯ ಸಹಜ ತಪ್ಪು ಮಾಡಿದ್ದಾನೆ. ದಂಡ ಕಟ್ಟಿಸಿ ಅವರ ಮಗಳನ್ನು ಅವರ ಮನೆಗೆ ಬಿಡಿಸೋಣ ಎಂಬ ತೀರ್ಮಾನಕ್ಕೆ ಬಂದರು. ಆದರೆ ಈ ಮಾತನ್ನು ರಾಮಕ್ಕನ ಎದುರು ಹೇಳಿದ್ದೇ ಆಕೆ ಕೆರಳಿ ಕೆಂಡವಾದಳು. ನಿಮ್ಮ ಮನೆಯ ಹೆಂಗಸರನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಬಿಡಿ, ನಾನು ಮಾಡುವುದನ್ನೆಲ್ಲಾ ಮಾಡಿ ದಂಡ ಕಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದಳು. ನ್ಯಾಯ ಹೇಳಲು ಬಂದವರು ತಲೆ ತಗ್ಗಿಸಿದರೆ ಹೊರತು, ರಾಮಕ್ಕ ತನ್ನ ಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಹೆಣ್ಣು ಮಗುವಿನ ಭವಿಷ್ಯ ಹಾಳಾಗುವುದು ಬೇಡ. ಹೇಗೂ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾಳೆ. ಮುಂದಕ್ಕೆ ಮೇಸ್ಟ್ರು ನಾರಾಯಣಪ್ಪನೇ ಓದಿಸಬೇಕು. ಆಕೆ ಒಪ್ಪಿದರೆ ಮದುವೆ ಕೂಡ ಮಾಡಿಕೊಳ್ಳಬೇಕು ಎಂದು ನ್ಯಾಯ ಬಗೆಹರಿಸಿದರು. ಆದರೆ ರಾಮಕ್ಕ ಮಾತ್ರ ಈ ಯಾವ ವಿಷಯವೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ "ನನ್ನ ಮಗಳು ಸತ್ತು ಹೋದಳು' ಎಂದು ದೂಳು ತೂರಿ ಬಾಗಿಲು ಹಾಕಿಕೊಂಡಳು.

ಈ ಎಲ್ಲ ವಿವಾದ, ಅವಮಾನದಿಂದ ಬಾಲಕ ಸೂರಿ ಅದೆಷ್ಟು ನಲುಗಿ ಹೋದನೆಂದರೆ, ಆತ ಈಗ ಹೇಳುತ್ತಿರುವ ನೂರಾರು ಕಾಮ ಕತೆಗಳ ಬೀಜಗಳೆಲ್ಲಾ ಅವನೊಳಗೆ ಆಗಲೇ ಮೊಳಕೆ ಹೊಡೆಯಲು ಪ್ರಾರಂಭಿಸಿದವು ಎಂದು ಕಾಣುತ್ತದೆ. ಈ ಅವಮಾನದಿಂದಾಗಿಯೇ ಇಂದು ಎಂಥ ಹೆಂಗಸು-ಗಂಡಸಿನ ಬಗ್ಗೆಯಾದರೂ ಅನೈತಿಕ ಸಂಬಂಧದ ಕತೆಯನ್ನು ಯಾವ ಮುಲಾಜಿಲ್ಲದೆ ಹೇಳಿಬಿಡುತ್ತಾನೆ. ಇದು ಆತ ತೀರಿಸಿಕೊಳ್ಳುತ್ತಿರುವ ಪ್ರತಿಕಾರವೋ ಅಥವಾ ಸಮಾಜ ಇರುವುದೇ ಹೀಗೋ ಎಂಬುದು ಸೂರಿಯ ಕೇಳುಗರಿಗಂತೂ ಅರ್ಥವಾಗುವುದಿಲ್ಲ. ಇರಲಿ, ರತ್ನಳನ್ನು ಮೇಸ್ಟ್ರು ನಾರಾಯಣಪ್ಪನೇ ತುಮಕೂರಿನಲ್ಲಿ ನಸರ್ಿಂಗ್ ಕಾಲೇಜಿಗೆ ಸೇರಿಸಿದ. ಹಾಸ್ಟೆಲ್ನಲ್ಲಿ ಬಿಟ್ಟ. ರತ್ನ ತುಮಕೂರು ಸಿಟಿಯಲ್ಲಿ ಅವಮಾನದಿಂದ ನೊಂದುಕೊಳ್ಳುವ ಬದಲು ಗಟ್ಟಿಯಾದಳು. ಇದು ಸಹಜವೆಂದು ಭಾವಿಸಿದಳು. ನಾರಾಯಣಪ್ಪ ಅಗತ್ಯಕ್ಕಿಂತಲೂ ಹೆಚ್ಚು ಹಾಸ್ಟೆಲ್ಗೆ ಬರುವುದನ್ನು ತಡೆದಳು. ನರ್ಸಿಂಗ್ ಕಾಲೇಜಿನ ಪಕ್ಕದಲ್ಲೇ ಇದ್ದ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಹರಿಯಾಣದ ವಿನಯ್ ಚೌತಾಲನ ಮನಗೆದ್ದಳು. ಆತ ಈಕೆಯನ್ನು ಪ್ರೀತಿಸಿದ. ಒಪ್ಪಿ ಮದುವೆಯಾದ.

ಹಳೇ ಕತೆಯನ್ನೆಲ್ಲಾ ಚೌತಾಲನಿಗೆ ರತ್ನ ಹೇಳಿದಳೇ ಇಲ್ಲವೇ ಎಂಬುದು ಇಲ್ಲಿ ಅಪ್ರಸ್ತುತ. ಅವರಿಬ್ಬರು ಅಮೇರಿಕಾ ಸೇರಿ 10ವರ್ಷ ಕಳೆದರೂ ನಮ್ಮೂರಿಗೆ ರತ್ನ ಎಲ್ಲಿದ್ದಾಳೆ ಎಂಬ ಸುದ್ದಿಯೇ ಗೊತ್ತಿರಲಿಲ್ಲ. ಎಲ್ಲವನ್ನು ಜನ ಮರೆತಿದ್ದರು. ರಾಮಕ್ಕನ ಕುಟುಂಬವಂತೂ ಅದನ್ನೆಲ್ಲಾ ನೆನಪು ಮಾಡಿಕೊಳ್ಳಲು ಸಮಯವಿಲ್ಲದಂತೆ ಬಡತನದಲ್ಲಿ ಬೇಯುತ್ತಿತ್ತು. ಉಳಿದ ಐದು ಹೆಣ್ಣು ಮಕ್ಕಳನ್ನು ರಾಮಕ್ಕ-ರಂಗಣ್ಣ ಮದುವೆ ಮಾಡುವ ಹೊತ್ತಿಗೆ ಹೈರಾಣಾಗಿದ್ದರು. ಈ ನಡುವೆ ಅಪ್ಪ ಸತ್ತ ಸುದ್ದಿ ರತ್ನಳಿಗೆ 2ವರ್ಷದಷ್ಟು ತಡವಾಗಿ ತಿಳಿದು ಅಮೇರಿಕಾದಿಂದ ಊರಿಗೆ ಬಂದಳು. ಚೌತಾಲ ಜೊತೆಗಿದ್ದ. ಒಂದು ಮಗು ಕೂಡ ಜೊತೆಗಿತ್ತು. ಅದಕ್ಕೆ ದೇವಿಲಾಲ ಎಂದು ಹೆಸರಿಟ್ಟಿರುವುದಾಗಿ ರತ್ನ ಹೇಳಿದಳು. ಅಪ್ಪನ ಹೆಸರಿನಲ್ಲಿ ಶಾಲಾ ಕಟ್ಟಡವೊಂದನ್ನು ಕಟ್ಟಿಸುವಂತೆ ನಮ್ಮೂರ ಮೇಸ್ಟ್ರಿಗೆ ಹೇಳಿದ ರತ್ನ, ಅದೆಷ್ಟೋ ಚೆಕ್ನ್ನು ಸ್ಥಳದಲ್ಲೇ ಬರೆದುಕೊಟ್ಟಳು. ಅಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಸೂರಿ ಅಕ್ಕನನ್ನು ತಬ್ಬಿಕೊಂಡು ಒಂದೇ ಸಮನೇ ಅತ್ತುಬಿಟ್ಟ. ರತ್ನ ತನ್ನ ಮನೆಗೆ ಹೋದಳು. ರಾಮಕ್ಕ ಏನೂ ಮಾತಾಡಲಿಲ್ಲ. ದೇವಿಲಾಲನನ್ನು ಎತ್ತಿಕೊಂಡು ಮುದ್ದಾಡಿದ್ದಳು.

Friday, October 24, 2008

ಸಾಹಿತ್ಯ ತೇರಾಗಿ.. ಶಿಲ್ಪಕಲೆ ನೂರಾಗಿ...

ಸೋಮನಾಥಪುರ ದೇವಾಲಯದ ನೂರಾರು ಚಿತ್ರಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇನೆ. ಅವುಗಳಲ್ಲಿ ಕೆಲವು...























Tuesday, October 21, 2008

ಕಲ್ಲರಳಿ ಕಾಮೋತ್ಸವ

ಮೊನ್ನೆ ಭಾನುವಾರ ಬೆಳಗಿನ ಜಾವ ನಾಲ್ಕಕ್ಕೆಲ್ಲ ಕ್ಯಾಮೆರಾ ಏರಿಸಿಕೊಂಡು ಯಾರಿಗೂ ಹೇಳದೆ ಸೋಮನಾಥಪುರಕ್ಕೆ ಹೊರಟುಬಿಟ್ಟೆ. ಕಳೆದವಾರ ಬಿಡುಗಡೆಯಾದ ಷ. ಶಟ್ಟರ್ ಅವರ 'ಸೋಮನಾಥಪುರ' ಪುಸ್ತಕ ಓದಿ ತುಂಬಾ ಪ್ರಭಾವಿತನಾಗಿ ಮಾಡಿದ ಕೆಲಸವಿದು. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗುವ ಸಾಕಸ್ಟು ಬಸ್ಸುಗಳು ಮಳವಳ್ಳಿಯಲ್ಲಿ ನಿಲ್ಲಿಸುತ್ತವೆ. ಮಳವಳ್ಳಿಯಿಂದ ಬನ್ನೂರಿಗೆ 20 ಕಿ.ಮೀ ಪ್ರಯಾಣ. ಬನ್ನೂರಿನಿಂದ ಸೋಮನಾಥಪುರ 8 ಕಿಲೋಮೀಟರ್. ಆ ರಸ್ತೆಗಳಲ್ಲಿ ಸ್ವಲ್ಪ ಬಸ್ಸಿನ ಪ್ರಯಾಣ ಕಷ್ಟವಾದರೂ ಸಹಿಸಿಕೊಂಡು ಒಂಬತ್ತು ಗಂಟೆಗೆಲ್ಲ ಸೋಮನಾಥಪುರ ತಲುಪಿದ್ದೆ.


ಸೋಮನಾಥಪುರ ವಾಸ್ತು-ಶಿಲ್ಪಕಲೆಯಲ್ಲಿ ಆಸಕ್ತಿ ಇರುವವರಿಗಂತೂ ಸ್ವರ್ಗ. ಬೇಲೂರು ಹಳೇಬೀಡಿನಷ್ಟು ವಿಶಾಲವಲ್ಲದಿದ್ದರೂ ತ್ರಿಕೂಟಗಳಲ್ಲೇ ಇದರಷ್ಟು ಸೌಂದರ್ಯವಾದ ದೇವಾಲಯ ಕರ್ನಾಟಕದಲ್ಲಿ ಮತ್ತೊಂದಿಲ್ಲ. ಈಗಾಗಲೇ ಷ. ಶೆಟ್ಟರರ ಪುಸ್ತಕ ಪರಿಚಯಿಸುತ್ತ ಸೋಮನಾಥಪುರ ದೇವಾಲಯದ ಬಗ್ಗೆ ಮಾಹಿತಿ ಕೊಟ್ಟಿದ್ದರಿಂದ ಇಲ್ಲಿ ಅದರ ಇತಿಹಾಸ ಹೆಚ್ಚು ಹೇಳದೆ ನನಗೆ ಸೋಮನಾಥಪುರ ದೇವಾಲಯದಲ್ಲಿ ಆಕರ್ಷಿಸಿದ ಮಿಥನು ಶಿಲ್ಪಗಳ ಬಗ್ಗೆ ಶೆಟ್ಟರ್ ನೀಡಿರುವ ಮಾಹಿತಿಯನ್ನು ಮತ್ತು ಫೋಟೋಗಳನ್ನು ನಿಮಗೆ ನೀಡುತ್ತಿದ್ದೇನೆ.











ಭಾರತೀಯ ಗೃಹಸ್ಥನ ನಾಲ್ಕು ಪುರುಷಾರ್ಥಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಇವುಗಳಲ್ಲಿ ಯಾವುದಾದರೊಂದರ ಕೊರತೆ ಇದ್ದರೆ ಅಂಥವನ ಜೀವನವು ಅರ್ಪೂಣ ಅಥವಾ ಅಸಮರ್ಥ ಎಂಬ ನಿಯಮವಿದೆ. ಈ ಪರಂಪರೆಯಲ್ಲಿ 'ಕಾಮ' ಒಂದು ಕಲೆಯೂ ವಿಜ್ಞಾನವೂ ಎನಿಸಿರುವುದು. ನಮ್ಮ ಪುರಾತನ ಋಷಿಗಳೇ ಕಾಮಕಲೆಯನ್ನು ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದು. ಅವುಗಳಲ್ಲೆಲ್ಲ ಪ್ರಸಿದ್ಧವಾದ ಗ್ರಂಥವೆಂದರೆ ವಾತ್ಸಾಯನ ಮುನಿಯ 'ಕಾಮಸೂತ್ರ'. ಹಿಂದೂ ದೈವಗಳಲ್ಲಿ, ಪ್ರೇಮ-ಕಾಮದ ಅಧಿದೇವತೆಯಾದ ಕಾಮನಿಗೆ ಗೌರವಯುತ ಸ್ಥಾನವಿದೆ. ಅವನನ್ನು ಕಂದರ್ಪ, ಮದನ, ಮನ್ಮಥ ಎಂಬೆಲ್ಲ ಹೆಸರುಗಳಿಂದ ಗುರುತಿಸಲಾಗಿದೆ.

ಕಾಮದೇವತೆ: ಕಾಮದೇವತೆಯ ಪ್ರಧಾನ ಲಾಂಛನಗಳೆಂದರೆ ಇಕ್ಷುಚಾಪ ಅಥವಾ ಕಬ್ಬಿನ ಬಿಲ್ಲು ಮತ್ತು ಪಂಚಬಾಣ ಅಥವಾ ಐದು ಹೂಬಾಣಗಳು. ಇವುಗಳನ್ನು ಪ್ರಯೋಗಿಸಿ ಯಾರನ್ನು ಬೇಕಾದರೂ ಕಾಮ ಘಾಸಿಗೊಳಿಸಬಲ್ಲನೆಂಬುದು ನಂಬಿಕೆ. ಕಾಮನ ಪತ್ನಿ ರತಿ; ವಾಹನ ಶುಕ (ಗಿಳಿ). ರತಿ ಮತ್ತು ಮನ್ಮಥ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ದ್ವಾರಶಾಖೆಗಳ ಮೇಲೆ, ಅದರಲ್ಲೂ ಗರ್ಭಗುಡಿಯ ದ್ವಾರದ ಮೇಲೆ ಪ್ರದರ್ಶಿಸುವುದುಂಟು.

ಲೈಂಗಿಕ ಪ್ರಭೇದಗಳು : ಹೊಯ್ಸಳ ದೇವಾಲಯಗಳಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಮಿಥುನ ಶಿಲ್ಪಗಳನ್ನು ಕಾಣುವೆವು. ತಮ್ಮ ದೈಹಿಕ ಸೊಬಗನ್ನು ಪ್ರದರ್ಶಿಸುವ ನಗ್ನ (ವಿಶೇಷವಾಗಿ ಸ್ತ್ರೀ) ಶಿಲ್ಪ; ಎರಡು, ನಗ್ನವಾಗಿರುವ ಅನುರಾಗಿಗಳ ಶಿಲ್ಪ; ಮೂರು, ಪರಿಪೂರ್ಣ ನಗ್ನವಾಗಿದ್ದು ನಿರ್ಭಿಡೆಯಿಂದ ಲೈಂಗಿಕ ಕ್ರೀಡೆಯಲ್ಲಿ ತೊಡಗಿದವರ ಶಿಲ್ಪ. ಮೂರನೆಯ ಗುಂಪಿನ ಶಿಲ್ಪಗಳನ್ನು ಸಾಮಾನ್ಯವಾಗಿ ಕಟಾಂಜಣದ ಮೇಲ್ಭಾಗದಲ್ಲಿ ಕಾಣುವೆವು, ಅಲ್ಲದೆ ಅವುಗಳನ್ನು ಸೂಕ್ಷ್ಮಲತಾ ಸುರುಳಿಗಳಲ್ಲಿ ಪೋಣಿಸಿಕೊಂಡಿರುವುದನ್ನೂ ಮಾಡದ ಅರ್ಧಗೋಡೆಗಳಲ್ಲಿ ಹಾಗೂ ದೇವಾಲಯದೊಳಗಿನ ಭುವನೇಶ್ವರಿಗಳಲ್ಲಿ ನುಸಳಿಕೊಂಡಿರುವುದನ್ನೂ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಬಹುದು. ಕೆಲವು ಬಾರಿ ಇವನ್ನು ಕಂಬಗಳ ಮೇಲೆಯೂ ನೋಡಬಹುದು. ಧಾರ್ಮಿಕ ಅವಶ್ಯಕತೆಯಿಂದಾಗಿ ಈ ಸಂಪ್ರದಾಯವನ್ನು ದಾಟಿ, ಬೃಹತ್ ಪ್ರಮಾಣದ ನಗ್ನ ಪುರುಷರ ಶಿಲ್ಪಗಳನ್ನು ಕೂಡ ಅಪರೂಪವಾಗಿ ಕಾಣುವೆವು. ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯಲ್ಲಿಯ ಶಿಲ್ಪಗಳು ಇದಕ್ಕೆ ನಿದರ್ಶನ. ಆದರೆ ಇವು ಬಹಿರಂಗವಾಗಿ ಲೈಂಗಿಕ ಕ್ರೀಡೆಯನ್ನು ಪ್ರದರ್ಶಿಸುವುದಿಲ್ಲ.

ಲೈಂಗಿಕ ಸಾಮರ್ಥ್ಯದ ಬಗ್ಗೆ ಹೆಮ್ಮೆ: ಸದೃಢನೂ ಸುಂದರನೂ ಆದವನು ತನ್ನನ್ನು ತಾನು ಕಾಮದೇವತೆಯೊಡನೆ ಹೋಲಿಸಿಕೊಳ್ಳುವುದು ಅಂದಿನ ಕಾಲದಲ್ಲಿ ಹೆಮ್ಮೆಯ ವಿಷಯವೆನಿಸಿತ್ತು. ಶಾಸನಗಳಲ್ಲಿ ಅರಸ ನರಸಿಂಹನನ್ನು 'ಅಪೂರ್ವ ರೂಪಕಂದರ್ಪ' ಎಂದೂ ಸೋಮನಾಥ ದಂಡನಾಯಕನನ್ನು ಅವನ ಮಡದಿ ರೇವಲಿಗೆ 'ಮನ್ಮಥ'ನಾಗಿದ್ದನೆಂದು ಗುಣಗಾನಮಾಡಲಾಗಿದೆ.

ಕಾಮ ಮತ್ತು ರತಿ: ಕೇಶವ ದೇವಾಲಯದ ಹೊರಗೋಡೆಯ ಎರಡು ಶಿಲಾಫಲಕಗಳನ್ನು ಶಿಲ್ಪಿ ಮಸಣಿತಮ ಕೊರೆದಿದ್ದು ಅವು ಇಕ್ಷುಚಾಪ ಮತ್ತು ಪಂಚಬಾಣಗಳನ್ನು ಹಿಡಿದ ಮನ್ಮಥನನ್ನು ಪ್ರದರ್ಶಿಸುವುವು. ಮತ್ಸ್ಯಧ್ವಜವನ್ನು ಹಾರಿಸುತ್ತಾ ಕಾಮ ಕೆರಳಿಸುವ ವಸಂತಲಕ್ಷ್ಮಿ, ಬಾಯಲ್ಲಿ ನೀರೂರಿಸುವ ಭಕ್ಷ ಪಾತ್ರೆಯನ್ನು ಹಿಡಿದ 'ಪ್ರೀತಿ' ಮತ್ತು ಕಾಮ ಪ್ರಚೋದಿಸುವ 'ರತಿ' ಮನ್ಮಥನ ಬಳಿ ನಿಂತಿರುವರು.

ಶಿಲ್ಪ ರೂಪಾಂತರಗಳು : ಲೈಂಗಿಕ ಶಿಲ್ಪಗಳು ಕಾಮಶಾಸ್ತ್ರದಲ್ಲಿ ವಿವರಿಸಿರುವ ಕೆಲವು ಪಟ್ಟುಗಳನ್ನು ಚಿತ್ರಿಸುವುದು. ಕಾಮವನ್ನೊಳಗೊಂಡ ಉಳಿದ ಮೂರು ಪುರುಷಾರ್ಥಗಳ ಮಹತ್ವವನ್ನು ಸ್ಪಷ್ಟಪಡಿಸುವುದು ಈ ಶಿಲ್ಪಗಳ ಉದ್ದೇಶವಾಗಿದೆ. ಇಂತಹ ಲೈಂಗಿಕ ಪ್ರದರ್ಶನವನ್ನು ಶೈವ, ವೈಷ್ಣವ ಮತ್ತು ಶಾಕ್ತ ದೇವಾಲಯಗಳಲ್ಲಿ ಮಾತ್ರವಲ್ಲದೆ, ಜೈನ, ಬೌದ್ಧ ಹಾಗೂ ಗ್ರಾಮದೇವತೆಗಳ ಮಂದಿರಗಳಲ್ಲೂ ಕಾಣಬಹುದು. ಈ ಶಿಲ್ಪಗಳು ಗರ್ಭಫಲವತ್ತತೆಯನ್ನು ಸಂಕೇತಿಸುವುವೆಂಬ ವಾದವೂ ಇದೆ.

ಜಾನಪದ ನಂಬಿಕೆಗಳು: ಲೈಂಗಿಕ ಕ್ರೀಡೆಯ ನಿರೂಪಣೆಯ ಬಗ್ಗೆ ಕೆಲವು ಬಗೆಯ ಸಾಮಾನ್ಯ ನಂಬಿಕೆಗಳು ಜನಸಮುದಾಯದಲ್ಲಿ ಬೇರುಬಿಟ್ಟಿವೆ. ಈ ಶಿಲ್ಪಗಳು ದೃಷ್ಟಿ ದೋಷದಿಂದ ರಕ್ಷಿಸುವ ಶಕ್ತಿ ಹೊಂದಿವೆಯೆಂದೂ ಅವು ಬಾಲಿಶರಿಗೆ ಅದರಲ್ಲೂ ಬಾಲ್ಯವಿವಾಹಿತರಿಗೆ ಲೈಂಗಿಕ ಪಾಠವನ್ನು ಭೋದಿಸುವ ಮಾಧ್ಯಮಗಳಾಗಿದ್ದವೆಂದೂ ವಾದಿಸಲಾಗಿದೆ. ಹೊರಭಿತ್ತಿಯ ಮೇಲೆ ಮೂಡಿಸಿರುವ ಮಹಾಕಾವ್ಯದ ಮುಂತಾದವುಗಳ ಘಟನೆಗಳನ್ನು ಪರಿಚಯಿಸಿಕೊಡುವುವೋ, ಅದೇ ಬಗೆಯಲ್ಲಿ ನವ ವಿವಾಹಿತರಿಗೆ ಈ ಶಿಲ್ಪಗಳು ಲೈಂಗಿಕ ಕಲೆಯ ಸೂಕ್ಷ್ಮತೆಗಳನ್ನು ಪರಿಚಯಿಸಿಕೊಡುವವೆನ್ನಲಾಗಿದೆ. ಇದು ಏನೇ ಇರಲಿ, ಚಿತ್ತವನ್ನು ವಿಶೇಷವಾಗಿ ಸೆಳೆದು, ಅವರಲ್ಲಿ ಸಂಸಾರಿಕ ಕುತೂಹಲವನ್ನು ಪಡೆದಿವೆ ಮತ್ತು ಆ ಮೂಲಕ ಅವರನ್ನು ಖುಷಿಪಡಿಸುವ ಶಕ್ತಿಯನ್ನು ಈ ಶಿಲ್ಪಗಳು ಪಡೆದಿವೆ ಎಂಬುದನ್ನು ಒಪ್ಪಲೇಬೇಕು. ಈ ಕಾರಣಗಳಿಂದಾಗಿ ಪುರಾತನ ಮತ್ತು ಮಧ್ಯಕಾಲೀನ ಅರಮನೆ ಮತ್ತು ಮಹಾಮನೆಗಳಲ್ಲಿ ಕೂಡಾ ಬಗೆಬಗೆಯ ಲೈಂಗಿಕ ಭಿತ್ತಿಚಿತ್ರಗಳನ್ನು ಬಿಡಿಸುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Saturday, October 18, 2008

'ವಿದ್ಯಾನಿಧಿ ಪ್ರಸನ್ನ ಸೋಮನಾಥಪುರ'


ಷ. ಶಟ್ಟರ್ 'ತಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಕೃತಿಯಿಂದ ಪ್ರಸಿದ್ಧರಾದವರು. ಬಹುಷಃ ಕನ್ನಡ ನೆಲದ ವಾಸ್ತು ಮತ್ತು ಶಿಲ್ಪ ಕ್ಷೇತ್ರದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರ ಇತ್ತೀಚಿನ ಪುಸ್ತಕ 'ಸೋಮನಾಥಪುರ'. ಅಭಿನವ ಪ್ರಕಾಶನದಿಂದ ಹೊರಬಂದಿದೆ. ಇದು ಕನ್ನಡದ ಮಹತ್ವಪೂರ್ಣ ಸಂಶೋಧನಾ ಪುಸ್ತಕ ಎಂದರೆ ತಪ್ಪಾಗಲಾರದು.

ಷ. ಶಟ್ಟರ್ ಈಗ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಲ್ಲಿ ಸಂದರ್ಶಕ ಪ್ರಾಧ್ಯಾಪಕರು ಮತ್ತು ಇಂಧಿರಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದ ಆರ್ಟ್ಸ್, ದಕ್ಷಿಣ ವಲಯದ ಗೌರವ ನಿರ್ದೇಶಕರಾಗಿದ್ದಾರೆ. ಶಟ್ಟರ್ ಅವರೇ ಹೇಳುವಂತೆ 'ಸೋಮನಾಥಪುರ' ಗ್ರಂಥದ ಉದ್ದೇಶ ಪ್ರೌಢ ಓದುಗ ಅಥವಾ ಸಂದರ್ಶಕ ಸೋಮನಾಥಪುರದ ಬಗ್ಗೆ ತಿಳಿದುಕೊಳ್ಳಲು ಬೇಕಾದ ಮಾಹಿತಿ ಒದಗಿಸುವುದು.

ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ, ಇಲ್ಲಿಯ ದೇವಾಲಯಗಳ ಇತಿಹಾಸ, ಐತಿಹ್ಯ, ಪೋಷಕ, ವಾಸ್ತು-ಶಿಲ್ಪಿ ಮುಂತಾದವನ್ನು ಚರ್ಚಿಸುತ್ತದೆ. ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವನ್ನು ಒದಗಿಸುತ್ತದೆ. ಅಲ್ಲದೆ, ಪ್ರಧಾನ ದೇವತೆಗಳ ಪಾಕಶಾಲೆ, ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗ ('ನಾಗವಾಸ' ಅಥವಾ ನಾಟ್ಯಗಾರ್ತಿಯರ ಮತ್ತು 'ಮೊಖರಿಗ' ಅಥವ ವಾದ್ಯ ಸಂಗೀತಗಾರ) ಬಗ್ಗೆ ಒಳನೋಟ ನೀಡುತ್ತದೆ.

ಹೊಯ್ಸಳರ ಆಳ್ವಿಕೆಯ ಕಾಲ ( ಸು. ಕ್ರಿ.ಶ. 1000-1336)ದಲ್ಲಿ ಕಟ್ಟಿದ ಅತ್ಯಂತ ಸುಂದರ ದೇವಾಲಯಗಳಲ್ಲಿ ಕೊನೆಯದೂ, ಅಳಿದುಳಿದ ಈ ಶೈಲಿಯ ವಿಷ್ಣು ತ್ರಿಕೂಟಗಳಲ್ಲಿ ಅದ್ಭುತವಾದುದೂ ಎಂಬ ಹಿರಿಮೆ ಸೋಮನಾಥಪುರದ ಕೇಶವ ದೇವಾಲಯದ್ದು. ಏಕಕೂಟ ದೇವಾಲಯಗಳಲ್ಲಿ ಬೇಲುರಿನ ಚನ್ನಕೇಶವ, ದ್ವಿಕೂಟಗಳಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಅತ್ಯುತ್ತಮ ಮಾದರಿಗಳು. ವಾಸ್ತು-ಶಿಲ್ಪಿಗಳ ಬಗ್ಗೆ ಸೋಮನಾಥಪುರ ದೇವಾಲಯ ಒದಗಿಸುವ ವಿವರಗಳನ್ನು ಸರಿಗಟ್ಟುವ ಮಾಹಿತಿ ನಮ್ಮ ದೇಶದ ಮಧ್ಯಕಾಲೀನ ದೇವಾಲಯಗಳಲ್ಲೆಲ್ಲೂ ಕಾಣಸಿಗುವುದಿಲ್ಲ. ಐದು ಬಗೆಯಲ್ಲಿ ಅಕ್ಷರ ಸಂಯೋಜನೆ ಮಾಡಿ, ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿ ಮಾಡಿರುವ ಕೇಶವ ದೇವಾಲಯದ ಶಿಲ್ಪಿಯೊಬ್ಬ ಭಾರತೀಯ ಕಲಾ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿ, ಆಮೂಲಕ ತನ್ನ ಹೆಸರನ್ನು ಚಿರಸ್ಥಾಯಿ ಮಾಡಿಕೊಂಡಿರುವನು. ಇದರ ಪರಿಣಾಮ ಅಲ್ಪಮಟ್ಟಿನದಲ್ಲ, ಏಕೆಂದರೆ 'ಭಾರತೀಯ ಕಲೆ ಅನಾಮಧೇಯ' ಮತ್ತು 'ಭಾರತೀಯ ಶಿಲ್ಪಿಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ' ಎಂಬ ವ್ಯಾಪಕ ನಂಬಿಕೆಯನ್ನು ಇದು ಅಲ್ಲಗಳೆಯುತ್ತದೆ.

ಇಷ್ಟೇ ಕುತೂಹಲಕರವಾದ ಮತ್ತೊಂದು ವಿಶೇಷತೆ ಈ ಅಗ್ರಹಾರದ ಸಂಸ್ಥಾಪಕನು ತಾನು ಶೂದ್ರನೆಂದು ಸ್ಪಷ್ಟವಾಗಿ ಸಾರಿಕೊಂಡಿರುವುದು. ಸಂಸ್ಕೃತ ಶಬ್ದ ಸಂಪದವನ್ನು ಸಮರ್ಥವಾಗಿ ಬಳಸಿಕೊಂಡು ಸೂಕ್ಷ್ಮ ತೆರೆಯನ್ನೆಳೆಯಲು ಈ ಶೂದ್ರನನ್ನು 'ಬ್ರಹ್ಮಪಾದಪುತ್ರ'ನೆಂದು ಚತುರ ಕವಿಯೊಬ್ಬ ಬಣ್ಣಿಸಿರುವುದು ಮತ್ತೊಂದು ಮಾತು!

ಚಿದಾನಂದ ಮೂರ್ತಿಯವರು ಸಂಶೋಧನೆಯ ಹೆಸರಿನಲ್ಲಿ ಅಪಹಾಸ್ಯಕೀಡಾಗಿರುವ ಹೊತ್ತಿನಲ್ಲಿ ಷ. ಶಟ್ಟರು ಮುಖ್ಯರಾಗುತ್ತಾರೆ. ಇವರ ಅಮೂಲ್ಯ ಪರಿಶ್ರಮದಿಂದ ಹೊರಬಂದಿರುವ, ಸಾಕಷ್ಟು ವಿಶೇಷ ಮಾಹಿತಿ ಬಂಡಾರವನ್ನೇ ಹೊಂದಿರುವ, ಸುಂದರ ಚಿತ್ರಗಳೋಂದಿಗೆ ಮೂಡಿಬಂದಿರು 'ಸೋಮನಾಥಪುರ' ಇತಿಹಾಸ, ವಾಸ್ತು-ಶಿಲ್ಪ, ಕಲೆಯ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥ ಇದು.

ಬೆಲೆ - 100 ರುಪಾಯಿ. ಪ್ರಕಾಶಕರು - ಅಭಿವನ, 17/18-2, 1ನೇ ಮೇನ್, ಮರೇನಹಳ್ಳಿ, ವಿಜಯನಗರ, ಬೆಂಗಳೂರು-560040. ದೂ.-080-23505825.

Wednesday, October 15, 2008

ಹಳ್ಳಿ ಹಾಡು ತಂದಾನನ.. ಹಳ್ಳಿ ಬಾಳು ತರನಾನನ...


ನಮ್ ಭೂಮ್ ತಾಯಿ ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ ಭೇದ ಭಾವ ನಾ.. ಹೊಯ್

ನಿವಾರ್ಯ ಕಾರಣಗಳಿಂದ ಕಳೆದ ಒಂದು ವಾರ ಬೆಂಗಳೂರಿನಿಂದ ದೂರ ಉಳಿಯ ಬೇಕಾಗಿತ್ತು. ಈಸಂದರ್ಭದಲ್ಲಿ ನನ್ನ ತಾಯಿಯ ತವರು ಸೂರೇನಹಳ್ಳಿಗೆ ಹೋಗಿದ್ದೆ. ಈ ಊರು ಚಿತ್ರದುರ್ಗದಿಂದ 18 ಕಿಮೀ ದೂರವಿದೆ. ಬಯಲು ಸೀಮೆಯ ಹಳ್ಳಿ. ಬೈಕ್ ಏರಿ ನಾನು ಮತ್ತು ನನ್ನ ಕಸಿನ್ ಸುರೇಂದ್ರ ಬೆಳಗಿನ ಜಾವ ಆರಕ್ಕೆ ಹೊರಟೆವು. ಈ ಬಾರಿ ಮಳೆ ಚೆನ್ನಾಗಿ ಆಗಿ ರೈತರಲ್ಲಿ ಹೊಸ ಚೇತನ ನೀಡಿದೆ. ದಾರಿಯುದ್ದಕ್ಕೂ ಬೆಳೆದು ನಿಂತಿರುವ ಹಚ್ಚ ಹಸಿರಿನ ಪೈರುಗಳನ್ನು ನೋಡುವುದೇ ಒಂದು ಸೊಗಸು. ಮಲೆನಾಡು ಅಥವಾ ನೀರಾವರಿ ಅನುಕೂಲವಿರುವ ಕಡೆಗಳಲ್ಲಿ ಕಂಡುಬರುವ ಭತ್ತದ ಗದ್ದೆಗಳು, ತೆಂಗು ಅಡಿಕೆ ತೋಟಗಳು ಕೆಲವೊಮ್ಮೆ ಏಕತಾನತೆ ತಂದು ಬಿಡಬಹುದು. ಆದರೆ ಬಯಲು ಸೀಮೆಯ ಮಳೆ ಆಶ್ರಿತ ರೈತರು ಬೆಳೆಯುವ ಬೆಳೆಗಳು ವೈವಿಧ್ಯತೆಯಿಂದ ಕೂಡಿರುತ್ತವೆ. ಜೋಳ, ರಾಗಿ, ಸಜ್ಜೆ, ನವಣೆ, ಕುಸುಬೆ, ಸೂರ್ಯಕಾಂತಿ, ಮೆಕ್ಕೆ ಜೋಳ (ಮುಸುಕಿನ ಜೋಳ), ಶೇಂಗಾ, ಹತ್ತಿ ಸಾಲುಗಳು ಮನಸ್ಸಿಗೆ ಚೇತೋಹಾರಿ. ಈ ಪ್ರಮುಖ ಬೆಳೆಗಳ ನಡುವೆ ಅಕ್ಕಡಿ ಸಾಲಿನಲ್ಲಿ ತೊಗರಿ, ಅವರೆ, ಹುರುಳಿಬೆಳೆಯುತ್ತಾರೆ.

ಊರಿನಲ್ಲಿ ನನ್ನ ತಾಯಿವರ ಅಕ್ಕ ಮತ್ತು ಅಣ್ಣರ ರೈತಾಪಿ ಕುಟುಂಬಗಳು ಇವೆ. ನನ್ನ ದೊಡ್ಡಮ್ಮನವರ ಐದು ಜನ ಗಂಡು ಮಕ್ಕಳಲ್ಲಿ ಇಬ್ಬರು ಕೃಷಿಯನ್ನೇ ನಂಬಿಕೊಂಡಿದ್ದಾರೆ. ಇವರಲ್ಲಿ ದೊಡ್ಡವರ ಹೆಸರು ತಿಪ್ಪೇಸ್ವಾಮಿ. ಮನೆಯಲೆಲ್ಲರೂ ತಮ್ಮಣ್ಣ ಎಂದುಕರೆಯುತ್ತಾರೆ. ಈತ ಮಾದರಿ ಕೃಷಿಕ. ನಾವು ಊರಿಗೆ ಹೋದಾಗ ತನ್ನ ನಾಲ್ಕು ಎಕರೆ ನೀರಾವರಿಯಲ್ಲಿ ಮೆಣಸಿನ ಸಸಿಗಳಿಗೆ ನೀರುಣಿಸುತ್ತಿದ್ದರು. ಈವರ ಅಚ್ಚುಕಟ್ಟಾದ ಕೆಲಸಕ್ಕೆ ನಳನಳಿಸುತ್ತಿದ್ದ ಸಸಿಗಳೇ ಸಾಕ್ಷಿಯಾಗಿದ್ದವು. ಎಂಟು ದಿನಗಳ ಹಿಂದೆ ಇದೇ ಜಮೀನಿಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಕಿತ್ತು ಮನೆಯ ಹಿತ್ತಲಿನ ಕಣದಲ್ಲಿ ಒಣಹಾಕಿದ್ದರು. ಈ ಬಾರಿ ಈರುಳ್ಳಿಗೆ ಉತ್ತಮ ಬೆಲೆಯಿದೆ. ಆದರೆ ಬೆಳೆ ಸರಿಯಾಗಿ ಕೈಗೆ ಬಂದಂತ ಸಮಯದಲ್ಲಿ ಮಳೆ ಸುರಿದು ಬೆಳೆ ಕೊಳೆಯಲು ಶುರುವಾಗಿದೆ. ಪಕ್ಕದ ಜಮೀನಿನವರು ಬೆಳೆದಿದ್ದ ಬೆಳೆಯ ಅರ್ಧದಷ್ಟನ್ನು ತಿಪ್ಪೆಗೆ ಸುರಿದಿದ್ದಾರೆ.



ನೆಲದಿಂದ ಕಿತ್ತ ನಂತರ ಇದರ ಸಂಸ್ಕರಣೆಯದೇ ದೊಡ್ಡ ತಲೆನೋವು. ನನ್ನ ಅಣ್ಣನಿಗೆ ಇದರದೇ ಚಿಂತೆ. ಇನ್ನೆರಡು ದಿನಗಳಲ್ಲಿ ಬೆಳೆಯನ್ನು ಮಾರ್ಕೆಟ್ ಗೆ ಸಾಗಿಸಬೇಕು. ಬೆಂಗಳೂರೇ ಈರುಳ್ಳಿಯ ಮುಖ್ಯ ಮಾರಾಟ ಕೇಂದ್ರ. ಈರುಳ್ಳಿ ಬೆಳೆಯಲು ತಗಲುವ ವೆಚ್ಚವನ್ನು ಮತ್ತೊಬ್ಬ ಸಹೋದರ ಶ್ರೀನಿವಾಸ ವಿವರಿಸುತ್ತಿದ್ದ. ಒಬ್ಬ ರೈತ ಈ ಭಾಗದಲ್ಲಿ ಒಂದು ಎಕರೆಗೆ ಸರಾಸರಿ ಇನ್ನೂರು ಪ್ಯಾಕೇಟ್ (ಪ್ಯಾಕೆಟ್ ಅಂದರೆ ಸುಮಾರು 50ರಿಂದ 55 ಕೆಜಿ.ಯ ಚೀಲ) ಈರುಳ್ಳಿ ಬೆಳೆದಿದ್ದಾನೆ. ಅದರಲ್ಲಿ ಅವನ ಕೈಗೆ ಸಿಕ್ಕಿರುವುದು ಅರ್ಧ ಬೆಳೆ ಮಾತ್ರ. ಅಂದರೆ ನೂರು ಪ್ಯಾಕೇಟ್. ಒಂದು ಪ್ಯಾಕೇಟ್ ಈರುಳ್ಳಿಗೆ, ಬೀಜ ಗೊಬ್ಬರದ ವೆಚ್ಚ 25 ರು., ಬಿತ್ತನೆ, ಕಳೆ ತೆಗೆಯಲು, ಮತ್ತು ಕೀಳಲು ಕೂಲಿ ವೆಚ್ಚ 40 ರು., ಸಂಸ್ಕರಣೆಗೆ 25ರು., ಹೊಸ ಚೀಲದ ಬೆಲೆ 15ರು., ಸಾಗಣೆ ವೆಚ್ಚ 30 ರು., ಒಟ್ಟು ಅವನಿಗೆ ತಗಲಿರುವ ವೆಚ್ಚ 135ರುಪಾಯಿಗಳು. ಈಗ ಒಂದು ಪ್ಯಾಕೇಟ್ ಗೆ ಮಾರುಕಟ್ಟೆಯಲ್ಲಿ 200 ರುಪಾಯಿ. ಎಲ್ಲ ಕೂಡಿಕಳೆದ ನಂತರ ಅವನು ಪಟ್ಟ ಶ್ರಮಕ್ಕೆ ಸಿಕ್ಕುವ ಬೆಲೆ 65 ರುಪಾಯಿ.

ಇದನ್ನೆಲ್ಲ ಯೋಚಿಸುತ್ತಾ ಮನೆಗೆ ಮರಳಿದಾಗ ಅತ್ತಿಗೆ ಗಂಗಕ್ಕ ಕೊಟ್ಟ ಕಲ್ಲುಪ್ಪುಬೆರೆಸಿದ ಮಜ್ಜಿಗೆಯ ತಂಬಿಗೆಯನ್ನು ಕ್ಷಣಮಾತ್ರದಲ್ಲಿ ಕುಡಿದು ಯೋಗಕ್ಷೇಮ ವಿಚಾರಿಸುತ್ತ ಕುಳಿತೆ. ನಮ್ಮ ದೊಡ್ಡಮ್ಮನವರದು ತುಂಬು ಸಂಸಾರ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಐದು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿ ಎಲ್ಲರಿಗೂ ಮದುವೆ ಮಾಡಿ ನೆಮ್ಮದಿಯ ಜೀವನ ನಡೆಸುತಿದ್ದಾರೆ. ಈಗ ಇವರದು ಅವರ ಊರಿನಲ್ಲಿ ಉತ್ತಮ ಸ್ಥಿತಿಯಲ್ಲಿರುವ ಹೆಸರಾಂತ ಮನೆತನ.

ದೊಡ್ಡಮ್ಮ ಬೆಳಗಿನ ಉಪಹಾರಕ್ಕೆ ಹಿಂದಿನ ದಿನ ಕರುಹಾಕಿದ್ದ ಎಮ್ಮೆಯ ಮೊದಲ ಹಾಲಿನಿಂದ ಮಾಡಿದ ಗಟ್ಟಿ ಗಿಣ್ಣು ತಿನ್ನಲು ಕೊಟ್ಟರು. ನಮ್ಮ ಕಡೆ ಹಸುವಿನ ಹಾಲಿಗಿಂತ ಎಮ್ಮೆಯ ಹಾಲೇ ಶ್ರೇಷ್ಠ. ಎಮ್ಮೆಯ ಹಾಲು ಹಸುವಿನ ಹಾಲಿಗಿಂತ ಗಟ್ಟಿ ಮತ್ತು ಕೊಬ್ಬಿನಾಂಶ ಹೆಚ್ಚು. ಹಿಂದಿನ ದಿನ ಕರು ಹಾಕಿದ್ದ ಎಮ್ಮೆ ಬರೀ ಮೂರು ವರ್ಷದ ಪ್ರಾಯದ್ದು. ಅದರ ಮೊಲೆಗಳು ಚಿಕ್ಕದೆಂದು, ಹಾಲು ಕರೆಯಲು ಕಷ್ಟವಾಗುತ್ತಿದೆ, ಅಲ್ಲದೆ ಅದು ಗಂಡುಕೋಣಕ್ಕೆ ಜನ್ಮ ನೀಡಿದೆ ಎಂಬುದು ನನ್ನ ದೊಡ್ಡಮ್ಮನವರ ಕೊರಗು. ಈ ಎಮ್ಮೆಗಳಲ್ಲಿ ಗಂಡಿಗೆಮಹತ್ವವಿಲ್ಲ. ಕೋಣ ಸಾಕಲು ಹೊರೆ ಬೇರೆ. ಅದೇ ಹೆಣ್ಣು ಮರಿಗೆ ಜನ್ಮ ನೀಡಿದರೆ ಮುಂದೆ ಸಂಸಾರಕ್ಕೆ ಸಾಕಾಗುವಷ್ಟು ಹಾಲು ನೀಡುತ್ತದೆ. ಗಂಡು ಮರಿಗಳನ್ನು ಐದೂ ನೂರೋ ಸಾವಿರಕ್ಕೊ ಹರಿಜನರ ಕೇರಿಗೆ ತಳ್ಳಿ ಬಿಡುತ್ತಾರೆ.

ಈ ಗಿಣ್ಣು ವಿಶಿಷ್ಟವಾದ ಖಾದ್ಯ. ಇದು ಎಮ್ಮೆ ಕರು ಹಾಕಿದ ಕೆಲವೇ ಗಂಟೆಗಳಲ್ಲಿ ಕರೆದು ಸಂಗ್ರಹ ಮಾಡಿ ಇಡುತ್ತಾರೆ. ಅದರಲ್ಲಿ ಸ್ವಲ್ಪ ಬೆಲ್ಲ ಮತ್ತು ಒಂದು ಅಳತೆಗೆ ಮೂರರಷ್ಟು ಕೆನೆ ಹಾಲನ್ನು ಬೆರೆಸಿ, ಸ್ವಲ್ಪ ಏಲಕ್ಕಿ ಒಣ ಶುಂಠಿ ಹಾಕಿ ಒಲೆ ಮೇಲಿಟ್ಟರೆ ಚಾಕುವಿನಿಂದ ಸ್ಲೈಸ್ ಮಾಡಬಹುದಾದಂತ ಗಟ್ಟಿ ಗಿಣ್ಣು ರೆಡಿಯಾಗುತ್ತದೆ. ಇದು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಅಪರೂಪಕ್ಕೆ ಮಾತ್ರ ಸಿಗುವಂತದ್ದು. ನನ್ನ ದೊಡ್ಡಮ್ಮನವರ ಮನೆಯಲ್ಲಿ ಸುಮಾರು ಮೂರ್ನಾಲ್ಕು ಕರೆಯುವ ಎಮ್ಮೆಗಳಿವೆ. ದಿನಕ್ಕೆ ಕಡೆಪಕ್ಷ ಐದಾರು ಲೀಟರ್ ಹಾಲು ಕೊಡುತ್ತವೆ. ನಮ್ಮ ಸಂಬಂಧಿಗಳಿಗೆಲ್ಲ ಇವರ ಮನೆಯಿಂದಲೇ ಬೆಣ್ಣೆ ಸರಬರಾಜಾಗುವುದು.
ಮಧ್ಯಾಹ್ನ ಬಿಸಿ ಜೋಳದ ಮುದ್ದೆ ಸೊಪ್ಪಿನ ಉದುಕ ಊಟಮಾಡಿ ಮರಳಿ ದುರ್ಗಕ್ಕೆ ಬಂದಾಗ ಮೈಯಲ್ಲ ಚೈತನ್ಯದಿಂದ ಕಂಪಿಸುತ್ತಿತ್ತು.

Thursday, October 2, 2008

ಗಾಂಧೀಸ್ಮರಣೆ




ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ

ಈಗ ಶಾಂತಿ ನೆಲೆಸಿದೆ.

ನರನಾಡಿಯೆಲ್ಲ ನಿಂತೇ ಹೋದಂತಾಗಿ

ನಾವೆಲ್ಲ ಯೋಗಿಗಳಾಗಿದ್ದೇವೆ:

ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ

ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.

-

ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು

ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ.

ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ

ಈಗ ಕೈಗೆ ಸಿಗದಂತಾಗಿವೆ.

ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.

ಭಾರತದ ಜನಸಂಖ್ಯೆ ಇಳಿಯುತ್ತಿದೆ.

-

ನಾಳಿನ ನಾಗರಿಕರಾದ ಇಂದಿನ ಮಕ್ಕಳೆಲ್ಲ

ಸರಿಯಾಗಿ ಸಾಲೆಗೆ ಹೋಗಿ

ಒಂದು ಎರಡು ಬಾಳೆಲೆ ಹರಡು

ಕಲಿಯುತ್ತಿದ್ದಾರೆ.

ಹಸಗಂಡು ಮನೆಗೆ ಬಂದು

ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.

-

ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನುಸಿಕ್ಕು

ಧೂರ್ಮೋದ್ಧಾರದ ಸವಾರಿ ಮುನ್ನಡೆದಿದೆ.

ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ

ಅವರ ಉದ್ಧಾರವೂ ಆಗುತ್ತಿದೆ.

-

ಸರಕಾರದ ಕೆಲಸ ದೇವರ ಕೆಲಸವಾಗಿ

ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.

ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ

ಜಿಟಿ ಜಿಟಿ ಮಳೆ ಹಿಡಿದಿದೆ.

ನಮ್ಮ ತ್ರಿವರ್ಣ ಧ್ವಜ ತೊಯ್ದು ತುಪ್ಪಡಿಯಾಗಿ

ಅಶೋಕ ಚಕ್ರ ಸ್ಥಿರವಾಗಿದೆ.

-

ಹೆದ್ದಾರಿಯ ಮೇಲೆ ಕೆಟ್ಟುನಿಂತ ಟ್ರಕ್ಕು ಕೂಡ

ನಾಡ ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ.

ರೇಡಿಯೋದ ಗಿಳಿವಿಂಡು, ಅದೋ,

ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.

ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,

ಕಿವಿ ಮುಚ್ಚಿ, ಕಣ್ಣು ಮುಚ್ಚಿ,

ನೆನೆ ನೆನೆ ಗಾಂಧಿಯನು.

(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದಲಿಂಗ?)

ಬಾಯಿ ಮುಚ್ಚಿ,

ನೆನೆ ನೆನೆ ಗಾಂಧಿಯನು.

- ಚಂದ್ರಶೇಖರ ಪಾಟೀಲ

Thursday, September 25, 2008

ಒಂಟಿ ಹೃದಯ...


ಳೆದ ಒಂದು ವಾರದಿಂದ ಯಾಕೋ ಮನಸ್ಸಿಗೆ ನೆಮ್ಮದಿಯೇ ಇಲ್ಲದಂತಾಗಿತ್ತು. ಕಾರಣಗಳು ನೂರಾರಿವೆ. ಅವುಗಳಲ್ಲಿ ಮುಖ್ಯ ಎನ್ನಬಹುದಾದರೆ ಮತಾಂಧರು ನಡೆಸುತ್ತಿರುವ ದಾಳಿ, ಬಲಹೀನ ಸರಕಾರದ ಒಡೆಯರು ನೀಡುತ್ತಿರುವ ಲಜ್ಜೆಗೇಡಿ ಹೇಳಿಕೆಗಳು, ಕೋಮುಶಕ್ತಿಗಳ ಮೇಲುಗೈ, ಷೇರುಪೇಟೆ ಕುಸಿತದಿಂದಾಗಿ ಆಗುತ್ತಿರುವ ನಷ್ಟ, ವೈಯಕ್ತಿಕವಾಗಿ ಏಕಾಗಿತನ ಮುಂತಾದವುಗಳು. ಸಾಮಾನ್ಯವಾಗಿ ಬೇಸರವಾದಾಗ ಕೆಲವರು ಇಸ್ಪೀಟು, ಜೂಜುಗಳು, ಮದ್ಯಪಾನ, ಸೀಗರೇಟು ಇನ್ನಿತರೆ ಚಟಗಳಲ್ಲಿ ವೇಳೆ ಕಳೆಯಬಹುದು. ಆದರೆ ನನಗೆ ಈ ಯಾವ ಚಟಗಳಲ್ಲೂ ಆಸಕ್ತಿಯಿಲ್ಲ. ಹೀಗೆಂದು ಹೇಳಿ ನನ್ನನ್ನು ನಾನು ಒಳ್ಳೆಯವನು ಎಂದು ಆರೋಪಿಸಿಕೊಳ್ಳುತ್ತಿಲ್ಲ. ನನಗೆ ಯಾಕೋ ಮೊದಲಿನಿಂದಲೂ ಇವುಗಳು ಅಂಟಿಕೊಳ್ಳಲಿಲ್ಲ. ಟೀ ಕಾಫೀಯೂ ರುಚಿಸುವುದಿಲ್ಲ. ಮತ್ತೆ ಕೆಲವರು ಹರಟೆಯನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಎಲ್ಲೋ ಕೆಲವರು ತಮ್ಮ ತೀವ್ರ ದುಗುಡ, ದುಮ್ಮಾನದ ವೇಳೆಯಲ್ಲಿ ತಮ್ಮ ನೆಚ್ಚಿನ ಪುಸ್ತಕಗಳಿಗೆ ಮೊರೆ ಹೋಗುತ್ತಾರೆ, ಅಂತವರಲ್ಲಿ ನಾನೂ ಒಬ್ಬ.
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ ಹಣ ನೆಲ
ಹೊನ್ನು ಬೇಕು.
ಕೆಲವರಿಗೆ ಪ್ರೀತಿ
ಎಲ್ಲೋ ಕಾಣದ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು
ಬಡಜೋಗಿಯ ಹಾಡು.
ಕಛೇರಿಯಲ್ಲಿನ ಕೆಲಸ ಮನಸ್ಸನ್ನು ಮುದುಡಿಸಿತ್ತು. ಹೊರಗೆ ಎಲ್ಲಾದರೂ ಸುತ್ತೋಣವೆಂದರೆ ರಜೆ ಸಮಸ್ಯೆ. ಇಂತಹ ಹೊತ್ತಿನಲ್ಲಿ ಓದಿಗೆ ಮೊರೆ ಹೋಗುತ್ತೇನೆ. ನನ್ನ ಪ್ರೀತಿಯ ಲೇಖಕ ತೇಜಸ್ವಿಯವರ 'ಕರ್ವಾಲೋ' ಅಥವಾ ಲಂಕೇಶರ 'ಗುಣಮುಖ'ನೋ, ಅಥವಾ "ಮನುಷ್ಯನ ಮನಸ್ಸು ಯಾವ ಹೆಣ್ಣನ್ನು ಕುರಿತು ಹೆಚ್ಚು ಧ್ಯಾನಿಸುತ್ತದೆ; ಆತನಿಗೆ ಒಲಿದ ಹೆಣ್ಣನ್ನೋ ಅಥವಾ ಆತನಿಗೆ ಒಲಿಯದೆ ಹೋದ ಹೆಣ್ಣನ್ನೋ?" ಎಂದು ಕೇಳುವ ಏಟ್ಸ್ ಕವಿತೆಗಳನ್ನೋ ಓದಿ ಮನಸ್ಸಿನ ಗಂಟು ಸಡಿಲಗೊಳಿಸಿಕೊಳ್ಳುತ್ತೇನೆ. ನೆನ್ನೆ ಹಾಗೆಯೇ ಆಯಿತು. ಲಂಕೇಶರ 'ಟೀಕೆ-ಟಿಪ್ಪಣಿ'ಯಲ್ಲಿನ ಒಂದು ಬರಹ ಓದಿ ನನ್ನ ಸದ್ಯದ ಎಲ್ಲ ನೋವುಗಳನ್ನು ಮರೆತು ಕ್ರಮೇಣ ಮನಸ್ಸು ಮುದಗೊಳ್ಳತೊಡಗಿತು. ರಾತ್ರಿ ಸುಖ ನಿದ್ದೆ ಆವರಿಸಿತ್ತು.

ನೀವೂ ಓದಿ ಹೊಸ ಚೈತನ್ಯ ಪಡೆಯಬಹುದು ಎಂಬ ನಂಬಿಕೆಯಿಂದ ಆ ಲೇಖನದ ಕೆಲ ಭಾಗ ಕೆಳಗೆ ಕೊಟ್ಟಿದ್ದೇನೆ.

"ನನ್ನನ್ನು ಖುಷಿಪಡಿಸಿ. ನನಗೆ ಜೀವಿಸುವ ಆಶೆ ಕೊಡಿ..."
ಆ ಕಡೆಯಿಂದ ಫೋನಿನಲ್ಲಿ ಬರುತ್ತಿದ್ದ ಹೆಣ್ಣುಮಗಳ ಧ್ವನಿ.
ಆಗತಾನೆ ನನ್ನ ನಿತ್ಯದ ಬ್ಯಾಡ್ಮಿಂಟ್ ನಿಂದ ಬಂದಿದ್ದೆ. ರಾತ್ರಿ ಏಳುಗಂಟೆ; ಎಲ್ಲಿಯಾದರೂ ಹೋಗೋಣವೆಂದು ನನ್ನ ಶಾಲನ್ನು ಹೆಗಲ ಮೇಲೆ ಹಾಕಿಕೊಂಡು ಟೇಬಲ್ಲಿನ ಕಾಗದಗಳನ್ನು ಓರಣಗೊಳಿಸಿ ಒಮ್ಮೆ ಚಿಂತಿಸಿದ್ದೆ, ಮತ್ತೊಂದು ದಿನ ಮೆಲ್ಲಗೆ ತೆವಳುತ್ತ ಕಣ್ಣರೆಯಾಗಲಿತ್ತು. ಪಡುವಣದ ಕೆಂಪು ಮಾಸತೊಡಗಿತ್ತು; ನಕ್ಷತ್ರಗಳು ಮುಗುಳ್ನಗತೊಡಗಿದ್ದವು. ನನ್ನಂತೆಯೇ ಇಡೀ ಬೆಂಗಳೂರು ದಣಿದ ಮೈಮನಸ್ಸುಗಳೊಡನೆ ರಾತ್ರಿಗೆ ಸಿದ್ಧವಾಗತೊಡಗಿತ್ತು. ಆಗತಾನೆ, ಕೇವಲ ಹತ್ತಾರು ನಿಮಿಷಗಳ ಹಿಂದೆ, ಗೆಳೆಯರೊಬ್ಬರೊಂದಿಗೆ ಮಾತಾಡುತ್ತ ಬೆವರು, ಆಟದಿಂದ ಜುಮ್ಮೆನ್ನುವ ಮೈ, ನಿಧನಿಧಾನಕ್ಕೆ ಏರುತ್ತಿದ್ದ ಚಳಿ ಮತ್ತು ಮೃದುವಾಗಿ ಅಡಗುತ್ತಿದ್ದ ವಾಹನಗಳ ಸದ್ದಿನಲ್ಲಿ ಕೂತು ಒಂದು ಸುಂದರ ದಿನವನ್ನು ಬೀಳ್ಕೊಟ್ಟಿದ್ದೆ. ಹಾಗೆಯೇ ನಾನು ನೆಡಬೇಕೆಂದಿದ್ದ ಮರಗಳು, ಹೂಗಿಡಗಳು, ಕುಂಡದಲ್ಲಿ ನಗಲಿರುವ ಗುಲಾಬಿಗಳ ಬಗ್ಗೆ ಚಿಂತಿಸಿದ್ದೆ. ಒಮ್ಮೆಗೇ ಹತ್ತಾರು ಕಡೆ ಹರಿದು ತಲ್ಲಣಗೊಳ್ಳುವ ಮನಸ್ಸನ್ನು ಕಂಡು ಮುಗುಳ್ನಗುತ್ತಲೇ ಗೆಳೆಯರ ಮಾತಿನತ್ತ ಕಿವಿಗೊಟ್ಟಿದ್ದೆ.
ಅವನ್ನೆಲ್ಲ ಮುಗಿಸಿ ಬಂದಾಗ ಆರೂ ಮುಕ್ಕಾಲು ಗಂಟೆ; ನಮ್ಮ ಕಛೇರಿಯಲ್ಲಿ ಯಾರೂ ಇರಲಿಲ್ಲ. ಸಿದ್ಧವಾಗಿ ಹೊರಗೆ ಹೊರಡುವಷ್ಟರಲ್ಲಿ ಆ ಫೋನ್ ಕರೆ ಬಂದಿತ್ತು.
"ನೀವು ಯಾರು? ಲಂಕೇಶ್ ಮಾತಾಡ್ತಿರೋದು" ಅಂದೆ; ಆಕೆ ಧ್ವನಿ ಎಳೆಯ ಧ್ವನಿಯಾಗಿತ್ತು.
"ದಯವಿಟ್ಟು ಕ್ಷಮಿಸಿ. ನಾನು ಯಾರು ಅಂತ ಹೇಳಲ್ಲ. ಅದು ನಿಮಗೆ ಮುಖ್ಯವೂ ಅಲ್ಲ. ನನ್ನ ಹೆಸರು ಕೇಳಿ ನಿಮಗೆ ಏನೂ ಪ್ರಯೋಜನವಿಲ್ಲ" ಅಂದಳು ಆಕೆ. ಅವಳ ಧ್ವನಿ ಭಾರವಾಗಿತ್ತು. ಇಂಗ್ಲಿಷ್ ನಲ್ಲಿ ಮಾತಾಡ್ತಿದ್ದಳು.
" ಸರಿ, ಹೆಸರು ಹೇಳಬೇಡಿ, ಏನು ಬೇಕಿತ್ತು?" ಅಂದೆ.
"ಏನಿಲ್ಲ. ತುಂಬ ಬ್ಯುಸಿಯಾಗಿದ್ದೀರಾ? ನಿಮಗೆ ತೊಂದರೆ ಕೊಡೋಕೆ ನನಗೆ ಇಷ್ಟವಿಲ್ಲ" ಅಂದಳು.
"ಹಾಗೇನಿಲ್ಲ, ಎಲ್ಲಿಗೋ ಹೊರಟಿದ್ದೆ. ಪರವಾಗಿಲ್ಲ, ಮಾತಾಡಿ" ಅಂದೆ.
" ತುಂಬ ಬೇಸರವಾಗಿದೆ. ಮೈಪರಚಿಕೊಳ್ಳೋ ಏಕಾಂಗಿತನ. ಐದು ನಿಮಿಷದಿಂದ ಸುಮ್ಮನೆ ಅಳ್ತಾ ಕೂತಿದ್ದೇನೆ. ನನ್ನ ಮೆಚ್ಚಿನ ಕವಿ ಖಲೀಲ್ ಗಿಬ್ರಾನನ ಪದ್ಯಗಳನ್ನು ಓದಿದೆ; ಆತ ಎಷ್ಟು ಒಳ್ಳೆಯ ಕವಿ, ಆದರೆ ಕೆಟ್ಟ ಮನುಷ್ಯ ಗೊತ್ತೆ- ದುಃಖದುಮ್ಮಾನವನ್ನೇ ಅಪ್ಪಿಕೊಳ್ಳುವಂತೆ, ಸದಾ ಅಳ್ತಿರುವಂತೆ ಮಾಡ್ತಾನೆ ಗಿಬ್ರಾನ್..."
"ನೀವು ವಿದ್ಯಾರ್ಥಿನಿ ಇರಬೇಕಲ್ಲವಾ?" ಅಂದೆ.
"ಅಲ್ಲ, ಅಮೇರಿಕ ವಿಶ್ವವಿದ್ಯಾನಿಲಯದ ಒಂದು ಇಲಾಖೆಗಾಗಿ ಇಲ್ಲಿ ಸಂಶೋಧನೆ ನಡೆಸುವ ಹುಡುಗಿ ನಾನು. ಒಮ್ಮೊಮ್ಮೆ ತುಂಬ ಬೇಸರವಾಗುತ್ತೆ... ಇವತ್ತು ಎಷ್ಟು ಬೇಸರವಾಯಿತೆಂದರೆ ಯಾರಾದರೊಬ್ಬರೊಂದಿಗೆ ಮಾತಾಡಲೇಬೇಕು ಅನ್ನಿಸಿನಿಗೆ ಫೋನ್ ಮಾಡಿದೆ. ನನ್ನನ್ನ ಖುಷಿಪಡಿಸಿ, ನನಗೆ ಜೀವಿಸುವ ಆಶೆ ಕೊಡಿ. ದಯವಿಟ್ಟು ನನ್ನ ಮನಸ್ಸು ನೋಯಿಸಬೇಡಿ. ಹೇಳಿ, ಈ ಜೀವನ ನಡೆಸೋದ್ರಿಂದ ಏನಾದ್ರೂ ಪ್ರಯೋಜನವಿದೆಯೆ?"
ಹಾಗೆಂದು ಹೇಳಿ ಗಟ್ಟಿಯಾಗಿ ಅತ್ತಳು ಹುಡುಗಿ.
"ನೋಡು ಮರಿ, ನೀನು ಯಾರು, ನಿನ್ನ ಹಿನ್ನಲೆ ಏನು ಅಂತ ಗೊತ್ತಿಲ್ಲದೆ ಸುಮ್ಮಸುಮ್ಮನೆ ಹುಚ್ಚನ ಹಾಗೆ ನಗು, ನಗು ಅಂತ ಹೇಳುವವ ನಾನಲ್ಲ, ನಿನ್ನಂತೆಯೇ ನನಗೂ ಅನೇಕ ಸಲ ತೀವ್ರ ಬೇಸರ ಆಗಿದೆ; ಆದರೆ ನಾನು ಸುಖ, ದುಃಖವನ್ನು ಎಷ್ಟು ಗಾಢವಾಗಿ ಅನುಭವಿಸಿದ್ದೇನೆ ಅಂದ್ರೆ, ಈಗ ಕೂತು ಬೇಸರ ಪಡೋಕೆ ಕೂಡ ವೇಳೆ ಇಲ್ಲದಷ್ಟು ಕೆಲಸ ಮಾಡುವ ಕಲೆಯನ್ನು ಕಲ್ತಿದೇನೆ..."
"ಹಾಗಾದ್ರೆ ನಾನು ಸಂತೋಷವಾಗಿ ಸದಾ ಮಾಡಬಹುದಾದ ಕೆಲಸ ಹೇಳಿ..."
ನಾನು ನಕ್ಕು ಕೇಳಿದೆ, "ನೀನು ಯಾರನ್ನೂ ಪ್ರೀತಿಸ್ತಿಲ್ಲವಾ? ನಿನ್ನೆದುರು ನಿಂತು 'ನಾನಿದ್ದೇನೆ, ನಿನ್ನ ವ್ಯಸನವನ್ನೆಲ್ಲ ನನಗೆ ಕೊಡು' ಎನ್ನುವಂಥ ಗೆಳೆಯನಿಲ್ಲವೇ?"
"ನಾನು ನಿಜಕ್ಕೂ ನಂಬಬಹುದಾದ ಗೆಳೆಯ ಸಿಕ್ಕಿಲ್ಲ" ಎಂದು ಮೊತ್ತಮೊದಲಬಾರಿಗೆ ನಕ್ಕು ಹೇಳಿದಳು. "ತಪ್ಪು ತಿಳಿಯಬೇಡಿ, ಆ ಗೆಳೆಯ ನೀವೇ ಆಗಿದ್ದರೆ?" ಅಂದಳು ಹುಡುಗಿ.
"ಹುಚ್ಚು ಹುಡುಗಿ. ನಾನು ಎಲ್ಲ ಸಿಕ್ಕು, ತೊಂದರೆಗಳಿಂದ ಹೊರಬರುತ್ತಿರುವ ಮನುಷ್ಯ; ಬಿಸಿಲುಗುದುರೆಗಳ ಬೆನ್ನು ಹತ್ತಿ ಓಡಾಡುವ ಕಾಲ ಮುಗಿಯಿತು. ಕೇಳ್ತಿದ್ದೀಯ ಮರಿ? ನನಗೆ ನಿನ್ನ ವಯಸ್ಸಿನ ಮಕ್ಕಳಿದ್ದಾರೆ; ದೂರದ, ಹತ್ತಿರದ ಗೆಳತಿಯರಿದ್ದಾರೆ, ಅವರೆಲ್ಲರೂ ಒಂದು ಮಟ್ಟದಲ್ಲಿ ನಿನ್ನಷ್ಟೇ ಅಪರಿಚಿತರು; ಇನ್ನೊಂದು ಮಟ್ಟದಲ್ಲಿ ನನ್ನೊಂದಿಗೆ ಮಾತಾಡುವ, ನನ್ನೊಡನೆ ಓಡಾಡುವ, ನನ್ನ ಮೌನವನ್ನು ಕೂಡ ಹಂಚಿಕೊಳ್ಳುವ ಜನ. ಈ ಜೀವನದಲ್ಲಿ ಏನಾಗುತ್ತೆ ಗೊತ್ತ? ನೀನು ಪುಣ್ಯವಂತೆಯಾಗಿದ್ದರೆ, ನಿನಗೆ ಎರಡು ಅಮೂಲ್ಯ ವಸ್ತುಗಳು ಸಿಗುತ್ತವೆ. ಒಂದು, ನೀನು ನಿನ್ನ ಪೂರ್ತಿ ವ್ಯಕ್ತಿತ್ವವನ್ನು ತೊಡಗಿಸಿ ಮಾಡುಬಲ್ಲ ಕೆಲಸ; ಅದು ನಿನ್ನನ್ನು ಬೆಳೆಸುವ ಜೊತೆಗೇ ನಿನಗೆ ಪ್ರೀತಿ, ವಿಶ್ವಾಸವನ್ನೆಲ್ಲ ತರುತ್ತದೆ; ನಿನ್ನ ಸುತ್ತಣ ಬದುಕಿಗೆ ನೀನು ನೆರವಾಗುವ ಬಗ್ಗೆ ನಿನಗಿರುವ ಅಹಂಕಾರಕ್ಕಿಂತ ಹೆಚ್ಚಾಗಿ ನಿನಗೆ ಬದುಕು ನೀಡಿದ ಕ್ರಿಯಾಶೀಲ ಸಂತೋಷದ ಬಗ್ಗೆ ನಿನ್ನಲ್ಲಿ ಕೃತಜ್ಞತೆ ಹುಟ್ಟುತ್ತೆ. ಆ ಕೃತಜ್ಞತೆಯತ್ತ ನಡೆದಿರುವ ಮನುಷ್ಯ ನಾನು. ಹಳ್ಳಿಯ ಮುಕ್ಕನಾಗಿ ಹುಟ್ಟಿದ ನಾನು ನನ್ನ ಕೆಲಸವನ್ನು ಹುಡುಕಿದೆ; ಅನೇಕ ತಪ್ಪುಗಳನ್ನು, ಸರಿಗಳನ್ನು ಮಾಡಿದೆ; ನಾನೇ ನನ್ನ ಮಾರ್ಗದರ್ಶಕನಾಗಿದ್ದೆ... ಅಥವಾ ನಾನು ಹುಟ್ಟಿದ ಹಳ್ಳಿ ನನ್ನನ್ನು ಬಿಡದ ಆ ಮಲೆನಾಡಿನ ಪರಿಸರ ನನ್ನನ್ನು ನಡೆಸಿತೋ ಗೊತ್ತಿಲ್ಲ. ಅಲ್ಲದೆ, ನಾನು ಸರಿಯಾದ ಮಾರ್ಗದಲ್ಲಿದ್ದೇನೋ ಇಲ್ಲವೋ ಯಾರಿಗೆ ಗೊತ್ತು? ಆದರೆ ನನ್ನ ಕೆಲಸದಿಂದ ನನಗೆ ಅಪಾರ ಸಂತೋಷ ದೊರೆಯುತ್ತಿರುವುದು ಗೊತ್ತು... ಕೇಳ್ತಿದೀಯಾ ಮರಿ? ಕೃತಜ್ಞತೆ ಎರಡನೆಯ ಮುಖ್ಯ ಅಂಶ..."
"ಕೇಳ್ತಿದೇನೆ. ನನ್ನ ಬೇಸರ ಕಡಿಮೆಯಾಗ್ತಿದೆ. ಹೇಳಲಾ? ನಾನು ನಾಟಕಗಳಲ್ಲಿ ನಟಿಸಬೇಕೆಂದು ಬೆಂಗಳೂರಿನ ಇಂಗ್ಲಿಷ್ ನಾಟಕ ತಂಡದಲ್ಲಿದ್ದೆ. ಅಲ್ಲ ಎಷ್ಟು ಸಣ್ಣ ಜನರಿದ್ದಾರೆ ಅಂದ್ರೆ, ನಾನು ಮದ್ರಾಸಿನಿಂದ ಒಂದು ನಾಟಕದ ಸ್ಕ್ರಿಪ್ಟ್ ತರಿಸಿಕೊಡಲಿಲ್ಲ ಎಂದು ನಿರ್ದೇಶಕನೊಬ್ಬ (ಅವನ ಹೆಸರು ಹೇಳಿದಳು) ನನ್ನ ಮೇಲೆ ಕೋಪಗೊಂಡ ಬೈದ. (ಆಗ ನಾನು ಇಂಗ್ಲಿಷ್ ನಾಟಕಗಳ ಶ್ರೀನಿವಾಸಗೌಡರ ಬಗ್ಗೆ ಹೇಳಿದೆ) ಗೊತ್ತು, ಅವರೂ ಗೊತ್ತು. ನನಗೆ ಇವರೆಲ್ಲರಿಂದ ಯಾವ ನೆಮ್ಮದಿಯೂ, ಪ್ರೋತ್ಸಾಹವೂ ಸಿಗಲಿಲ್ಲ" ಅಂದು ನಕ್ಕಳು.
"ಹೀಗೆ ನಾವಿಬ್ಬರೂ ಹೆಸರುಗಳನ್ನು ಹೇಳ್ತಾ ಹೋದ್ರೆ ನನಗೆ ನಿನ್ನ ಹೆಸರು ಊಹಿಸೋದು ಸುಲಭವಾಗುತ್ತೆ. ಅದೆಲ್ಲಬೇಡ. ನಿನ್ನ ತೀವ್ರ ದುಃಖದ ವೇಳೆಯಲ್ಲಿ ನನಗೆ ಫೋನ್ ಮಾಡಿದ್ದಕ್ಕೆ, ಆ ನಿನ್ನ ವಿಶ್ವಾಸಕ್ಕೆ ನನಗೆ ಸಂತೋಷವಾಗಿದೆ. ನಿನಗೆ ಯಾವುದೇ ರೀತಿಯ ಮಾನಸಿಕ ನೆರವು ಬೇಕಾದರೆ ಫೋನ್ ಮಾಡು; ಮತ್ತು ದಯವಿಟ್ಟು ನೆನಪಿಡು, ಬದುಕು ಮೂಲಭೂತವಾಗಿ ಸ್ವಾರ್ಥಿಗಳಿಂದ ಕೂಡಿದ್ದು; ಈ ಸ್ವಾರ್ಥದ ಗುಹೆಯಲ್ಲಿ ಖಾಸಗಿ ವಲಯವನ್ನು, ಪ್ರೀತಿ ವಿಶ್ವಾಸದ ಗೂಡುಗಳನ್ನು ಕಟ್ಟಿಕೊಳ್ಳಬೇಕು; ನಮ್ಮ ಸುಖವನ್ನು ನಮ್ಮ ಅಂತರಾಳದಲ್ಲಿ ಕಾಣುವ ಕಲೆಯನ್ನು ಬೆಳಸಿಕೊಳ್ಳಬೇಕು. ಆದರೆ ಈ ಖಾಸಗಿ ಗ್ರಹಿಕೆಗೆ ಹೊರಜಗತ್ತು ಅನುಭವಗಳನ್ನು ಕೊಡಬೇಕು. ಆಗಲೇ ಸಂಬಂಧಗಳು ಮುಖ್ಯವಾಗೋದು... ನೋಡು, ಎಷ್ಟೇ ಕಿರಿಕಿರಿ, ಬೇಸರ, ಅವಮಾನವೆಲ್ಲ ಇದ್ರೂ ಈ ಜೀವನ ನಿಜಕ್ಕೂ ಜೀವಿಸಲು ಯೋಗ್ಯವಾಗಿದೆ, ಸುಂದರ ಕೂಡ ಆಗಿದೆ, ಇವತ್ತು ಸಂಜೆ ಆಕಾಶದತ್ತ ನೋಡಿದೆಯಾ ಆಕಾಶ ಎಷ್ಟು ಸ್ವಚ್ಛವಾಗಿ ಅಸಂಖ್ಯಾತ ನಕ್ಷತ್ರಗಳ ನಗೆಯಿಂದ ತುಂಬಿತ್ತು. ಈ ಬದುಕಿನಲ್ಲಿ ಒಂದು ಕಾಸನ್ನೂ ಕೂಡ ಕೇಳದೆ ಎಷ್ಟೊಂದು ವಸ್ತುಗಳು ಎಷ್ಟು ತೀವ್ರ ಸಂತೋಷ ಕೊಡುತ್ತವೆ... ಅಂದಹಾಗೆ, ಒಳ್ಳೆಯ ಹುಡುಗನನ್ನು ಪತ್ತೆಹಚ್ಚಿ ಹೆಮ್ಮೆಯಿಂದ ಪ್ರೀತಿಸುವುದನ್ನು ಮರೆಯಬೇಡ. ತುಂಬ ಒಳ್ಳೆಯ ಹುಡುಗರು, ಪ್ರೀತಿಗೆ, ಸ್ನೇಹಕ್ಕೆ ಯೋಗ್ಯವಾದವರು, ನಿನ್ನಷ್ಟೇ ಒಬ್ಬಂಟಿಯಾದವರು ಇದ್ದಾರೆ. ಅವರನ್ನು ತೀರಾ ಕಾಯಿಸಬಾರದು..." ಎನ್ನುತ್ತಿದ್ದಂತೆ ಕುಲುಕುಲು ನಕ್ಕಳು ಹುಡುಗಿ. ಆಕೆಯ ನಗೆ ಮುಗಿಯುವಷ್ಟರಲ್ಲಿ "ಬೈ" ಎಂದು ಹೇಳಿ ಫೋನ್ ಇಟ್ಟು ಹೊರಟೆ.