Thursday, October 2, 2008

ಗಾಂಧೀಸ್ಮರಣೆ




ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ

ಈಗ ಶಾಂತಿ ನೆಲೆಸಿದೆ.

ನರನಾಡಿಯೆಲ್ಲ ನಿಂತೇ ಹೋದಂತಾಗಿ

ನಾವೆಲ್ಲ ಯೋಗಿಗಳಾಗಿದ್ದೇವೆ:

ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ

ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.

-

ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು

ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ.

ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ

ಈಗ ಕೈಗೆ ಸಿಗದಂತಾಗಿವೆ.

ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.

ಭಾರತದ ಜನಸಂಖ್ಯೆ ಇಳಿಯುತ್ತಿದೆ.

-

ನಾಳಿನ ನಾಗರಿಕರಾದ ಇಂದಿನ ಮಕ್ಕಳೆಲ್ಲ

ಸರಿಯಾಗಿ ಸಾಲೆಗೆ ಹೋಗಿ

ಒಂದು ಎರಡು ಬಾಳೆಲೆ ಹರಡು

ಕಲಿಯುತ್ತಿದ್ದಾರೆ.

ಹಸಗಂಡು ಮನೆಗೆ ಬಂದು

ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.

-

ಜಾಣ ಬಾಬಾಗಳಿಗೆ ಹುಚ್ಚಗೌಡರ ಬೆನ್ನುಸಿಕ್ಕು

ಧೂರ್ಮೋದ್ಧಾರದ ಸವಾರಿ ಮುನ್ನಡೆದಿದೆ.

ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ

ಅವರ ಉದ್ಧಾರವೂ ಆಗುತ್ತಿದೆ.

-

ಸರಕಾರದ ಕೆಲಸ ದೇವರ ಕೆಲಸವಾಗಿ

ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ.

ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ

ಜಿಟಿ ಜಿಟಿ ಮಳೆ ಹಿಡಿದಿದೆ.

ನಮ್ಮ ತ್ರಿವರ್ಣ ಧ್ವಜ ತೊಯ್ದು ತುಪ್ಪಡಿಯಾಗಿ

ಅಶೋಕ ಚಕ್ರ ಸ್ಥಿರವಾಗಿದೆ.

-

ಹೆದ್ದಾರಿಯ ಮೇಲೆ ಕೆಟ್ಟುನಿಂತ ಟ್ರಕ್ಕು ಕೂಡ

ನಾಡ ಮುನ್ನಡೆದಿದೆ- ಎಂಬ ಸಂದೇಶ ಹೊತ್ತಿದೆ.

ರೇಡಿಯೋದ ಗಿಳಿವಿಂಡು, ಅದೋ,

ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.

ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,

ಕಿವಿ ಮುಚ್ಚಿ, ಕಣ್ಣು ಮುಚ್ಚಿ,

ನೆನೆ ನೆನೆ ಗಾಂಧಿಯನು.

(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದಲಿಂಗ?)

ಬಾಯಿ ಮುಚ್ಚಿ,

ನೆನೆ ನೆನೆ ಗಾಂಧಿಯನು.

- ಚಂದ್ರಶೇಖರ ಪಾಟೀಲ

2 comments:

sugandhi said...

ಗಾಂಧಿಸ್ಮರಣೆ ಚೆನ್ನಾಗಿದೆ.

ಜಿ ಎನ್ ಮೋಹನ್ said...

ಅಕ್ಟೋಬರ್ ಎರಡರ ನಂತರ ಮಲ್ಲಿಕಾರ್ಜುನಸ್ವಾಮಿ ಕಾಣೆಯಾಗಿದ್ದಾರೆ. -ಜಿ ಎನ್ ಮೋಹನ್