Tuesday, October 21, 2008

ಕಲ್ಲರಳಿ ಕಾಮೋತ್ಸವ

ಮೊನ್ನೆ ಭಾನುವಾರ ಬೆಳಗಿನ ಜಾವ ನಾಲ್ಕಕ್ಕೆಲ್ಲ ಕ್ಯಾಮೆರಾ ಏರಿಸಿಕೊಂಡು ಯಾರಿಗೂ ಹೇಳದೆ ಸೋಮನಾಥಪುರಕ್ಕೆ ಹೊರಟುಬಿಟ್ಟೆ. ಕಳೆದವಾರ ಬಿಡುಗಡೆಯಾದ ಷ. ಶಟ್ಟರ್ ಅವರ 'ಸೋಮನಾಥಪುರ' ಪುಸ್ತಕ ಓದಿ ತುಂಬಾ ಪ್ರಭಾವಿತನಾಗಿ ಮಾಡಿದ ಕೆಲಸವಿದು. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗುವ ಸಾಕಸ್ಟು ಬಸ್ಸುಗಳು ಮಳವಳ್ಳಿಯಲ್ಲಿ ನಿಲ್ಲಿಸುತ್ತವೆ. ಮಳವಳ್ಳಿಯಿಂದ ಬನ್ನೂರಿಗೆ 20 ಕಿ.ಮೀ ಪ್ರಯಾಣ. ಬನ್ನೂರಿನಿಂದ ಸೋಮನಾಥಪುರ 8 ಕಿಲೋಮೀಟರ್. ಆ ರಸ್ತೆಗಳಲ್ಲಿ ಸ್ವಲ್ಪ ಬಸ್ಸಿನ ಪ್ರಯಾಣ ಕಷ್ಟವಾದರೂ ಸಹಿಸಿಕೊಂಡು ಒಂಬತ್ತು ಗಂಟೆಗೆಲ್ಲ ಸೋಮನಾಥಪುರ ತಲುಪಿದ್ದೆ.


ಸೋಮನಾಥಪುರ ವಾಸ್ತು-ಶಿಲ್ಪಕಲೆಯಲ್ಲಿ ಆಸಕ್ತಿ ಇರುವವರಿಗಂತೂ ಸ್ವರ್ಗ. ಬೇಲೂರು ಹಳೇಬೀಡಿನಷ್ಟು ವಿಶಾಲವಲ್ಲದಿದ್ದರೂ ತ್ರಿಕೂಟಗಳಲ್ಲೇ ಇದರಷ್ಟು ಸೌಂದರ್ಯವಾದ ದೇವಾಲಯ ಕರ್ನಾಟಕದಲ್ಲಿ ಮತ್ತೊಂದಿಲ್ಲ. ಈಗಾಗಲೇ ಷ. ಶೆಟ್ಟರರ ಪುಸ್ತಕ ಪರಿಚಯಿಸುತ್ತ ಸೋಮನಾಥಪುರ ದೇವಾಲಯದ ಬಗ್ಗೆ ಮಾಹಿತಿ ಕೊಟ್ಟಿದ್ದರಿಂದ ಇಲ್ಲಿ ಅದರ ಇತಿಹಾಸ ಹೆಚ್ಚು ಹೇಳದೆ ನನಗೆ ಸೋಮನಾಥಪುರ ದೇವಾಲಯದಲ್ಲಿ ಆಕರ್ಷಿಸಿದ ಮಿಥನು ಶಿಲ್ಪಗಳ ಬಗ್ಗೆ ಶೆಟ್ಟರ್ ನೀಡಿರುವ ಮಾಹಿತಿಯನ್ನು ಮತ್ತು ಫೋಟೋಗಳನ್ನು ನಿಮಗೆ ನೀಡುತ್ತಿದ್ದೇನೆ.











ಭಾರತೀಯ ಗೃಹಸ್ಥನ ನಾಲ್ಕು ಪುರುಷಾರ್ಥಗಳು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಇವುಗಳಲ್ಲಿ ಯಾವುದಾದರೊಂದರ ಕೊರತೆ ಇದ್ದರೆ ಅಂಥವನ ಜೀವನವು ಅರ್ಪೂಣ ಅಥವಾ ಅಸಮರ್ಥ ಎಂಬ ನಿಯಮವಿದೆ. ಈ ಪರಂಪರೆಯಲ್ಲಿ 'ಕಾಮ' ಒಂದು ಕಲೆಯೂ ವಿಜ್ಞಾನವೂ ಎನಿಸಿರುವುದು. ನಮ್ಮ ಪುರಾತನ ಋಷಿಗಳೇ ಕಾಮಕಲೆಯನ್ನು ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದು. ಅವುಗಳಲ್ಲೆಲ್ಲ ಪ್ರಸಿದ್ಧವಾದ ಗ್ರಂಥವೆಂದರೆ ವಾತ್ಸಾಯನ ಮುನಿಯ 'ಕಾಮಸೂತ್ರ'. ಹಿಂದೂ ದೈವಗಳಲ್ಲಿ, ಪ್ರೇಮ-ಕಾಮದ ಅಧಿದೇವತೆಯಾದ ಕಾಮನಿಗೆ ಗೌರವಯುತ ಸ್ಥಾನವಿದೆ. ಅವನನ್ನು ಕಂದರ್ಪ, ಮದನ, ಮನ್ಮಥ ಎಂಬೆಲ್ಲ ಹೆಸರುಗಳಿಂದ ಗುರುತಿಸಲಾಗಿದೆ.

ಕಾಮದೇವತೆ: ಕಾಮದೇವತೆಯ ಪ್ರಧಾನ ಲಾಂಛನಗಳೆಂದರೆ ಇಕ್ಷುಚಾಪ ಅಥವಾ ಕಬ್ಬಿನ ಬಿಲ್ಲು ಮತ್ತು ಪಂಚಬಾಣ ಅಥವಾ ಐದು ಹೂಬಾಣಗಳು. ಇವುಗಳನ್ನು ಪ್ರಯೋಗಿಸಿ ಯಾರನ್ನು ಬೇಕಾದರೂ ಕಾಮ ಘಾಸಿಗೊಳಿಸಬಲ್ಲನೆಂಬುದು ನಂಬಿಕೆ. ಕಾಮನ ಪತ್ನಿ ರತಿ; ವಾಹನ ಶುಕ (ಗಿಳಿ). ರತಿ ಮತ್ತು ಮನ್ಮಥ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ದ್ವಾರಶಾಖೆಗಳ ಮೇಲೆ, ಅದರಲ್ಲೂ ಗರ್ಭಗುಡಿಯ ದ್ವಾರದ ಮೇಲೆ ಪ್ರದರ್ಶಿಸುವುದುಂಟು.

ಲೈಂಗಿಕ ಪ್ರಭೇದಗಳು : ಹೊಯ್ಸಳ ದೇವಾಲಯಗಳಲ್ಲಿ ಸಾಮಾನ್ಯವಾಗಿ ಮೂರು ಬಗೆಯ ಮಿಥುನ ಶಿಲ್ಪಗಳನ್ನು ಕಾಣುವೆವು. ತಮ್ಮ ದೈಹಿಕ ಸೊಬಗನ್ನು ಪ್ರದರ್ಶಿಸುವ ನಗ್ನ (ವಿಶೇಷವಾಗಿ ಸ್ತ್ರೀ) ಶಿಲ್ಪ; ಎರಡು, ನಗ್ನವಾಗಿರುವ ಅನುರಾಗಿಗಳ ಶಿಲ್ಪ; ಮೂರು, ಪರಿಪೂರ್ಣ ನಗ್ನವಾಗಿದ್ದು ನಿರ್ಭಿಡೆಯಿಂದ ಲೈಂಗಿಕ ಕ್ರೀಡೆಯಲ್ಲಿ ತೊಡಗಿದವರ ಶಿಲ್ಪ. ಮೂರನೆಯ ಗುಂಪಿನ ಶಿಲ್ಪಗಳನ್ನು ಸಾಮಾನ್ಯವಾಗಿ ಕಟಾಂಜಣದ ಮೇಲ್ಭಾಗದಲ್ಲಿ ಕಾಣುವೆವು, ಅಲ್ಲದೆ ಅವುಗಳನ್ನು ಸೂಕ್ಷ್ಮಲತಾ ಸುರುಳಿಗಳಲ್ಲಿ ಪೋಣಿಸಿಕೊಂಡಿರುವುದನ್ನೂ ಮಾಡದ ಅರ್ಧಗೋಡೆಗಳಲ್ಲಿ ಹಾಗೂ ದೇವಾಲಯದೊಳಗಿನ ಭುವನೇಶ್ವರಿಗಳಲ್ಲಿ ನುಸಳಿಕೊಂಡಿರುವುದನ್ನೂ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಬಹುದು. ಕೆಲವು ಬಾರಿ ಇವನ್ನು ಕಂಬಗಳ ಮೇಲೆಯೂ ನೋಡಬಹುದು. ಧಾರ್ಮಿಕ ಅವಶ್ಯಕತೆಯಿಂದಾಗಿ ಈ ಸಂಪ್ರದಾಯವನ್ನು ದಾಟಿ, ಬೃಹತ್ ಪ್ರಮಾಣದ ನಗ್ನ ಪುರುಷರ ಶಿಲ್ಪಗಳನ್ನು ಕೂಡ ಅಪರೂಪವಾಗಿ ಕಾಣುವೆವು. ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯಲ್ಲಿಯ ಶಿಲ್ಪಗಳು ಇದಕ್ಕೆ ನಿದರ್ಶನ. ಆದರೆ ಇವು ಬಹಿರಂಗವಾಗಿ ಲೈಂಗಿಕ ಕ್ರೀಡೆಯನ್ನು ಪ್ರದರ್ಶಿಸುವುದಿಲ್ಲ.

ಲೈಂಗಿಕ ಸಾಮರ್ಥ್ಯದ ಬಗ್ಗೆ ಹೆಮ್ಮೆ: ಸದೃಢನೂ ಸುಂದರನೂ ಆದವನು ತನ್ನನ್ನು ತಾನು ಕಾಮದೇವತೆಯೊಡನೆ ಹೋಲಿಸಿಕೊಳ್ಳುವುದು ಅಂದಿನ ಕಾಲದಲ್ಲಿ ಹೆಮ್ಮೆಯ ವಿಷಯವೆನಿಸಿತ್ತು. ಶಾಸನಗಳಲ್ಲಿ ಅರಸ ನರಸಿಂಹನನ್ನು 'ಅಪೂರ್ವ ರೂಪಕಂದರ್ಪ' ಎಂದೂ ಸೋಮನಾಥ ದಂಡನಾಯಕನನ್ನು ಅವನ ಮಡದಿ ರೇವಲಿಗೆ 'ಮನ್ಮಥ'ನಾಗಿದ್ದನೆಂದು ಗುಣಗಾನಮಾಡಲಾಗಿದೆ.

ಕಾಮ ಮತ್ತು ರತಿ: ಕೇಶವ ದೇವಾಲಯದ ಹೊರಗೋಡೆಯ ಎರಡು ಶಿಲಾಫಲಕಗಳನ್ನು ಶಿಲ್ಪಿ ಮಸಣಿತಮ ಕೊರೆದಿದ್ದು ಅವು ಇಕ್ಷುಚಾಪ ಮತ್ತು ಪಂಚಬಾಣಗಳನ್ನು ಹಿಡಿದ ಮನ್ಮಥನನ್ನು ಪ್ರದರ್ಶಿಸುವುವು. ಮತ್ಸ್ಯಧ್ವಜವನ್ನು ಹಾರಿಸುತ್ತಾ ಕಾಮ ಕೆರಳಿಸುವ ವಸಂತಲಕ್ಷ್ಮಿ, ಬಾಯಲ್ಲಿ ನೀರೂರಿಸುವ ಭಕ್ಷ ಪಾತ್ರೆಯನ್ನು ಹಿಡಿದ 'ಪ್ರೀತಿ' ಮತ್ತು ಕಾಮ ಪ್ರಚೋದಿಸುವ 'ರತಿ' ಮನ್ಮಥನ ಬಳಿ ನಿಂತಿರುವರು.

ಶಿಲ್ಪ ರೂಪಾಂತರಗಳು : ಲೈಂಗಿಕ ಶಿಲ್ಪಗಳು ಕಾಮಶಾಸ್ತ್ರದಲ್ಲಿ ವಿವರಿಸಿರುವ ಕೆಲವು ಪಟ್ಟುಗಳನ್ನು ಚಿತ್ರಿಸುವುದು. ಕಾಮವನ್ನೊಳಗೊಂಡ ಉಳಿದ ಮೂರು ಪುರುಷಾರ್ಥಗಳ ಮಹತ್ವವನ್ನು ಸ್ಪಷ್ಟಪಡಿಸುವುದು ಈ ಶಿಲ್ಪಗಳ ಉದ್ದೇಶವಾಗಿದೆ. ಇಂತಹ ಲೈಂಗಿಕ ಪ್ರದರ್ಶನವನ್ನು ಶೈವ, ವೈಷ್ಣವ ಮತ್ತು ಶಾಕ್ತ ದೇವಾಲಯಗಳಲ್ಲಿ ಮಾತ್ರವಲ್ಲದೆ, ಜೈನ, ಬೌದ್ಧ ಹಾಗೂ ಗ್ರಾಮದೇವತೆಗಳ ಮಂದಿರಗಳಲ್ಲೂ ಕಾಣಬಹುದು. ಈ ಶಿಲ್ಪಗಳು ಗರ್ಭಫಲವತ್ತತೆಯನ್ನು ಸಂಕೇತಿಸುವುವೆಂಬ ವಾದವೂ ಇದೆ.

ಜಾನಪದ ನಂಬಿಕೆಗಳು: ಲೈಂಗಿಕ ಕ್ರೀಡೆಯ ನಿರೂಪಣೆಯ ಬಗ್ಗೆ ಕೆಲವು ಬಗೆಯ ಸಾಮಾನ್ಯ ನಂಬಿಕೆಗಳು ಜನಸಮುದಾಯದಲ್ಲಿ ಬೇರುಬಿಟ್ಟಿವೆ. ಈ ಶಿಲ್ಪಗಳು ದೃಷ್ಟಿ ದೋಷದಿಂದ ರಕ್ಷಿಸುವ ಶಕ್ತಿ ಹೊಂದಿವೆಯೆಂದೂ ಅವು ಬಾಲಿಶರಿಗೆ ಅದರಲ್ಲೂ ಬಾಲ್ಯವಿವಾಹಿತರಿಗೆ ಲೈಂಗಿಕ ಪಾಠವನ್ನು ಭೋದಿಸುವ ಮಾಧ್ಯಮಗಳಾಗಿದ್ದವೆಂದೂ ವಾದಿಸಲಾಗಿದೆ. ಹೊರಭಿತ್ತಿಯ ಮೇಲೆ ಮೂಡಿಸಿರುವ ಮಹಾಕಾವ್ಯದ ಮುಂತಾದವುಗಳ ಘಟನೆಗಳನ್ನು ಪರಿಚಯಿಸಿಕೊಡುವುವೋ, ಅದೇ ಬಗೆಯಲ್ಲಿ ನವ ವಿವಾಹಿತರಿಗೆ ಈ ಶಿಲ್ಪಗಳು ಲೈಂಗಿಕ ಕಲೆಯ ಸೂಕ್ಷ್ಮತೆಗಳನ್ನು ಪರಿಚಯಿಸಿಕೊಡುವವೆನ್ನಲಾಗಿದೆ. ಇದು ಏನೇ ಇರಲಿ, ಚಿತ್ತವನ್ನು ವಿಶೇಷವಾಗಿ ಸೆಳೆದು, ಅವರಲ್ಲಿ ಸಂಸಾರಿಕ ಕುತೂಹಲವನ್ನು ಪಡೆದಿವೆ ಮತ್ತು ಆ ಮೂಲಕ ಅವರನ್ನು ಖುಷಿಪಡಿಸುವ ಶಕ್ತಿಯನ್ನು ಈ ಶಿಲ್ಪಗಳು ಪಡೆದಿವೆ ಎಂಬುದನ್ನು ಒಪ್ಪಲೇಬೇಕು. ಈ ಕಾರಣಗಳಿಂದಾಗಿ ಪುರಾತನ ಮತ್ತು ಮಧ್ಯಕಾಲೀನ ಅರಮನೆ ಮತ್ತು ಮಹಾಮನೆಗಳಲ್ಲಿ ಕೂಡಾ ಬಗೆಬಗೆಯ ಲೈಂಗಿಕ ಭಿತ್ತಿಚಿತ್ರಗಳನ್ನು ಬಿಡಿಸುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

7 comments:

ರಾಜೇಶ್ ನಾಯ್ಕ said...

ಅಬ್ಬಾ!!! ತುಂಬಾ ಗಹನವಾಗಿ ಸ್ಟಡಿ ಮಾಡಿದ್ದೀರಾ. ಒಳ್ಳೆಯದೇ ಆಯಿತು. ಮಿಥುನ ಶಿಲ್ಪಗಳ ಕೆತ್ತುವಿಕೆಯ ಹಿಂದಿರುವ ವಿಚಾರ - ಯೋಚನೆ ತಿಳಿಯಿತು.

ಜಿ ಎನ್ ಮೋಹನ್ said...

ಚೆನ್ನಾಗಿದೆ
ಮಿಥುನ ಶಿಲ್ಪಗಳ ಮುಂದೆ ಏಕಾಂಗಿ ಎಂದು ತಲೆಬರಹ ಕೊಡಬಹುದಿತ್ತು..
-ಜಿ ಎನ್ ಮೋಹನ್

Anonymous said...

Mohanji,
Manju wants to get married at the earliest. He has set a deadline too. Kindly help him to keep the deadline.
- Mushturu Kotturappa

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇಯುಗೇ ಅಂತ. ಬಿಡುವಾದಾಗ ನೋಡಿ

Anonymous said...

ಮಿತ್ರ ಸ್ವಾಮಿ,
ಒಬ್ಬಂಟಿಯಾಗಿ ಅಲ್ಲೇಲ್ಲಾ ಹೋಗಬಾರದು. ಏನೋ ಈಗ ಕ್ಯಾಮೆರಾ ಸಂಗಾತಿ ಇತ್ತು ಪರವಾಗಿಲ್ಲ. ಮುಂದಿನಬಾರಿ ಸಂಗಾತಿಯೊಂದಿಗೆ ಹೋಗಿ ಬನ್ನಿ.
ಸಾಗರದ ಬಳಿಯ ನಾಡಕಲಸಿಯಲ್ಲಿ ಕಾಮಸೂತ್ರದ ಸುಮಾರು 32 ಭಂಗಿಗಳು ಇವೆ. ಇದು ಮಾಹಿತಿಗಾಗಿ. ಹೊಯ್ಸಳರು ತುಂಬಾ ರಸಿಕರು ಅಲ್ಲವೇ? ಅಲ್ಲಿಗೂ ಹೋಗಿ ಬನ್ನಿ.
ಗುಡ್ ಲಕ್!
ಬೇದ್ರೆ

shivu.k said...

ತುಂಬಾ ಚೆನ್ನಾಗಿ ಬರೆದಿದ್ದೀರಿ. ಬರವಣಿಗೆಯ ಹಿಂದೆ ಮಾಹಿತಿ ಕಲೆ ಹಾಕುವ ಪರಿಶ್ರಮ ಕಾಣುತ್ತದೆ. ಫೋಟೊಗಳನ್ನು ಚೆನ್ನಾಗಿ ತೆಗೆದಿದ್ದೀರಿ. ಮುಂದುವರಿಸಿ.
ಶಿವು.ಕೆ

Anonymous said...

Ustaad antha nanna hesaru. Hudugarige patha helthini. Yava meshtru nimge kannada kalisikottiddu dayavittu heltira? 'Sereyidididdene' alla kano adu 'Sere hidididdene? Kannada sariyagi bari chinna.
Sittu bantha? Barli bidla?

Ustaad